ಕಾಟಾಚಾರಕ್ಕೆ ಕೊರೊನಾ ಸ್ಕ್ಯಾನಿಂಗ್ ಮಾಡ್ತಿದ್ದ ಅಧಿಕಾರಿ ಅಮಾನತು

ತುಮಕೂರು: ಕೊರೊನಾ ವೈರಸ್ ಪತ್ತೆಹಚ್ಚುವ ಥರ್ಮಲ್ ಸ್ಕ್ಯಾನಿಂಗ್‍ನಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಅಸಡ್ಡೆ ತೋರಿರುವ ಘಟನೆ ತುಮಕೂರು ರೈಲ್ವೇ ನಿಲ್ದಾಣದಲ್ಲಿ ನಡೆದಿದೆ.

ತುಮಕೂರು ಆರೋಗ್ಯ ಇಲಾಖೆಯ ಜ್ಯೂನಿಯರ್ ಹೆಲ್ತ್ ಇನ್ಸ್‌ಪೆಕ್ಟರ್ ನರಸಿಂಹಮೂರ್ತಿ ನಿರ್ಲಕ್ಷ್ಯ ತೋರಿದ ಅಧಿಕಾರಿ. ಈತ ತುಮಕೂರು ರೈಲ್ವೇ ನಿಲ್ದಾಣದಲ್ಲಿ ಸಾರ್ವಜನಿಕರ ಥರ್ಮಲ್ ಸ್ಕ್ರೀನಿಂಗ್ ನಡೆಸಬೇಕಾದರೆ ಬೇಜವಾಬ್ದಾರಿ ವರ್ತನೆ ತೋರಿದ್ದಾನೆ.

ಒಂದು ಕೈಯಲ್ಲಿ ಮೊಬೈಲ್ ಹಿಡಿದು ಇನ್ನೊಂದು ಕೈಯಲ್ಲಿ ಸ್ಕ್ರೀನಿಂಗ್ ಮೆಷಿನ್ ಹಿಡಿದು ಅಸಡ್ಡೆಯಾಗಿ ತಪಾಸಣೆ ನಡೆಸಿದ್ದಾನೆ. ಈತನ ನಿರ್ಲಕ್ಷ್ಯದ ಕೆಲಸವನ್ನು ಸಾರ್ವಜನಿಕರು ಮೊಬೈಲಿನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿ ಛೀಮಾರಿ ಹಾಕಿದ್ದಾರೆ.

ಕಳೆದ ಎರಡು ದಿನಗಳಿಂದ ತುಮಕೂರಿನ ಸಿದ್ದಗಂಗಾ ಮಠ ಹಾಗೂ ರೈಲ್ವೇ ನಿಲ್ದಾಣದಲ್ಲಿ ಸಾರ್ವಜನಿಕರಿಗೆ ಥರ್ಮಲ್ ಸ್ಕ್ರೀನಿಂಗ್ ಮಾಡಲಾಗುತ್ತಿತ್ತು. ಇಡೀ ದೇಶವೇ ಕೊರೊನಾ ವೈರಸ್ ವಿರುದ್ಧ ಸಮರ ಸಾರಿದರೆ, ಈತ ಮಾತ್ರ ನಿರ್ಲಕ್ಷ್ಯ ತೋರಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿತ್ತು.

ಇದೀಗ ಮೊಬೈಲಿನಲ್ಲಿ ಮಾತನಾಡುತ್ತಾ ಕಾಟಾಚಾರಕ್ಕೆ ತಪಾಸಣೆ ಮಾಡುತ್ತಿದ್ದ ನರಸಿಂಹಮೂರ್ತಿಯನ್ನು ಅಮಾನತು ಮಾಡಲಾಗಿದೆ. ನರಸಿಂಹಮೂರ್ತಿಯ ಬೇಜವಾಬ್ದಾರಿ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ವಿಡಿಯೋ ಆಧಾರದ ಮೇಲೆ ಡಿಎಚ್‍ಒ ಡಾ.ಚಂದ್ರಿಕಾ ಬೇಕಾಬಿಟ್ಟಿ ತಪಾಸಣೆ ಮಾಡುತ್ತಿದ್ದ ನರಸಿಂಹಮೂರ್ತಿಯನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದರು.

Comments

Leave a Reply

Your email address will not be published. Required fields are marked *