9 ತಿಂಗಳ ತುಂಬು ಗರ್ಭಿಣಿಯಾಗಿದ್ದರೂ ನರ್ಸ್ ಸೇವೆ- ಸಿಎಂ ಅಭಿನಂದನೆ

– ಪ್ರತಿ ದಿನ ಬಸ್ಸಲ್ಲೇ ಪ್ರಯಾಣಿಸಿ ಸೇವೆಗೆ ಹಾಜರ್
– ವಿಶ್ರಾಂತಿ ಪಡೆಯುವಂತೆ ಸೂಚಿಸಿದ ಸಿಎಂ

ಶಿವಮೊಗ್ಗ: ಕುಂಟು ನೆಪವೊಡ್ಡಿ ಕೆಲಸಕ್ಕೆ ರಜೆ ಹಾಕುವವರ ಮಧ್ಯೆ ಇಲ್ಲೊಬ್ಬ ಕೊರೊನಾ ವಾರಿಯರ್ ಇತರರಿಗೆ ಮಾದರಿಯಾಗಿದ್ದು, 9 ತಿಂಗಳ ತುಂಬು ಗರ್ಭಿಣಿಯಾಗಿದ್ದರೂ ನರ್ಸ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಇವರ ಕಾರ್ಯಕ್ಕೆ ಸ್ವತಃ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮನಸೋತಿದ್ದಾರೆ.

ಒಂಭತ್ತು ತಿಂಗಳ ತುಂಬು ಗರ್ಭಿಣಿಯಾಗಿದ್ದರೂ ರಜೆ ತೆಗೆದುಕೊಳ್ಳದೆ ಜಿಲ್ಲೆಯ ತೀರ್ಥಹಳ್ಳಿಯ ಶ್ರೀ ಜಯಚಾಮರಾಜೇಂದ್ರ ತಾಲೂಕು ಆಸ್ಪತ್ರೆಯಲ್ಲಿ ಶ್ರೀ ರೂಪ ಅವರು ನರ್ಸ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ವೃತ್ತಿಪರತೆಯನ್ನು ಮನಗಂಡ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಅಭಿನಂದನೆ ಸಲ್ಲಿಸಿದ್ದಾರೆ. ಶ್ರೀ ರೂಪ ಅವರ ಮೊಬೈಲ್‍ಗೆ ದೂರವಾಣಿ ಕರೆ ಮಾಡಿ ಮಾತನಾಡಿದ ಸಿಎಂ, ನರ್ಸ್ ಕರ್ತವ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಅಲ್ಲದೆ ಕೂಡಲೇ ರಜೆ ತೆಗೆದುಕೊಂಡು ಮನೆಯಲ್ಲಿ ವಿಶ್ರಾಂತಿ ಪಡೆಯುವಂತೆ ಸೂಚನೆ ನೀಡಿದರು. ಇದನ್ನೂ ಓದಿ: 9 ತಿಂಗಳ ತುಂಬು ಗರ್ಭಿಣಿಯಾಗಿದ್ದರೂ ಕೊರೊನಾ ವಾರಿಯರ್

ಶ್ರೀ ರೂಪ ಅವರು ಶಿವಮೊಗ್ಗದ ಗಾಜನೂರು ಗ್ರಾಮದಿಂದ 60 ಕಿ.ಮೀ ದೂರವಿರುವ ತೀರ್ಥಹಳ್ಳಿ ಪಟ್ಟಣಕ್ಕೆ ಪ್ರತಿದಿನ ಬಸ್ಸಿನಲ್ಲೇ ಪಯಣಿಸಿ ಸೇವೆ ಮಾಡುತ್ತಿದ್ದಾರೆ. 9 ತಿಂಗಳು ಗರ್ಭಿಣಿಯಾಗಿದ್ದರೂ ಪ್ರತಿದಿನ ಸುಮಾರು 120 ಕಿ.ಮೀ ಪ್ರಯಾಣ ಮಾಡುವ ಇವರು ಕೊರೊನಾ ವಾರಿಯರ್ಸ್ ಶಕ್ತಿ ಏನು ಅನ್ನುವುದನ್ನು ತೋರಿಸಿಕೊಟ್ಟಿದ್ದಾರೆ. ಹೀಗಾಗಿ ಸಿಎಂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Comments

Leave a Reply

Your email address will not be published. Required fields are marked *