ಜಮಾತ್‍ನಿಂದ ಮರಳಿದ್ದ ವೃದ್ಧ ಕೊರೊನಾದಿಂದ ಸಾವನ್ನಪ್ಪಿದ್ದಕ್ಕೆ ದಾಖಲೆ ಇಲ್ಲ: ಬೀದರ್ ಡಿಸಿ

ಬೀದರ್: ಜಮಾತ್‍ನಲ್ಲಿ ನಡೆದ ಸಮಾವೇಶದಲ್ಲಿ ಭಾಗಿಯಾಗಿದ್ದ ಬೀದರ್ ಮೂಲದ ವೃದ್ಧ ಕೊರೊನಾ ವೈರಸ್‍ನಿಂದ ಸಾವನ್ನಪ್ಪಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ. ಆದರೆ ಈ ಬಗ್ಗೆ ಪ್ರತಿಕ್ರಿಯಿಸಿರುವ ಬೀದರ್ ಡಿಸಿ ಎಚ್.ಆರ್ ಮಹಾದೇವ್ ಅವರು, ಕೊರೊನಾ ಸೋಂಕು ತಗುಲಿ ವೃದ್ಧ ಸಾವನ್ನಪ್ಪಿದ್ದಾರೆ ಎನ್ನಲು ಯಾವುದೇ ದಾಖಲೆಗಳಿಲ್ಲ ಎಂದು ತಿಳಿಸಿದ್ದಾರೆ.

ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ಅವರು, ಈ ಬಗ್ಗೆ ನಮಗೆ ಮಾಹಿತಿ ಇಲ್ಲ. ಅವರಿಗೆ ಎರಡು ಬಾರಿ ನಾವು ಟೆಸ್ಟ್ ಮಾಡಿದ್ದೇವೆ. ಎರಡು ಬಾರಿಯೂ ನೆಗೆಟಿವ್ ಬಂದಿದೆ. ಅವರು ಕೊರೊನಾ ಪಾಸಿಟಿವ್‍ಯಿಂದ ಸಾವನ್ನಪ್ಪಿದ್ದಾರೆ ಎಂಬುದಕ್ಕೆ ನಮ್ಮಲ್ಲಿ ಯಾವುದೇ ದಾಖಲಾತಿ ಇಲ್ಲ. 28 ಜನರ ಮಾದರಿ ತಪಾಸಣೆ ಬಳಿಕವೇ 11 ಮಂದಿಗೆ ಕೊರೊನಾ ಪಾಸಿಟಿವ್ ಇರುವ ವರದಿ ಬಂದಿದೆ ಎಂದು ಮಾಹಿತಿ ನೀಡಿದರು.

ಸೋಂಕಿತರ ಸಂರ್ಪಕದಲ್ಲಿರುವವರ ಮಾಹಿತಿ ಪಡೆಯಲಾಗುತ್ತಿದೆ. ಸೋಂಕಿತರು ಎಲ್ಲೆಲ್ಲಿ ಓಡಾಡಿದ್ದಾರೆ ಅದರ ಮಾಹಿತಿ ಕೂಡಾ ಪಡೆಯಲಾಗುತ್ತಿದೆ. ಸೋಂಕಿತರ ಸಂಪರ್ಕದಲ್ಲಿ ಇರುವವರಲ್ಲಿ ಸೋಂಕಿತ ಲಕ್ಷಣಗಳು ಕಂಡು ಬಂದಿದೆಯಾ ಎಂದು ನಮ್ಮ ತಂಡ ನಿಗಾ ವಹಿಸುತ್ತಿದೆ. ಇನ್ನು ಎರಡು ದಿನಗಳಲ್ಲಿ ಎಲ್ಲರನ್ನು ಗುರುತಿಸುವ ಕೆಲಸ ಮಾಡುತ್ತೇವೆ. ಲಕ್ಷಣಗಳು ಕಂಡು ಬಂದರೆ ಅವರ ರಕ್ತ ಹಾಗೂ ಗಂಟಲಿನ ಧ್ರವದ ಮಾದರಿಯನ್ನ ಪ್ರಯೋಗಾಲಯಕ್ಕೆ ರವಾನಿಸುತ್ತೇವೆ.

ಬಸವಕಲ್ಯಾಣ, ಮನ್ನಾಏಖೇಳ್ಳಿ ಹಾಗೂ ಬೀದರ್ ನ ಓಲ್ಡ್ ಸಿಟಿಯನ್ನ 28 ದಿನಗಳ ಕಾಲ ಸಂಪೂರ್ಣ ಬಂದ್ ಮಾಡಲಾಗಿದೆ. ಲಾಕ್‍ಡೌನ್ ಮತ್ತಷ್ಟು ಬೀಗಿ ಮಾಡುತ್ತೇವೆ. ಆದರೆ ಅಗತ್ಯ ವಸ್ತುಗಳನ್ನ ಮನೆ ಮನೆಗೆ ತಲುಪಿಸುವ ಕೆಲಸ ಮಾಡುತ್ತೇವೆ ಎಂದು ಡಿಸಿ ಹೇಳಿದರು.

Comments

Leave a Reply

Your email address will not be published. Required fields are marked *