ಟಿಕೆಟ್ ಬುಕ್ಕಿಂಗ್ ಬೇಡ – ಮೇ 3ರ ಬಳಿಕವೂ ರೈಲು, ವಿಮಾನ ಸಂಚಾರ ಅನುಮಾನ

– ಕೇಂದ್ರದಿಂದ ವಿಮಾನಯಾನ ಸಂಸ್ಥೆಗಳಿಗೆ ಸೂಚನೆ

ನವದೆಹಲಿ: ದೇಶದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆ ಮೇ 3ರ ಲಾಕ್‍ಡೌನ್ ಅಂತ್ಯದ ಬಳಿಕವೂ ಬಸ್, ರೈಲು, ವಿಮಾನ ಸಂಚಾರ ಅನುಮಾನ ಎನ್ನಲಾಗುತ್ತಿದೆ. ಮೇ 3ರ ಬಳಿಕ ಟಿಕೆಟ್ ಬುಕ್ಕಿಂಗ್ ಆರಂಭಿಸದಂತೆ ವಿಮಾನಯಾನ ಸಂಸ್ಥೆಗಳಿಗೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ.

ಮೇ 4ರಿಂದ ಆಯ್ದ ಕೆಲವು ನಗರಗಳಿಗೆ ದೇಶಿಯ ವಿಮಾನಗಳ ಹಾರಾಟ ಮತ್ತು ಜೂನ್ 1ರಿಂದ ಅಂತರರಾಷ್ಟ್ರೀಯ ವಿಮಾನಗಳಗಳ ಹಾರಾಟ ಪುನಾರಂಭವಾಗಲಿದ್ದು, ಟಿಕೆಟ್ ಬುಕ್ಕಿಂಗ್ ಮಾಡಿಕೊಳ್ಳಬಹುದು ಎಂದು ವಿಮಾನಯಾನ ಸಂಸ್ಥೆಗಳು ಜಾಹೀರಾತು ನೀಡಿದ್ದವು.

ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದಲ್ಲಿ ಶನಿವಾರ ಕೇಂದ್ರ ಸಚಿವರ ಸಭೆಯಲ್ಲಿ ವಿಮಾನ ಮತ್ತು ರೈಲುಗಳ ಸಂಚಾರದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಸಂಚಾರ ಆರಂಭಿಸದಿರಲು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಶಿಫಾರಸು ಮಾಡಿದ್ದಾರೆ. ಕೇಂದ್ರ ಆರೋಗ್ಯ ಇಲಾಖೆಯ ಅಂತಿಮ ಸ್ಪಷ್ಟನೆ ಬಳಿಕವೇ ಅಂತಿಮ ನಿರ್ಧಾರಗಳನ್ನು ಪ್ರಕಟಿಸಲಿ ಎಂದು ಸಚಿವರ ತಂಡ ಅಭಿಪ್ರಾಯ ವ್ಯಕ್ತಪಡಿಸಿದೆ.

ಸಭೆ ಬಳಿಕ ಈ ಬಗ್ಗೆ ಟ್ವಿಟ್ ಮಾಡಿರುವ ಸಚಿವ ಹರ್ದೀಪ್ ಸಿಂಗ್ ಪುರಿ, ದೇಶಿಯ ಮತ್ತು ಅಂತರರಾಷ್ಟ್ರೀಯ ವಿಮಾನಗಳ ಹಾರಾಟ ಬಗ್ಗೆ ಯಾವುದೇ ನಿಲುವು ಕೇಂದ್ರ ವಿಮಾನಯಾನ ಸಚಿವಾಲಯ ತೆಗೆದುಕೊಂಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈ ನಿಯಮಗಳು ಬಹುತೇಕ ರೈಲು ಪ್ರಯಾಣಕ್ಕೂ ಅನ್ವಯ ಆಗಲಿದೆ ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ.

ಈ ಹಿಂದೆ ಖಾಸಗಿ ವಿಮಾನಯಾನ ಸಂಸ್ಥೆಗಳ ಜೊತೆ ಸಭೆ ನಡೆಸಿದ್ದ ಕೇಂದ್ರ ಸರ್ಕಾರ ಮಾರ್ಚ್ 24ರಿಂದ ಮೇ 3ರವರೆಗೂ ಮಾಡಿರುವ ಎಲ್ಲ ಮುಂಗಡ ಟಿಕೆಟ್‍ಗಳ ಹಣ ಮರುಪಾವತಿ ಮಾಡಲು ಸೂಚನೆ ನೀಡಿತ್ತು.

Comments

Leave a Reply

Your email address will not be published. Required fields are marked *