ಕೊರೊನಾ ಭೀತಿಗೆ ಜಮೀನಿನಲ್ಲೇ ಕೊಳೆಯುತ್ತಿದೆ ಕಲ್ಲಂಗಡಿ- ರೈತನ ಬದುಕು ಬೀದಿಗೆ

ರಾಯಚೂರು: ಮಹಾಮಾರಿ ಕೊರೊನಾ ವೈರಸ್‍ನ ಅಟ್ಟಹಾಸದಿಂದ ರೈತರ ಬದುಕು ಬೀದಿಗೆ ಬಂದಿದೆ. ರಾಯಚೂರಿನಲ್ಲೂ ಬೇಸಿಗೆ ಕಾಲಕ್ಕೆ ಅಂತ ಕಲ್ಲಂಗಡಿ ಬೆಳೆದ ರೈತರಂತೂ ನಯಾ ಪೈಸೆ ಲಾಭದ ನಿರೀಕ್ಷೆಯಲ್ಲಿಲ್ಲ. ಎಕರೆಗೆ 20ರಿಂದ 40 ಸಾವಿರ ರೂ. ಖರ್ಚು ಮಾಡಿದ್ದು ಜಮೀನಿನಲ್ಲೇ ಕಲ್ಲಂಗಡಿ ಕೊಳೆತುಹೋಗುತ್ತಿದೆ.

ಜಿಲ್ಲೆಯ ಲಿಂಗಸುಗೂರು ಸೇರಿದಂತೆ ನೂರಾರು ಎಕರೆ ಪ್ರದೇಶದಲ್ಲಿ ಕಲ್ಲಂಗಡಿ ಬೆಳೆಯಲಾಗಿದೆ. ಆದರೆ ಕೊಳ್ಳಲು ವ್ಯಾಪಾರಿಗಳು ಮುಂದೆಬರುತ್ತಿಲ್ಲ. ಮಾರುಕಟ್ಟೆಗೆ ಸಾಗಿಸಲು ಸಾಧ್ಯವಾಗುತ್ತಿಲ್ಲ. ಗ್ರಾಹಕರು ಕಲ್ಲಂಗಡಿ ತಂಪು ಅಂತ ಕೊಳ್ಳಲು ಮುಂದೆಬರುತ್ತಿಲ್ಲ. ಇಷ್ಟೆಲ್ಲದರ ಮಧ್ಯೆ ಜಮೀನಿನಲ್ಲಿನ ಕಲ್ಲಂಗಡಿ ಬಿಡಿಸಲು ಕೂಲಿಯಾಳುಗಳು ಸಿಗುತ್ತಿಲ್ಲ ಎನ್ನುವುದು ರೈತರ ಆತಂಕಕ್ಕೆ ಕಾರಣವಾಗಿದೆ. ಪ್ರತಿವರ್ಷ ಇಷ್ಟೊತ್ತಿಗೆ ವ್ಯಾಪಾರ ಜೋರಾಗಿರುತ್ತಿತ್ತು. ಆದರೆ ಈ ವರ್ಷ ನಮ್ಮ ಬೆಳೆಗೆ ಒಂದು ರೂಪಾಯಿಯೂ ಬಂದಿಲ್ಲ ಎಂದು ಮದಗಲ್ ರೈತ ರಾಕೇಶ್ ಬೇಸರ ವ್ಯಕ್ತಪಡಿಸಿದ್ದಾರೆ.

ಉತ್ತಮ ಫಸಲು ಬಂದಿದ್ದರೂ ಸೂಕ್ತ ಮಾರುಕಟ್ಟೆ ವ್ಯವಸ್ಥೆಯಿಲ್ಲದಿರುವುದು ರೈತರನ್ನ ದೊಡ್ಡ ಸಾಲಗಾರರನ್ನಾಗಿ ಮಾಡುತ್ತಿದೆ. ಕೊರೊನಾ ಎಫೆಕ್ಟ್ ನಿಂದ ಕಲ್ಲಂಗಡಿ ಬೆಳೆದ ರೈತನಿಗೆ ಸಾಕಷ್ಟು ಸಂಕಷ್ಟ ಎದುರಾಗಿದೆ. ಹೀಗಾಗಿ ಕಲ್ಲಂಗಡಿ ಮಾರಾಟಕ್ಕೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವಂತೆ ರೈತರು ಮನವಿ ಮಾಡಿದ್ದಾರೆ.

Comments

Leave a Reply

Your email address will not be published. Required fields are marked *