ಮೈಸೂರು, ಮಂಡ್ಯ ಆಯ್ತು – ಈಗ ರಾಮನಗರಕ್ಕೆ ಎದುರಾಯ್ತು ಟೆನ್ಷನ್

ರಾಮನಗರ: ಒಂದೇ ಒಂದು ಕೊರೊನಾ ಪಾಸಿಟಿವ್ ಪ್ರಕರಣ ಇಲ್ಲದೇ ನಿರ್ಭಿತಿಯಿಂದಿದ್ದ ರಾಮನಗರಕ್ಕೆ ಇದೀಗ ಕೊರೊನಾ ಟೆನ್ಷನ್ ಶುರುವಾಗಿದೆ. ತಬ್ಲಿಘಿ ಸಮಾವೇಶಕ್ಕೆ ತೆರಳಿದ್ದ ವ್ಯಕ್ತಿಯೊರ್ವ ಚನ್ನಪಟ್ಟಣಕ್ಕೆ ಬಂದು ಹೋಗಿರುವುದು ಆತಂಕಕ್ಕೆ ಕಾರಣವಾಗಿದೆ.

ಚನ್ನಪಟ್ಟಣಕ್ಕೆ ಬಂದು ಹೋಗಿದ್ದ ಆ ವ್ಯಕ್ತಿಗೆ ಈಗಾಗಲೇ ಸೊಂಕು ದೃಢಪಟ್ಟಿದ್ದು, ಆತನ ಪೋಷಕರನ್ನು ಇದೀಗ ಕ್ವಾರಂಟೈನ್‍ಗೆ ಶಿಫ್ಟ್ ಮಾಡಲಾಗಿದೆ. ಇದು ಜಿಲ್ಲೆಯ ಜನರಲ್ಲಿ ಸಾಕಷ್ಟು ಭಯದ ಜೊತೆಗೆ ಟೆನ್ಷನ್ ಸಹ ಹೆಚ್ಚಿಸಿದೆ.

ದೆಹಲಿಯ ತಬ್ಲಿಘಿ ಸಮಾವೇಶ ಇಡೀ ದೇಶಕ್ಕೆ ಕಂಟಕ ಆಗಿದೆ. ಬೆಂಗಳೂರಿನ ನೆರೆಯ ಜಿಲ್ಲೆ ರಾಮನಗರದಲ್ಲಿ ಇದುವರೆಗೂ ಕೊರೊನಾ ಕಂಟಕ ಎದುರಾಗಿರಲಿಲ್ಲ. ಆದರೆ ರೋಗಿ ನಂಬರ್ 163ನಿಂದ ಇದೀಗ ರಾಮನಗರ ಜಿಲ್ಲೆ ಕೊರೊನಾ ವೈರಸ್ ಭೀತಿಗೆ ಒಳಗಾಗಿದೆ.

ಈ ಸೋಂಕಿತ ವ್ಯಕ್ತಿ ತಬ್ಲಿಘಿ ಸಮಾವೇಶದಿಂದ ವಾಪಸ್ಸಾದ ಬಳಿಕ ಚನ್ನಪಟ್ಟಣದ ತನ್ನ ಪೋಷಕರ ಜೊತೆ ಒಂದೂವರೆ ದಿನ ಇದ್ದು, ನಂತರ ಹೊಸಕೋಟೆಗೆ ವಾಪಸ್ ತೆರಳಿದ್ದಾನೆ. ಇದರಿಂದ ಆರೋಗ್ಯ ಇಲಾಖೆ ಅಧಿಕಾರಿಗಳು ಸೋಂಕಿತ ವ್ಯಕ್ತಿಯ ಪೋಷಕರು ಹಾಗೂ ಸಂಬಂಧಿಗಳನ್ನು ಕ್ವಾರಂಟೈನ್ ಶಿಬಿರಕ್ಕೆ ಶಿಫ್ಟ್ ಮಾಡಿದ್ದಾರೆ.

ರೋಗಿ ನಂಬರ್ 163 ಸೋಂಕಿತ ರಾಮನಗರ ಜಿಲ್ಲೆಗೆ ಕಾಲಿಡುವ ಮೂಲಕ ಜಿಲ್ಲೆಯ ಜನರಲ್ಲಿ ಸಾಕಷ್ಟು ಆತಂಕವನ್ನುಂಟು ಮಾಡಿದ್ದಾನೆ.

Comments

Leave a Reply

Your email address will not be published. Required fields are marked *