ಹಾಟ್‍ಸ್ಪಾಟ್‍ಗಳ ಮಧ್ಯೆಯಿದ್ರೂ ಗಡಿ ಜಿಲ್ಲೆ ಕೊರೊನಾದಿಂದ ಸೇಫ್

ಚಾಮರಾಜನಗರ: ರಾಜ್ಯದಲ್ಲಿ ಕೊರೊನಾ ಕೇಸ್‍ಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಹಾಟ್‍ಸ್ಪಾಟ್‍ಗಳ ಸಂಖ್ಯೆಯೂ ಹೆಚ್ಚಾಗುತ್ತಲೇ ಇದೆ. ಆದರೆ ಹಾಟ್‍ಸ್ಪಾಟ್‍ಗಳ ಮಧ್ಯೆಯಿದ್ರೂ ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಒಂದೇ ಒಂದು ಕೊರೊನಾ ಪ್ರಕರಣ ಪತ್ತೆಯಾಗಿಲ್ಲ.

ನಂಜನಗೂಡು, ದೆಹಲಿ ನಿಜಾಮುದ್ದೀನ್ ಪ್ರಕರಣದ ಬಳಿಕ ಚಾಮರಾಜನಗರದಲ್ಲಿ ಆತಂಕ ಮನೆ ಮಾಡಿತ್ತು. ಆದರೆ ಅಲ್ಲಿಂದ ಬಂದವರ ರಿಪೋರ್ಟ್ ಸಹ ನೆಗೆಟಿವ್ ಬಂದಿದ್ದು, ಜನ ನಿಟ್ಟುಸಿರು ಬಿಟ್ಟಿದ್ದಾರೆ. ನೆರೆ ರಾಜ್ಯಗಳಾದ ಕೇರಳ, ತಮಿಳುನಾಡಿನಲ್ಲಿ ಕೊರೊನಾ ಹೆಚ್ಚಾಗುತ್ತಿದೆ. ಜೊತೆಗೆ ನೆರೆ ಜಿಲ್ಲೆಗಳಾದ ಮಂಡ್ಯ, ಮೈಸೂರಿನಲ್ಲಿ ಕೊರೊನಾ ಕೇಸ್ ಹೆಚ್ಚಾಗಿದ್ದರೂ ಚಾಮರಾಜನಗರ ಮಾತ್ರ ಸದ್ಯ ಸೇಫ್ ಝೋನ್‍ನಲ್ಲಿದೆ.

ಕೇರಳದಲ್ಲಿ ಮೊದಲ ಕೊರೊನಾ ಪ್ರಕರಣ ದಾಖಲಾಗುತ್ತಿದ್ದಂತೆ ಗಡಿ ಬಂದ್ ಮಾಡಿ, ವಾಹನಗಳ ಸ್ಯಾನಿಟೈಸೇಷನ್ ಮಾಡಲಾಗಿತ್ತು. ಜೊತೆಗೆ ಅಂತರ್ ರಾಜ್ಯ ಹಾಗೂ ಜಿಲ್ಲಾ ಸಂಚಾರಕ್ಕೂ ಕೂಡಲೇ ಬ್ರೇಕ್ ಹಾಕಲಾಯಿತು. ಜೊತೆಗೆ ಡ್ರೋನ್ ಕ್ಯಾಮೆರಾ ಮೂಲಕ ಇಡೀ ಜಿಲ್ಲೆಯ ಮೇಲೆ ನಿಗಾವಹಿಸಲಾಗಿತ್ತು. ಅಲ್ಲದೇ ಜಿಲ್ಲಾಸ್ಪತ್ರೆಯನ್ನು ಕೋವಿಡ್ ಆಸ್ಪತ್ರೆಯಾಗಿ ಮಾರ್ಪಾಡು ಮಾಡಿ, ಶಂಕಿತರ ನಿಗಾ ವಹಿಸಲಾಯಿತು. ಇದೆಲ್ಲದರ ಫಲವಾಗಿ ಈಗ ಜಿಲ್ಲೆ ಸೇಫ್ ಝೋನ್‍ನಲ್ಲಿದೆ ಎಂದು ಸಚಿವ ಸುರೇಶ್ ಕುಮಾರ್ ಕೊರೊನಾ ವಾರಿಯರ್ಸ್ ಗೆ ಪುಷ್ಪವೃಷ್ಠಿ ಸುರಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

ನೆರೆ ಜಿಲ್ಲೆ, ನೆರೆ ರಾಜ್ಯಗಳಲ್ಲಿ ಕೊರೊನಾ ತಾಂಡವವಾಡುತ್ತಿದ್ದರೂ ಹಾಟ್‍ಸ್ಪಾಟ್ ಜಿಲ್ಲೆಗಳ ಮಧ್ಯೆಯಿದ್ರೂ ಚಾಮರಾಜನಗರದಲ್ಲಿ ಯಾವುದೇ ಪ್ರಕರಣ ಪತ್ತೆಯಾಗಿಲ್ಲ. ಕಳೆದ 1 ವಾರದಿಂದ ಯಾರನ್ನೂ ನಿಗಾದಲ್ಲಿಡದೆ ಕೊರೊನಾ ಮುಕ್ತ ಜಿಲ್ಲೆಯಾಗಿ ಮುಂದುವರಿದಿದೆ.

Comments

Leave a Reply

Your email address will not be published. Required fields are marked *