ಜಮಾತ್‍ಗೆ ತೆರಳಿದ್ದ ವಿಷಯ ಮುಚ್ಚಿಟ್ಟ – ತಾಯಿಯ ಜೊತೆ ಮಗನೂ ಸೋಂಕಿಗೆ ಬಲಿ

– ಕುಟುಂಬದ 8 ಮಂದಿಗೆ ಕೊರೊನಾ ಸೋಂಕು

ಭೋಪಾಲ್: ದೆಹಲಿಯ ನಿಜ್ಜಾಮುದ್ದೀನ್‍ಲ್ಲಿರುವ ತಬ್ಲಿಘಿ ಮರ್ಕಜ್ ಜಮಾತ್‍ನಲ್ಲಿ ಭಾಗಿಯಾಗಿದ್ದ ವ್ಯಕ್ತಿಯೊಬ್ಬ ತನ್ನ ಪ್ರಯಾಣ ಮಾಹಿತಿ ಗೌಪ್ಯವಾಗಿಟ್ಟು, ತನ್ನ ಜೊತೆ ಹೆತ್ತ ತಾಯಿಯನ್ನೇ ಬಲಿ ಪಡೆದುಕೊಂಡಿದ್ದಾನೆ.

ಮಧ್ಯಪ್ರದೇಶದ ಖಾರ್ಗೊನ್‍ನಲ್ಲಿ ಈ ಘಟನೆ ನಡೆದಿದೆ. ಜಮಾತ್‍ನಲ್ಲಿ ಭಾಗಿಯಾಗಿದ್ದ ವ್ಯಕ್ತಿ ವಿಷಯ ಮುಚ್ಚಿಟ್ಟ ಹಿನ್ನೆಲೆಯಲ್ಲಿ ಸೋಂಕಿತ ವ್ಯಕ್ತಿಯ ತಾಯಿಯೂ ಸೇರಿ ಕುಟುಂಬದ ಎಂಟು ಮಂದಿ ಸದಸ್ಯರಿಗೆ ಈಗ ಸೋಂಕು ತಗುಲಿದೆ. ಇಡೀ ಕುಟುಂಬ ಈಗ ಕೊರೊನಾ ಸೋಂಕಿನಿಂದ ಬಳಲುತ್ತಿದೆ.

ಕಳೆದ ತಿಂಗಳು ಖಾರ್ಗೊನ್ ಮೂಲದ ವ್ಯಕ್ತಿ ಜಮಾತ್‍ನಲ್ಲಿ ಭಾಗಿಯಾಗಿ ಸ್ವ-ಗ್ರಾಮಕ್ಕೆ ವಾಪಸ್ ಆಗಿದ್ದ. ನಿಜ್ಜಾಮುದ್ದೀನ್ ಮರ್ಕಜ್ ಪ್ರಕರಣ ಬೆಳಕಿಗೆ ಬಂದ ಬಳಿಕವೂ ಸರ್ಕಾರಕ್ಕೆ ಯಾವುದೇ ಮಾಹಿತಿ ನೀಡಲಿಲ್ಲ. ಅಲ್ಲದೇ ಕ್ವಾರಂಟೈನ್ ನಿಯಮಗಳನ್ನು ಪಾಲಿಸದೆ ತನ್ನ ಕುಟುಂಬ ಸದಸ್ಯರ ಜೊತೆ ವಾಸಿಸುತ್ತಿದ್ದ. ಪರಿಣಾಮ ಕುಟುಂಬದ ಎಲ್ಲ ಸದಸ್ಯರಿಗೆ ಸೋಂಕು ಹರಡಿಕೊಂಡಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಈ ವ್ಯಕ್ತಿಯಲ್ಲಿ ಸೋಂಕಿನ ಲಕ್ಷಣಗಳು ಕಂಡು ಬಂದ ಬಳಿಕ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸ್ಯಾಂಪಲ್ ಪಡೆದು ಲ್ಯಾಬ್ ವರದಿಗಳನ್ನು ಗಮನಿಸಿದಾಗ ಕೊರೊನಾ ಸೋಂಕು ದೃಢಪಟ್ಟಿದೆ. ಅಲ್ಲದೇ ವ್ಯಕ್ತಿಯ ಪ್ರಯಾಣ ಹಿನ್ನೆಲೆಯಲ್ಲಿ ತಬ್ಲಿಘಿ ಜಮಾತ್‍ನಲ್ಲಿ ಭಾಗಿಯಾಗಿದ್ದು ಸ್ಪಷ್ಟವಾಗಿತ್ತು.

ಸೋಂಕು ಕಂಡ ಬಂದ ಬೆನ್ನಲ್ಲೇ ಇಡೀ ಕುಟುಂಬವನ್ನು ಕ್ವಾರಂಟೈನ್ ಮಾಡಿ ಟೆಸ್ಟ್ ಮಾಡಲಾಗಿತ್ತು. ಸೋಂಕಿತ ವ್ಯಕ್ತಿಯೂ ಸೇರಿ ಎಂಟು ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಈ ವೇಳೆಗೆ ಸೋಂಕಿತ ವ್ಯಕ್ತಿ ಹಾಗೂ ಅವನ ತಾಯಿ ಇಬ್ಬರು ಮಾರಕ ವೈರಸ್‍ಗೆ ಬಲಿಯಾಗಿದ್ದಾರೆ.

Comments

Leave a Reply

Your email address will not be published. Required fields are marked *