ಬಡವರಿಗೆ 3 ಸಾವಿರ ದಿನಸಿ, ತರಕಾರಿ ಕಿಟ್ ವಿತರಿಸಿದ ಗ್ರಾ.ಪಂ.ಸದಸ್ಯ

ಬೆಂಗಳೂರು: ಕೊರೊನಾ ಲಾಕ್‍ಡೌನ್‍ನಿಂದಾಗಿ ಸಂಕಷ್ಟದಲ್ಲಿವರಿಗೆ ಗ್ರಾಮ ಪಂಚಾಯತಿ ಸದಸ್ಯರೊಬ್ಬರು ಸುಮಾರು 3000 ದಿನಸಿ ಹಾಗೂ ತರಕಾರಿ ಇರುವ ಕಿಟ್‍ಗಳನ್ನ ಪ್ರತಿ ಮನೆ ಮನೆಗೂ ನೀಡಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ವಾಜರಹಳ್ಳಿ ಗ್ರಾಮ ಪಂಚಾಯತಿ ಸದಸ್ಯ ವಿ.ಕೆ.ಎಸ್.ಕೆಂಪರಾಜು ಬಡವರಿಗೆ ಕಿಟ್‍ಗಳನ್ನ ವಿತರಿಸಿದ್ದಾರೆ. ರಾಜ್ಯದಲ್ಲಿ ಕೊರೊನಾ ಮಹಾಮಾರಿ ದಿನದಿಂದ ದಿನಕ್ಕೆ ತಾಂಡವವಾಡುತ್ತಿದೆ. ಈ ಅಪಾಯಕಾರಿ ವೈರಸ್ ತಡೆಗಟ್ಟಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಾಕಷ್ಟು ಮುಂಜಾಗ್ರತೆಯನ್ನ ವಹಿಸಿ ಲಾಕ್‍ಡೌನ್ ಜಾರಿಗೆ ತಂದಿದೆ. ಹೀಗಾಗಿ ಕಳೆದ ಒಂದು ತಿಂಗಳಿನಿಂದ ಬಡ ಜನರು ಹಾಗೂ ಕೂಲಿ ಕಾರ್ಮಿಕರು ಸಾಕಷ್ಟು ಸಮಸ್ಯೆಯನ್ನ ಅನುಭವಿಸುತಿದ್ದಾರೆ.

ಕೆಂಪರಾಜು ನೇತೃತ್ವದಲ್ಲಿ ಸುಮಾರು 3000 ದಿನಸಿ ಹಾಗೂ ತರಕಾರಿ ಇರುವ ಕಿಟ್‍ಗಳನ್ನ ಪ್ರತಿ ಮನೆಮನೆಗೂ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ತಮ್ಮ ಕುಟುಂಬ ಹಾಗೂ ಸ್ನೇಹಿತರ ನೆರವಿನೊಂದಿಗೆ ತಮ್ಮ ಮನೆಯಲ್ಲಿ ದಿನಸಿ ಪದಾರ್ಥಗಳನ್ನ ಪ್ಯಾಕ್ ಮಾಡಿದ್ದಾರೆ. ನಂತರ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಬಡವರ ಮನೆಗಳಿಗೆ ನೇರವಾಗಿ ದಿನಸಿ ಕಿಟ್‍ಗಳನ್ನು ತಲುಪಿಸುತಿದ್ದಾರೆ.

ನೀವು ಮನೆಯಿಂದ ಹೊರಗೆಬರದೆ ಈ ಕೊರೊನಾ ವೈರಸ್ ತಡೆಯಲು ಸಹಕರಿಸಬೇಕು. ಅಲ್ಲದೇ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು ಎಂದು ಜಾಗೃತಿ ಮೂಡಿಸಿದರು. ಇವರ ಕಾರ್ಯಕ್ಕೆ ಜನರು ಸಹ ಅಭಿನಂದನೆ ಸಲ್ಲಿಸಿದ್ದಾರೆ.

Comments

Leave a Reply

Your email address will not be published. Required fields are marked *