ಚಿಕ್ಕಪ್ಪ, ಚಿಕ್ಕಮ್ಮನ ತಲೆ ಕತ್ತರಿಸಿ, ರುಂಡ-ಮುಂಡ ಬೇರೆ ಮಾಡಿ ತಾನು ನೇಣಿಗೆ ಶರಣು

ಮಡಿಕೇರಿ: ಆಸ್ತಿ ಕಲಹಕ್ಕೆ ಸಂಬಂಧಿಸಿದಂತೆ ಯುವಕನೊಬ್ಬ ತನ್ನ ಚಿಕ್ಕಪ್ಪ, ಚಿಕ್ಕಮ್ಮನನ್ನು ಕತ್ತಿಯಿಂದ ಕಡಿದು ಭೀಕರವಾಗಿ ಕೊಲೆ ಮಾಡಿ ಬಳಿಕ ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಆಲೂರು ಸಿದ್ದಾಪುರದಲ್ಲಿ ನಡೆದಿದೆ.

ನಿವೃತ್ತ ಪೊಲೀಸ್ ಪೇದೆ ಸೂದನ ಗಣೇಶ್(63) ಮತ್ತು ಪತ್ನಿ ಮೋಹಿನಿ (58) ಕೊಲೆಯಾದವರು. ಗಣೇಶ್ ಅಣ್ಣನ ಮಗ ದಿಲೀಪ್ (32) ಕೊಲೆ ಮಾಡಿದ ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆಸ್ತಿ ವಿಷಯಕ್ಕೆ ಸಂಬಂಧಿಸಿದಂತೆ ಗಣೇಶ್ ಮತ್ತು ದಿಲೀಪ್ ಕುಟುಂಬದ ಮಧ್ಯೆ ಹಿಂದಿನಿಂದಲೂ ಕಲಹಗಳು ನಡೆಯುತ್ತಿತ್ತು.

ಬುಧವಾರ ಸಂಜೆಯೂ ಗಲಾಟೆ ನಡೆದಿದ್ದು, ಗಣೇಶ್ ಕತ್ತನ್ನು ದಿಲೀಪ್ ಕತ್ತರಿಸಿದ್ದಾನೆ. ಈ ವೇಳೆ ತಡೆಯಲು ಬಂದ ಗಣೇಶ್ ಪತ್ನಿ ಮೋಹಿನಿಯ ಕತ್ತನ್ನೂ ನಿರ್ದಯವಾಗಿ ಕತ್ತರಿಸಿದ್ದಾನೆ. ಇಬ್ಬರ ರುಂಡ ಮುಂಡ ಬೇರೆ ಬೇರೆಯಾಗಿದೆ. ಅಷ್ಟರಲ್ಲಿ ಅಡ್ಡ ಬಂದ ಗಣೇಶ್ ಪುತ್ರ ಹರ್ಷಿತ್ (23) ಮೇಲೂ ದಿಲೀಪ್ ಕತ್ತಿಯಿಂದ ಹಲ್ಲೆ ಮಾಡಿದ್ದಾನೆ. ಮಾರಣಾಂತಿಕವಾಗಿ ಗಾಯಗೊಂಡು ಸಾವು ಬದುಕಿನ ಮಧ್ಯೆ ಹೋರಾಡುತ್ತಿರುವ ಹರ್ಷಿತ್‍ನನ್ನು ಆಸ್ಪತ್ರೆಗೆ ಸಾಗಿಸಲಾಗಿದೆ.

ಈ ಘಟನೆ ನಂತರ ಗಣೇಶ್ ಅವರ ಮನೆಯಲ್ಲೇ ದಿಲೀಪ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದ್ದು, ವೃತ್ತನಿರೀಕ್ಷಕ ನಂಜುಂಡೇ ಗೌಡ, ಠಾಣಾಧಿಕಾರಿ ತಿಮ್ಮಶೆಟ್ಟಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಂಜೆ ವೇಳೆ ತಮ್ಮ ಊರಿನಲ್ಲಿ ನಡೆದ ಭೀಕರ ಘಟನೆಯಿಂದ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ

Comments

Leave a Reply

Your email address will not be published. Required fields are marked *