ಪಾದರಾಯನಪುರ ರಹಸ್ಯ ಬಯಲು – ಮಸೀದಿಯಲ್ಲಿ ವಿದೇಶಿ ತಬ್ಲಿಘಿಗಳಿಗೆ ಆಶ್ರಯ

ಬೆಂಗಳೂರು: ಈಗ ಎಲ್ಲಿ ನೋಡಿದ್ರೂ ಬೆಂಗಳೂರಿನ ಪಾದರಾಯನಪುರದ್ದೇ ಚರ್ಚೆ. ಕೊರೊನಾ ವಾರಿಯರ್ಸ್ ಮೇಲೆ ಸಾಮೂಹಿಕವಾಗಿ ದಾಳಿ ನಡೆಸಿದ ಬಳಿಕ ಪಾದರಾಯನಪುರದೊಳಗಿನ ಒಂದೊಂದೇ ರಹಸ್ಯಗಳು ಬಯಲಾಗ್ತಿವೆ.

ಪಾದರಾಯನಪುರಕ್ಕೆ ವಿದೇಶಿ ತಬ್ಲಿಘಿಗಳ ನಂಟಿರುವ ಬಗ್ಗೆ ಮಾಹಿತಿ ಹೊರಬಿದ್ದಿದೆ. ಇಲ್ಲಿನ ಮಸೀದಿಯೊಂದರಲ್ಲಿ ಪಾಸ್‍ಪೋರ್ಟ್ ಅವಧಿ ಮುಗಿದ ಇಂಡೋನೇಷ್ಯಾ ಮತ್ತು ಕಿರ್ಗಿಸ್ಥಾನದ 19 ಮಂದಿಗೆ ಆಶ್ರಯ ನೀಡಲಾಗಿತ್ತು. ಈ ವಿಚಾರ ಶಾಸಕ ಜಮೀರ್ ಅಹ್ಮದ್ ಮತ್ತು ಕಾರ್ಪೋರೇಟರ್ ಇಮ್ರಾನ್ ಪಾಶಾಗೆ ಗೊತ್ತಿದ್ದರೂ ಮುಚ್ಚಿಟ್ಟಿದ್ದರು ಎಂಬ ಆರೋಪ ಕೇಳಿಬಂದಿದೆ.

ಮಾಹಿತಿ ಮುಚ್ಚಿಟ್ಟವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಸೂರ್ಯಪ್ರಸಾದ್  ಜೆಜೆ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ತಬ್ಲಿಘಿ ಧರ್ಮಪ್ರಚಾರಕರಿಂದಲೇ ಪಾದರಾಯನಪುರದಲ್ಲಿ ಸೋಂಕು ಹರಡಿತಾ ಎಂಬ ಪ್ರಶ್ನೆಯೂ ಎದ್ದಿದೆ. ಕೇವಲ ಜೆಜೆ ನಗರ ಒಂದರಲ್ಲೇ 20ಕ್ಕೂ ಹೆಚ್ಚು ಸೋಂಕಿತರು ಪತ್ತೆಯಾಗಿದ್ದರು.

ಪಾದರಾಯನಪುರ ಗಲಭೆ ಬಗ್ಗೆ ರಾಜ್ಯ ಸರ್ಕಾರದಿಂದ ಹೈಕೋರ್ಟ್ ವರದಿ ಕೇಳಿದೆ. ವೈದ್ಯರು ಮತ್ತು ಪೊಲೀಸರ ಮೇಲಿನ ದಾಳಿಗೆ ಕಳವಳ ವ್ಯಕ್ತಪಡಿಸಿದ ಹೈಕೋರ್ಟ್, ಮುಂದೆ ಇಂತಹ ಘಟನೆಗಳು ನಡೆಯದಿರಲು ಏನು ಕ್ರಮ ಕೈಗೊಳ್ಳುತ್ತಿದ್ದೀರಿ ಎಂದು ಪ್ರಶ್ನಿಸಿದೆ. ಆರೋಗ್ಯ, ಆಶಾ ಕಾರ್ಯಕರ್ತರಿಗೆ ಸಶಸ್ತ್ರ ಪೊಲೀಸರಿಂದ ಭದ್ರತೆ ನೀಡಲು ಸಾಧ್ಯವೇ ತಿಳಿಸಿ ಎಂದಿದೆ. ಇದನ್ನೂ ಓದಿ: 21 ತಬ್ಲಿಘಿಗಳನ್ನು ಪತ್ತೆಹಚ್ಚಿದ್ದ ಇನ್ಸ್‌ಪೆಕ್ಟರ್‌ಗೆ ಕೊರೊನಾ

ದೆಹಲಿಯ ತಬ್ಲಿಘಿ ಜಮಾತ್ ಕಾರ್ಯಕ್ರಮಕ್ಕೆ ತೆರಳಿದ ವ್ಯಕ್ತಿಗಳು ಕೂಡಲೇ ಆಸ್ಪತ್ರೆಗೆ ತೆರಳಿ ಆರೋಗ್ಯ ಪರೀಕ್ಷೆ ನಡೆಸಬೇಕೆಂದು ಸರ್ಕಾರ ಸೂಚನೆ ನೀಡಿತ್ತು.

ಈ ಹಿಂದೆ ಮಹಾರಾಷ್ಟ್ರದಲ್ಲಿ ಒಟ್ಟು 21 ತಬ್ಲಿಘಿಗಳು ಮಸೀದಿ ಮತ್ತು ವಿದ್ಯಾ ಕೇಂದ್ರದಲ್ಲಿ ಅಡಗಿ ಕುಳಿತಿದ್ದರು. ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ ಈ ತಬ್ಲಿಘಿಗಳನ್ನು ಕ್ವಾರಂಟೈನ್ ಕೇಂದ್ರಕ್ಕೆ ಹಾಕಿದ್ದರು. ಪರೀಕ್ಷೆಯ ವೇಳೆ ಈ ಎಲ್ಲ ತಬ್ಲಿಘಿಗಳಿಗೆ ಕೊರೊನಾ ಪಾಸಿಟಿವ್ ಬಂದಿತ್ತು. ದಾಳಿ ಬಳಿಕ ಮಹಾರಾಷ್ಟ್ರ ಪೊಲೀಸರು ಆಶ್ರಯ ನೀಡಿದ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದರು.

Comments

Leave a Reply

Your email address will not be published. Required fields are marked *