ಕೊರೊನಾ ವಿರುದ್ಧದ ಹೋರಾಟಕ್ಕೆ 50 ಸಾವಿರ ರೂ. ದೇಣಿಗೆ ನೀಡಿದ ಕೌರವನ ಪುತ್ರಿ

ಬೆಂಗಳೂರು: ಹೆಮ್ಮಾರಿ ಕೊರೊನಾ ವೈರಸ್ ವಿರುದ್ಧದ ಹೋರಾಟಕ್ಕೆ ಅನೇಕರು ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ದೇಣಿಗೆ ನೀಡಿ ಬೆಂಬಲ ಸೂಚಿಸಿದ್ದಾರೆ. ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರ ಪುತ್ರಿ ಸೃಷ್ಟಿ ಪಾಟೀಲ್ ಅವರು ಕೂಡ ಮುಖ್ಯಮಂತ್ರಿ ವಿಪತ್ತು ಪರಿಹಾರ ನಿಧಿಗೆ 50 ಸಾವಿರ ರೂ. ದೇಣಿಗೆ ನೀಡಿದ್ದಾರೆ.

ತಾವು ದೇಣಿಗೆ ನೀಡುವ ಮಾಹಿತಿಯನ್ನು ಟ್ವೀಟ್ ಮಾಡಿರುವ ಸೃಷ್ಟಿ ಪಾಟೀಲ್, ಮಹಾಮಾರಿ ಕೊರೊನಾ ವೈರಸ್ ಅನ್ನು ತಡೆಗಟ್ಟಲು ರಾಜ್ಯ ಸರ್ಕಾರವು, ನಮ್ಮಲೆಲ್ಲರ ಹಿತ ಕಾಯುತ್ತಿದೆ. ನಾವೆಲ್ಲರೂ ಸೇರಿ ನಮ್ಮ ಕೈಯಲ್ಲಿ ಎಷ್ಟಾಗುತ್ತೋ ಅಷ್ಟು ಧನಸಹಾಯವನ್ನು ರಾಜ್ಯ ಸರ್ಕಾರಕ್ಕೆ ಮಾಡೋಣ. ನನ್ನ ಕಡೆಯಿಂದ ಆದಷ್ಟು ನಾನು ಮಾಡಿದ್ದೇನೆ. ನೀವೂ ಕೂಡ ಸಿಎಂ ರಿಲೀಫ್ ಫಂಡ್‍ಗೆ ಧನ ಸಹಾಯ ಮಾಡಬಹುದು ಎಂದು ಬರೆದುಕೊಂಡಿದ್ದಾರೆ.

ಕೊರೊನಾ ವೈರಸ್‍ನಿಂದಾಗಿ ದೇಶಾದ್ಯಂತ ಏಪ್ರಿಲ್ 14ರವರೆಗೆ ಲಾಕ್‍ಡೌನ್ ಘೋಷಿಸಲಾಗಿದೆ. ಇದರಿಂದಾಗಿ ಸಾಮಾನ್ಯ ಜನರ ಜೀವನ ಕಷ್ಟವಾಗಿದೆ. ಹೀಗಾಗಿ ಸೃಷ್ಟಿ ಪಾಟೀಲ್ ಕಳೆದ ಕೆಲವು ದಿನಗಳಿಂದ ತಂದೆ ಬಿ.ಸಿ.ಪಾಟೀಲ್ ಅವರ ಕ್ಷೇತ್ರದ ಜನರ ಸಹಾಯಕ್ಕೆ ನಿಂತಿದ್ದಾರೆ.

ಸೃಷ್ಟಿ ಪಾಟೀಲ್ ಅವರು ಏಪ್ರಿಲ್ 5ರಂದು ಹಂಸಭಾವಿ ಹಾಗೂ ರಟ್ಟಿಹಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರು, ವೈದ್ಯಕೀಯ ಸಿಬ್ಬಂದಿ, ಆಶಾ ಕಾರ್ಯಕರ್ತರು, ಪೊಲೀಸ್, ಗ್ರಾಮ ಪಂಚಾಯತಿ ಸ್ವಚ್ಛತಾ ಸಿಬ್ಬಂದಿಗೆ ಊಟದ ವ್ಯವಸ್ಥೆ ಮಾಡಿದ್ದರು. ಜೊತೆಗೆ ಅಂದು ಅನೇಕರಿಗೆ ಮಾಸ್ಕ್ ಗಳನ್ನು ವಿತರಿಸಿದ್ದರು. ಹೀಗೆ ಹಾವೇರಿ ಜಿಲ್ಲೆಯ ವಿವಿಧ ಕಡೆಗಳಲ್ಲಿ ಜನರಿಗೆ ಸಹಾಯ ಮಾಡುತ್ತಿದ್ದಾರೆ.

Comments

Leave a Reply

Your email address will not be published. Required fields are marked *