ಒಂದೂವರೆ ವರ್ಷದ ಮಗುವನ್ನು ಸಾಯಿಸಿ ದಂಪತಿ ಆತ್ಮಹತ್ಯೆ!

ರಾಮನಗರ: ಸಾಲಬಾಧೆ ತಾಳಲಾರದೆ ಮಗುವನ್ನು ತಾವೂ ನೇಣಿಗೆ ಶರಣಾದ ಆಘಾತಕಾರಿ ಘಟನೆಯೊಂದು ಕನಕಪುರ ತಾಲೂಕಿನ ಲಕ್ಷ್ಮಿಪುರ ಗ್ರಾಮದಲ್ಲಿ ನಡೆದಿದೆ.

ಪತಿ ಸೋಮಶೇಖರ್ (36), ಪತ್ನಿ ಸುಧಾ (27) ಹಾಗೂ ಮಗು ಪ್ರೀತಂ ಮೃತರು. ಗೂಡಿನ ವ್ಯಾಪಾರ ಮಾಡಿಕೊಂಡಿದ್ದ ಮೃತ ಸೋಮಶೇಖರ್ ರೈತರ ಬಳಿ ಸಾಲಕ್ಕೆ ಗೂಡು ಖರೀದಿಸಿ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದರು.

ಕಳೆದ ಕೆಲವು ದಿನಗಳ ಹಿಂದೆ ರೈತರ ಬಳಿ ರೇಷ್ಮೆ ಗೂಡು ತೆಗೆದುಕೊಂಡಿದ್ದು, ಹಣ ನೀಡಿರಲಿಲ್ಲ. ಅಲ್ಲದೇ ವ್ಯಾಪಾರ ಕೂಡಾ ಕೈಕೊಟ್ಟು ಸುಮಾರು 3 ಲಕ್ಷದಷ್ಟು ಸಾಲ ಮಾಡಿಕೊಂಡಿದ್ದರು. ಸೋಮವಾರ ಮನೆಯ ಬಳಿ ಹಣಕ್ಕಾಗಿ ರೈತರು ಬಂದಿದ್ದು, ಹಣ ನೀಡದೇ ಇದ್ದದ್ದಕ್ಕೆ ಗಲಾಟೆ ಮಾಡಿದ್ದರು. ಈ ವಿಚಾರವಾಗಿ ಮನನೊಂದ ಸುಧಾ ಸಂಜೆ ವೇಳೆಗೆ ತನ್ನ ಮಗುವಿನ ಜೊತೆ ನೇಣು ಬಿಗಿದುಕೊಂಡಿದ್ದಾರೆ.

ನಂತರ ಮನೆಗೆ ಬಂದ ಸೋಮಶೇಖರ್ ಪತ್ನಿ ಹಾಗೂ ಮಗುವಿನ ಸಾವು ಕಂಡು ತಾನೂ ಸಹ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾರೆ. ಸಂಜೆ ಬಳಿಕ ಟ್ಯೂಷನ್ ಗೆ ಹೋಗಿದ್ದ ಸೋಮಶೇಖರ್ ಅವರ ಇನ್ನೋರ್ವ ಮಗಳು ಮನೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ.

ಕನಕಪುರ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Comments

Leave a Reply

Your email address will not be published. Required fields are marked *