ಆಸ್ಪತ್ರೆಯ ಆವರಣದಲ್ಲೇ ಮಹಿಳೆ ಸಾವು- ಮೃತದೇಹ ಕೊಡಲ್ಲ ಎಂದ ಆಸ್ಪತ್ರೆ

ಬೆಂಗಳೂರು: ಜಯನಗರದ ಖಾಸಗಿ ಆಸ್ಪತ್ರೆಯ ನಿರ್ಲಕ್ಷ್ಯದಿಂದ ಮಹಿಳೆ ಸಾವು ಆರೋಪ ಹಿನ್ನೆಲೆಯಲ್ಲಿ ಆಸ್ಪತ್ರೆಯ ಮುಂದೆ ಕುಟುಂಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಜಯನಗರದ ಭೈರಸಂದ್ರ ನಿವಾಸಿ ಸತ್ಯಮ್ಮ (47) ಮೃತ ಮಹಿಳೆ. ಸತ್ಯಮ್ಮರನ್ನು ಶನಿವಾರ ಸಂಜೆ ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಜಯನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಒಂದು ದಿನದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಭಾನುವಾರ ರಾತ್ರಿ ಇಲ್ಲಿ ಆಗೋದಿಲ್ಲ ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಎಂದು ವೈದ್ಯರು ತಿಳಿಸಿದ್ದಾರೆ. ನಂತರ ಕುಟುಂಬಸ್ಥರು ಪಕ್ಕದಲ್ಲೇ ಇದ್ದ ಮತ್ತೊಂದು ಆಸ್ಪತ್ರೆಗೆ ಅಂಬುಲೆನ್ಸ್ ಮೂಲಕ ಕರೆದುಕೊಂಡು ಬಂದಿದ್ದಾರೆ.

ಸುಮಾರು 45 ನಿಮಿಷಗಳ ಕಾಲ ಆಸ್ಪತ್ರೆಯ ಹೊರಭಾಗದಲ್ಲಿಯೇ ನಿಲ್ಲಿಸಿಕೊಂಡಿದ್ದಾರೆ. ಈ ವೇಳೆ ರೋಗಿ ಸತ್ಯಮ್ಮ ತೀವ್ರ ಉಸಿರಾಟದಿಂದ ಅಂಬುಲೆನ್ಸ್‌ನಲ್ಲೇ ಒದ್ದಾಡಿದ್ದಾರೆ. ನಂತರ ಆಸ್ಪತ್ರೆಯ ಮುಂಭಾದಲ್ಲೇ ಸತ್ಯಮ್ಮರ ಉಸಿರು ನಿಂತು ಹೋಗಿದೆ. ಬಳಿಕ ಕುಟುಂಬಸ್ಥರು ಗಲಾಟೆ ಮಾಡಿದ ಮೇಲೆ ವೈದ್ಯರು ಸತ್ಯಮ್ಮರನ್ನು ಆಸ್ಪತ್ರೆಗೆ ಅಡ್ಮಿಟ್ ಮಾಡಿಕೊಂಡಿದ್ದಾರೆ. ವೈದ್ಯರು ಪರೀಕ್ಷೆ ಮಾಡಿ ಸುಮಾರು ರಾತ್ರಿ 11.59ಕ್ಕೆ ಸತ್ಯಮ್ಮ ಮೃತಪಟ್ಟಿದ್ದಾರೆ. ದಯವಿಟ್ಟು ನಮ್ಮನ್ನು ಕ್ಷಮಿಸಿ ಅಂತ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾರೆ.

ಕೊರೊನಾ ಶಂಕೆ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಬೇಗ ಆಡ್ಮಿಟ್ ಮಾಡಿಕೊಂಡಿಲ್ಲ ಎಂದು ಕುಟುಂಬಸ್ಥರು ಆರೋಪ ಮಾಡಿದ್ದಾರೆ. ಇದೀಗ ಮಹಿಳೆಯ ಕೊರೊನಾ ಟೆಸ್ಟ್ ರಿಪೋರ್ಟ್ ಬರುವರೆಗೂ ಮೃತದೇಹ ಕೊಡಲ್ಲ ಎಂದ ಖಾಸಗಿ ಆಸ್ಪತ್ರೆ ಹೇಳಿದೆ. ಆದರೆ ಮೃತದೇಹ ನೀಡಿ ಎಂದು ಕುಟುಂಬಸ್ಥರು ಪಟ್ಟು ಹಿಡಿದಿದ್ದಾರೆ. ಹೀಗಾಗಿ ಜಯನಗರದ ಖಾಸಗಿ ಆಸ್ಪತ್ರೆಯಿಂದ ಮೃತ ಸತ್ಯಮ್ಮ ದೇಹವನ್ನು ಕಿಮ್ಸ್ ಆಸ್ಪತ್ರೆಗೆ ಶಿಫ್ಟ್ ಮಾಡಲು ವೈದ್ಯರು ಚಿಂತನೆ ಮಾಡುತ್ತಿದ್ದಾರೆ.

ಈಗಾಗಲೇ ಮೃತ ಸತ್ಯಮ್ಮರ ಗಂಟಲು ದ್ರವ ಪಡೆದುಕೊಂಡಿದ್ದು. ಕೊರೊನಾ ರಿಪೋರ್ಟ್ ಬಂದ ಮೇಲೆ ಮೃತದೇಹವನ್ನು ಕೊಡುತ್ತೀವಿ ಎಂದು ಆಸ್ಪತ್ರೆ ತಿಳಿಸಿದೆ. ಇಂದು ಬೆಳಗ್ಗೆ ಮೃತ ದೇಹವನ್ನು ಕೊಡುತ್ತೀವಿ ಎಂದು ಖಾಸಗಿ ಆಸ್ಪತ್ರೆ ಆಡಳಿತ ಮಂಡಳಿ ತಿಳಿಸಿತ್ತು. ಈಗ ಕೋವಿಡ್ ಟೆಸ್ಟ್ ಮಾಡಬೇಕು ಅಲ್ಲಿಯವರೆಗೆ ಮೃತದೇಹ ಕೊಡಲ್ಲ ಎಂದು ವೈದ್ಯರು ಹೇಳುತ್ತಿದ್ದಾರೆ. ಇದರಿಂದ ಸತ್ಯಮ್ಮ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Comments

Leave a Reply

Your email address will not be published. Required fields are marked *