ಟೊಮೆಟೊವನ್ನು ರಸ್ತೆಗೆ ಸುರಿದ ರೈತರು – ಮುಗಿಬಿದ್ದ ಮಹಿಳೆಯರು

– ಉಚಿತವಾಗಿ ಬಾಳೆಹಣ್ಣು ಕೊಟ್ಟ ರೈತ

ಕೋಲಾರ: ಕೊರೊನಾ ವೈರಸ್ ಜಿಲ್ಲೆಯ ರೈತರ ಪಾಲಿಗೆ ಮಾರಕವಾಗಿ ಪರಿಣಮಿಸಿದೆ. ಟೊಮೆಟೊ ಹಾಗೂ ಹೂವಿನ ಬೆಲೆ ತೀವ್ರವಾಗಿ ಕುಸಿತವಾದ ಪರಿಣಾಮ ರೈತರು ರಸ್ತೆಗೆ ಸುರಿಯುತ್ತಿದ್ದಾರೆ. ಇನ್ನೂ ರಸ್ತೆಗೆ ಸುರಿದ ಟೊಮೆಟೊಗಾಗಿ ಮಹಿಳೆಯರು ಮುಗಿಬಿದ್ದ ಸನ್ನಿವೇಶ ನಡೆದಿದೆ.

ಬೆಳೆದ ಟೊಮೆಟೊಗೆ ಬೆಲೆ ಇಲ್ಲದ ಕಾರಣ ಕೋಲಾರ ನಗರದ ಬಸ್ ನಿಲ್ದಾಣ ಸಮೀಪ ರಸ್ತೆ ಮಧ್ಯೆದಲ್ಲಿ ಟೊಮೆಟೊವನ್ನು ರೈತ ಸುರಿದಿದ್ದಾನೆ. ಇನ್ನೂ ರಸ್ತೆಯಲ್ಲಿದ್ದ ಟೊಮೆಟೊವನ್ನು ಅನೇಕ ಮಹಿಳೆಯರು ಎತ್ತಿಕೊಂಡಿದ್ದಾರೆ. ಕೊರೊನಾದಿಂದ ಒಂದು ಕಡೆ ರೈತರು ಬೆಳೆದ ಬೆಳೆಗೆ ಬೆಲೆ ಇಲ್ಲ, ಮತ್ತೊಂದು ಕಡೆ ಜನರಿಗೆ ತರಕಾರಿ ಸಿಗುತ್ತಿಲ್ಲ. ಹಾಗಾಗಿ ರೈತರಿಗೆ ಕೊರೊನಾ ಎಫೆಕ್ಟ್ ತಟ್ಟಿದೆ.

ಕೋಲಾರ ಜಿಲ್ಲೆ ಪೆಚ್ಚಾರ್ಲಹಳ್ಳಿ ಗ್ರಾಮದ ನಾಗೇಶ್ ಸುಮಾರು 5 ಎಕರೆಯಲ್ಲಿ ಚೆಂಡುಮಲ್ಲಿಗೆ ಹೂ ಬೆಳೆದಿದ್ದರು. ಬೆಳೆದ ಹೂವಿಗೆ ಉತ್ತಮ ಬೆಲೆ ಮತ್ತು ಮಾರುಕಟ್ಡೆ ಸಿಗದೆ ರೈತ ಕಂಗಾಲಾಗಿದ್ದಾನೆ. ಆದ್ದರಿಂದ ಬೆಲೆ ಇಲ್ಲದೆ ಕಂಗಾಲಾಗಿ ಗಿಡದಲ್ಲಿದ್ದ ಹೂ ಕಿತ್ತು ತಿಪ್ಪೆಗೆ ಸುರಿಯತ್ತಿದ್ದಾನೆ.

ಕೋಲಾರ ತಾಲೂಕಿನ ಕಾಕಿನತ್ತ ಗ್ರಾಮದ ನಾಗರಾಜ್ ತನ್ನ ಆರು ಎಕರೆ ಭೂಮಿಯಲ್ಲಿ ಬಾಳೆಹಣ್ಣು ಬೆಳೆದಿದ್ದನು. ಆದರೆ ಲಕ್ಷಾಂತರ ರೂಪಾಯಿ ಬೆಲೆಯ ಬಾಳೆಹಣ್ಣು ತೋಟದಲ್ಲೇ ಕೊಳೆಯುತ್ತಿದೆ. ಬಾಳೆ ಹಣ್ಣನ್ನು ಮಾರುಕಟ್ಟೆಗೂ ಹಾಕಲಾಗದೆ, ತೋಟದಲ್ಲೂ ಉಳಿಸಿಕೊಳ್ಳಲಾಗದೆ ರೈತ ಪರದಾಡುತ್ತಿದ್ದನು. ಕೊನೆಗೆ ರೈತ ನಾಗರಾಜ್ ಹಾಗೂ ಕುಟುಂಬಸ್ಥರು ಹಣ್ಣಾಗಿರುವ ಬಾಳೆಹಣ್ಣನ್ನು ಹಳ್ಳಿ ಜನರಿಗೆ ಉಚಿತವಾಗಿ ಹಂಚುವ ಕೆಲಸ ಮಾಡಿದ್ದಾರೆ.

Comments

Leave a Reply

Your email address will not be published. Required fields are marked *