ಪ್ರವಾಸ ಮಾಡದಿದ್ರೂ ಕಿರಾಣಿ ಅಂಗಡಿಯವನಿಗೂ ಕೊರೊನಾ ಪಾಸಿಟಿವ್

ಬಾಗಲಕೋಟೆ: ಯಾವುದೇ ದೇಶ, ರಾಜ್ಯ, ಜಿಲ್ಲೆ ಪ್ರವಾಸ ಮಾಡದಿದ್ದರೂ ಜಿಲ್ಲೆಯಲ್ಲಿ ಓರ್ವನಿಗೆ ಕೊರೊನಾ ಪಾಸಿಟಿವ್ ಬಂದಿದೆ.

70 ವರ್ಷದ ವೃದ್ಧ ಕಿರಾಣಿ ವ್ಯಾಪಾರಸ್ಥನಿಗೆ ಕೊರೊನಾ ಪಾಸಿಟಿವ್ ಬಂದಿದೆ. ಈತ ಜ್ವರ, ನೆಗಡಿ, ಕೆಮ್ಮು ಅಂತ ಮೊದಲು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದನು. ಆದರೆ ಕೊರೊನಾ ಲಕ್ಷಣ ಕಂಡು ಬಂದ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆ ವೈದ್ಯರು ಜಿಲ್ಲಾಸ್ಪತ್ರೆಗೆ ಕಳುಹಿಸಿದ್ದರು. ಮೂರು ದಿನದ ಹಿಂದೆ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದನು. ನಂತರ ಬುಧವಾರ ಗಂಟಲು ದ್ರವ ಪರೀಕ್ಷೆಗೆ ಕಳುಹಿಸಲಾಗಿತ್ತು.

ಇದೀಗ ಗಂಟಲು ದ್ರವ ಪರೀಕ್ಷೆಯಿಂದ ಕೊರೊನಾ ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ಸ್ಪಷ್ಟಪಡಿಸಿದ್ದಾರೆ. ಬುಧವಾರ ಮೂರು ವ್ಯಕ್ತಿಗಳ ಸ್ಯಾಂಪಲ್ ಪರೀಕ್ಷೆಗೆ ಕಳುಹಿಸಲಾಗಿತ್ತು. ಮೂರು ಸ್ಯಾಂಪಲ್ ವರದಿಗಳ ಪೈಕಿ ಒಂದು ಪಾಸಿಟಿವ್ ಧೃಡಪಟ್ಟಿದೆ. ಉಳಿದ ಎರಡು ಸ್ಯಾಂಪಲ್ ನೆಗೆಟಿವ್ ಎಂದು ವರದಿಯಾಗಿದೆ. ಸದ್ಯ ಕೋವಿಡ್-19 ಸೋಂಕಿತ ವ್ಯಕ್ತಿಯನ್ನು ಜಿಲ್ಲಾ ಆಸ್ಪತ್ರೆಯ ಐಸೋಲೇಷನ್ ವಾರ್ಡಿನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವ್ ಪ್ರಕರಣ ಧೃಡಪಟ್ಟ ಹಿನ್ನೆಲೆಯಲ್ಲಿ ಸೋಂಕಿತ ವ್ಯಕ್ತಿಯ ಮನೆಯ ಹಾಗೂ ಏರಿಯಾ ಕ್ವಾರಂಟೈನ್ ಮಾಡಲಾಗುತ್ತಿದೆ. ಜೊತೆಗೆ ಸಂಬಂಧಿಕರನ್ನು ಕ್ವಾರಂಟೈನ್ ಮಾಡಲಾಗುತ್ತಿದೆ. ಯಾರೂ ಹೊರಗೆ, ಒಳಗೆ ಬರಲಾರದ ಹಾಗೆ ಜಾಗೃತಿ ವಹಿಸಲಾಗಿದೆ.

ಇಂದಿನಿಂದ ಮಾರ್ಕೆಟ್, ವ್ಯಾಪಾರ ಎಲ್ಲವೂ ಸಂಪೂರ್ಣ ಬಂದ್ ಆಗಲಿದೆ. ಸೋಂಕಿತ ವ್ಯಕ್ತಿ ಎಲ್ಲಿಯೂ ಹೋಗಿರುವ ಇತಿಹಾಸವಿಲ್ಲ. ಆದರೆ ಸೋಂಕಿತ ವ್ಯಕ್ತಿಯ ಮಗ ಎಂಟು ದಿನಗಳ ಹಿಂದೆ ಬೆಂಗಳೂರಿನಿಂದ ಬಂದಿರುವ ಮಾಹಿತಿ ಇದೆ. ಪೊಲೀಸರು ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳು ಮಗನ ಬಗ್ಗೆ, ಬೆಂಗಳೂರಲ್ಲಿ ಆತ ಓಡಾಡಿರುವ ಜಾಗದ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ ಎಂದು ಎಸ್.ಪಿ ಲೋಕೇಶ್ ಜಗಲಾಸರ್ ಆಡಿಯೋ ಮೂಲಕ ಮಾಹಿತಿ ನೀಡಿದ್ದಾರೆ.

Comments

Leave a Reply

Your email address will not be published. Required fields are marked *