ಬೆಳಗ್ಗೆ 4 ಗಂಟೆಯಿಂದ ಮಧ್ಯಾಹ್ನ 2ರವರೆಗೆ ಅಂಬುಲೆನ್ಸ್‌ನಲ್ಲೇ ಅಡ್ಡಾಡಿದ್ದೇವೆ: ಕೊರೊನಾ ಸೋಂಕಿತ ಮೃತನ ಮಗ

ಕಲಬುರಗಿ: ಬೆಳಗಿನ ಜಾವ ನಾಲ್ಕು ಗಂಟೆಯಿಂದ ಮಧ್ಯಾಹ್ನ 2 ಗಂಟೆವರೆಗೆ ಅಂಬುಲೆನ್ಸ್‌ನಲ್ಲಿಯೇ ಅಡ್ಡಾಡಿದ್ದೇವೆ. ಮೂರ್ನಾಲ್ಕು ಆಸ್ಪತ್ರೆಗಳಿಗೆ ತೆರಳಿದರೂ ಯಾರೂ ತಂದೆಯನ್ನು ದಾಖಲಿಸಿಕೊಂಡಿಲ್ಲ. ಸರಿಯಾದ ಸಮಯಕ್ಕೆ ಚಿಕಿತ್ಸೆ ನೀಡಿದ್ದರೆ ಅವರು ಉಳಿಯುತ್ತಿದ್ದರು ಎಂದು ಕೊರೊನಾ ಸೋಂಕಿನಿಂದ ಮೃತಪಟ್ಟ ವ್ಯಕ್ತಿಯ ಮಗ ಅಳಲನ್ನು ತೋಡಿಕೊಂಡಿದ್ದಾರೆ.

ಮಾರ್ಚ್ 9ರಂದು ನಮ್ಮ ತಂದೆಗೆ ಜ್ವರ ಹೆಚ್ಚಾದಾಗ ಅನೇಕ ಆಸ್ಪತ್ರೆಗಳಿಗೆ ಹೋಗಿದ್ದೆವು. ಬಹುತೇಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲು ನಿರಾಕರಿಸಿದರು. ಕೊನೆಗೆ ಒಂದು ಖಾಸಗಿ ಆಸ್ಪತ್ರೆಯವರು ದಾಖಲಿಸಿಕೊಂಡರು. ಆದರೆ ಅವರು ಕೂಡ ಕೆಲ ಹೊತ್ತಿನ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಹೈದರಾಬಾದ್‍ಗೆ ಕರೆದುಕೊಂಡು ಹೋಗುವಂತೆ ಒತ್ತಾಯಿಸಿದರು. ಆಗ ನಮಗೆ ಜಿಲ್ಲಾ ಆರೋಗ್ಯ ಇಲಾಖೆ ಸಿಬ್ಬಂದಿ ಕೊರೊನಾ ವೈರಸ್‍ಗಾಗಿ ಪ್ರತ್ಯೇಕ ವಾರ್ಡ್ ಮಾಡಿದ್ದನ್ನು ಹೇಳಲಿಲ್ಲ. ಹೀಗಾಗಿ ನಾವು ಮಾರ್ಚ್ 10ರಂದು ನಸುಕಿನ ಜಾವ 4 ಗಂಟೆಗೆ ಹೈದರಾಬಾದ್‍ಗೆ ಕರೆದುಕೊಂಡು ಹೋದೆವು. ಅಲ್ಲಿ ಮೂರ್ನಾಲ್ಕು ಆಸ್ಪತ್ರೆಯಲ್ಲಿ ತಂದೆಗೆ ಚಿಕಿತ್ಸೆಗೆ ನೀಡುವಂತೆ ಕೇಳಿಕೊಂಡರೂ ಅವರು ದಾಖಲಿಸಿಕೊಳ್ಳಲಿಲ್ಲ. ಆದ್ದರಿಂದ ತಂದೆಯನ್ನು ಕರೆದುಕೊಂಡು ಬೆಳಗ್ಗೆ ನಾಲ್ಕು ಗಂಟೆಯಿಂದ ಮಧ್ಯಾಹ್ನ 2 ಗಂಟೆವರೆಗೆ ಅಂಬುಲೆನ್ಸ್‌ನಲ್ಲಿಯೇ ಅಡ್ಡಾಡಿದ್ದೇವೆ. ವೈದ್ಯರು ಪ್ರಾಣಿಗಿಂತ ಕಡೆಯಾಗಿ ನಮ್ಮೊಂದಿಗೆ ವರ್ತಿಸಿದ್ದರು ಎಂದು ಮೃತ ವ್ಯಕ್ತಿಯ ಮಗ ತಿಳಿಸಿದರು.

ಹೈದರಾಬಾದ್‍ನಿಂದ ವಾಪಸ್ ಅವರನ್ನು ಕಲಬುರಗಿ ನಗರಕ್ಕೆ ಕರೆದುಕೊಂಡು ಬರುತ್ತಿದ್ದೆವು. ಆಗ ಮಾರ್ಗ ಮಧ್ಯೆಯೇ ನಮ್ಮ ತಂದೆ ಮೃತಪಟ್ಟಿದ್ದಾರೆ. ಕಲಬುರಗಿಯ ಆರೋಗ್ಯ ಇಲಾಖೆ ಎಚ್ಚತ್ತುಕೊಂಡಿದ್ದರೆ ನಮ್ಮ ತಂದೆ ಬದುಕಿ ಉಳಿಯುತ್ತಿದ್ದರು ಎಂದು ಕಲಬುರಗಿ ಆರೋಗ್ಯ ಇಲಾಖೆ ಮೇಲೆ ಮೃತನ ಮಗ ಅಸಮಾಧಾನ ವ್ಯಕ್ತಪಡಿಸಿದರು.

ಸೂಕ್ತ ಚಿಕಿತ್ಸೆ ನೀಡಿದ್ದರೆ ವೃದ್ಧ ಬದುಕುಳಿಯುತ್ತಿದ್ದರಾ? ವೈದ್ಯರು ಮತ್ತು ಜಿಲ್ಲಾ ಆರೋಗ್ಯ ಇಲಾಖೆ ನಿರ್ಲಕ್ಷ್ಯವೇ ವೃದ್ಧನ ಸಾವಿಗೆ ಕಾರಣವಾಯ್ತಾ ಎಂಬ ಪ್ರಶ್ನೆಗಳು ಮೃತನ ಮಗನ ಹೇಳಿಕೆಯಿಂದ ಹುಟ್ಟುಕೊಂಡಿದೆ. ಇತ್ತ ಆರೋಗ್ಯ ಇಲಾಖೆ ನಿರ್ಲಕ್ಷ ಮತ್ತು ಸೂಕ್ತ ಸಮಯದಲ್ಲಿ ಚಿಕಿತ್ಸೆ ಸಿಗದಿರುವುದು ತಂದೆಯ ಸಾವಿಗೆ ಕಾರಣ ಎಂದು ಮೃತನ ಮಗ ಆರೋಪಿಸಿದ್ದಾರೆ.

 

Comments

Leave a Reply

Your email address will not be published. Required fields are marked *