ಇಬ್ಬರು ಮಕ್ಕಳ ಜೊತೆ ದಂಪತಿ ನೇಣು ಬಿಗಿದುಕೊಂಡು ಆತ್ಮಹತ್ಯೆ

ಬೆಂಗಳೂರು: ಅದೊಂದು ಸುಂದರ ಕುಟುಂಬ. ಬದುಕಿನಲ್ಲಿ ಕನಸು ಕಟ್ಟಿಕೊಂಡಿದ್ದ ಮಕ್ಕಳು. ಗಂಡ ಹೆಂಡತಿ ನಡುವೆ ಸಾಕಷ್ಟು ಪ್ರೀತಿ ಇತ್ತು. ಆದ್ರೆ ಅದೆನಾಯ್ತೋ ಏನೋ, ನಾಲ್ವರೂ ಈಗ ಸಾವಿನ ಮನೆ ಮುಟ್ಟಿದ್ದಾರೆ.

ಭಾನುವಾರದಂದು ಬೆಂಗಳೂರಿನ ಬೊಮ್ಮನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಹೊಂಗಸಂದ್ರದ ಮನೆಯಲ್ಲಿ ಗಂಡ ಹೆಂಡತಿ ಸೇರಿ ಇಬ್ಬರು ಗಂಡು ಮಕ್ಕಳು ಆತ್ಮಹತ್ಯೆಗೆ ಶರಣಾಗಿದ್ದಾರೆ. 45 ವರ್ಷದ ಜಗದೀಶ್, 44 ವರ್ಷದ ಪತ್ನಿ ಕಸ್ತೂರಿ, ಇಬ್ಬರು ಮಕ್ಕಳಾದ ವಿನೋದ್ ಮತ್ತು ಬಾಲಚಂದ್ರ ಮೃತ ದುರ್ದೈವಿಗಳು. ಈ ನಾಲ್ವರು ಭಾನುವಾರ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಂಜೆಯಾದ್ರೂ ಬಾಗಿಲು ತೆರೆಯದ ಹಿನ್ನೆಲೆಯಲ್ಲಿ ಅನುಮಾನಗೊಂಡ ಸಂಬಂಧಿಕರು ಕಿಟಕಿ ಒಡೆದು ನೋಡಿದಾಗ ಕುಟುಂಬ ನೇಣಿಗೆ ಶರಣಾಗಿರೋದು ಬೆಳಕಿಗೆ ಬಂದಿದೆ.

ಮೃತ ಜಗದೀಶ್ ಮೂಲತಃ ತಮಿಳುನಾಡಿನವರು. ಸುಮಾರು 20 ವರ್ಷಗಳಿಂದ ಬೆಂಗಳೂರಿನಲ್ಲೇ ನಲೆಸಿದ್ದಾರೆ. ಕಷ್ಟಪಟ್ಟು ದುಡಿದು ಬೆಂಗಳೂರಿನಲ್ಲಿ ಸ್ವಂತ ಮನೆ ಮಾಡಿದ್ರು. ಇದರ ಜೊತೆಗೆ ವರ್ಕ್ ಶಾಪ್ ಇಟ್ಟುಕೊಂಡಿದ್ರು. ಆದ್ರೆ ಇತ್ತೀಚಿನ ದಿನಗಳಲ್ಲಿ ಬ್ಯುಸಿನೆಸ್ ಲಾಸ್ ಆಗಿ ಸಾಲದ ಸುಳಿಗೆ ಸಿಲುಕಿದ್ದರು ಎನ್ನಲಾಗಿದೆ. ಜೊತೆಗೆ ತಮ್ಮ ಮನೆಯಲ್ಲಿ ಬೋಗ್ಯಕ್ಕೆ ಬಾಡಿಗೆ ಇದ್ದ ಇಬ್ಬರು ಬಾಡಿಗೆದಾರರಿಗೆ ಇದೇ ತಿಂಗಳು 7 ಲಕ್ಷ ರೂ. ಹಣ ನೀಡಬೇಕಿತ್ತು. ಆದ್ರೆ ಸಾಲದ ಸುಳಿಯಲ್ಲಿ ಸುಲುಕಿದ್ದ ಜಗದೀಶ್ ಗೆ ಸಾಲದ ಹಣ ಮತ್ತು ಬೋಗ್ಯದ ಹಣ ನೀಡಲಾಗದ ಹಿನ್ನೆಲೆಯಲ್ಲಿ ನೇಣಿಗೆ ಶರಣಾಗಿರುವ ಅನುಮಾನ ವ್ಯಕ್ತವಾಗಿದೆ.

ಸದ್ಯ ಈ ವಿಷಯ ತಿಳಿದು ಮೃತ ಜಗದೀಶ್ ಮನೆಗೆ ಭೇಟಿ ನೀಡಿ ಪರಿಶಿಲನೆ ನಡೆಸಿ ಪ್ರಕರಣ ದಾಖಲಿಸಿಕಿಂಡಿರುವ ಪೊಲೀಸ್ರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

Comments

Leave a Reply

Your email address will not be published. Required fields are marked *