ಶಬರಿಮಲೆಗೂ ತಟ್ಟಿದ ಕೊರೊನಾ ಬಿಸಿ- ದೇವಸ್ಥಾನಕ್ಕೆ ಬರದಂತೆ ಆಡಳಿತ ಮಂಡಳಿ ಸೂಚನೆ

ತಿರುವನಂತಪುರಂ: ಕೊರೊನಾ ವೈರಸ್ ಕೇರಳದಲ್ಲಿ ಸ್ವಲ್ಪ ವೇಗವಾಗಿಯೇ ಹರಡುತ್ತಿದ್ದು, ನಿನ್ನೆಯಷ್ಟೇ 12ಜನರಲ್ಲಿ ಕಾಣಿಸಿಕೊಂಡಿದ್ದ ಮಹಾಮಾರಿ ಇಂದು 19 ಜನರಲ್ಲಿ ಪತ್ತೆಯಾಗಿದೆ. ಹೀಗಾಗಿ ಶಬರಿಮಲೆ ಅಯ್ಯಪ್ಪಸ್ವಾಮಿ ದೇವಸ್ಥಾನಕ್ಕೆ ಬರಬೇಡಿ ಎಂದು ಶಬರಿಮಲೆ ಆಡಳಿತ ಮಂಡಳಿ ಭಕ್ತರಿಗೆ ಮನವಿ ಮಾಡಿದೆ.

ಕೊರೊನಾ ಸೋಂಕು ಹರಡುವ ಭೀತಿ ಹಿನ್ನೆಲೆ ಭಕ್ತರು ಶಬರಿಮಲೆ ದೇವಸ್ಥಾನಕ್ಕೆ ಬರುವುದನ್ನು ಕೆಲವು ದಿನಗಳ ಕಾಲ ನಿಲ್ಲಿಸಿ, ಸಾರ್ವಜನಿಕ ಸಭೆಗಳನ್ನ ಒಳಗೊಂಡ ಹಬ್ಬಗಳಲ್ಲಿ ಭಾಗಿಯಾಗಬಾರದು ಎಂದು ದೇವಸ್ವಂ ಆಡಳಿತ ಮಂಡಳಿಯ ಅಧ್ಯಕ್ಷ ಎನ್.ವಾಸು ಭಕ್ತರಲ್ಲಿ ಮನವಿ ಮಾಡಿದ್ದಾರೆ.

ಶುಕ್ರವಾರದಿಂದ ತಿಂಗಳ ಪೂಜೆ ಆರಂಭವಾಗಲಿದೆ. ಇಂದಿನಿಂದ ಮಾರ್ಚ್ 31ರವರೆಗೆ ಕೇರಳದಲ್ಲಿ ಸಿನಿಮಾ ಥಿಯೇಟರ್‍ಗಳು ಬಂದ್ ಆಗಲಿವೆ. ಕೊಚ್ಚಿಯಲ್ಲಿ ನಡೆದ ವಿವಿಧ ಮಲಯಾಳಂ ಸಿನಿಮಾ ಸಂಸ್ಥೆಗಳ ಸಭೆಯಲ್ಲಿ ನಿರ್ಧರಿಸಲಾಗಿದೆ. ಇಂದಿನಿಂದ ಕೇರಳದಲ್ಲಿ ಸಿನಿಮಾ ಪ್ರದರ್ಶನಗಳು ನಡೆಯುವುದಿಲ್ಲ. ಕೊರೊನಾ ವೈರಸ್ ಭೀತಿ ಹಿನ್ನೆಲೆ ಕೇರಳದಲ್ಲಿ ಶಾಲೆಗಳಿಗೆ ರಜೆ ಘೋಷಿಸಲಾಗಿದ್ದು, ಎಸ್‍ಎಸ್‍ಎಲ್‍ಸಿ, ಪಿಯುಸಿ ಪರೀಕ್ಷೆಗಳು ಎಂದಿನಂತೆ ನಡೆಯಲಿವೆ.

ಮಹಾಮಾರಿ ಕೊರೊನಾ ದೇಶಾದ್ಯಂತ ವ್ಯಾಪಿಸುತ್ತಿದ್ದು, ಸೋಂಕಿತರ ಸಂಖ್ಯೆ 61ಕ್ಕೆ ಹೆಚ್ಚಿದೆ. ಬೆಂಗಳೂರಲ್ಲಿ ನಾಲ್ವರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದ್ದು, ರಾಜ್ಯದಲ್ಲಿ ಕೊರೋನಾ ಎಮೆರ್ಜೆನ್ಸಿ ಸೃಷ್ಟಿಯಾಗಿದೆ. ಹೀಗಾಗಿ ಇನ್ನೊಂದು ವಾರ ರಾಜ್ಯದಲ್ಲೂ ಸಿನಿಮಾ ಪ್ರದರ್ಶನ ಬಂದ್ ಸಾಧ್ಯತೆ ಇದೆ. ಮಾರ್ಚ್ 16ರವರೆಗೆ ಥಿಯೇಟರ್ ಬಂದ್ ಮಾಡುವ ನಿರೀಕ್ಷೆ ಇದೆ. ಕೇರಳದಲ್ಲಿ ಇಂದಿನಿಂದಲೇ ಥಿಯೇಟರ್‍ಗಳನ್ನು ಬಂದ್ ಮಾಡಲಾಗಿದೆ. ಕೊರೊನಾ ಭಯಕ್ಕೆ ಜನ ಮನೆಯಿಂದ ಹೊರಬರುತ್ತಿಲ್ಲ. ಹೀಗಾಗಿ ದೇವಸ್ಥಾನಗಳಲ್ಲೂ ಭಕ್ತರ ಸಂಖ್ಯೆ ಇಳಿಮುಖವಾಗಿದ್ದು, ಬಸ್, ಟ್ಯಾಕ್ಸಿಗಳು ಖಾಲಿ ಖಾಲಿ ಎನ್ನುವಂತಾಗಿದೆ.

Comments

Leave a Reply

Your email address will not be published. Required fields are marked *