ಸಂಸದರ ಪರಿಹಾರ ನಿಧಿಯಿಂದ ಒಂದು ಕೋಟಿ ರೂ. ನೀಡಿ: ಸ್ಪೀಕರ್ ಓಂ ಬಿರ್ಲಾ

ನವದೆಹಲಿ: ಪ್ರಪಂಚಾದ್ಯಂತ ಕೊರೊನಾ ಮಹಾಮಾರಿ ತಾಂಡವವಾಡುತ್ತಿದ್ದು, ದೇಶದಲ್ಲಿಯೂ ಸೋಂಕಿತರ ಸಂಖ್ಯೆ 933 ಕ್ಕೂ ಅಧಿಕವಾಗಿದೆ. ಹೀಗಾಗಿ ಎಲ್ಲ ನಟರು ಹಾಗೂ ಧನಿಕರು ಸಹಾಯ ಹಸ್ತ ಚಾಚುತ್ತಿದ್ದಾರೆ. ಇದರ ನಿಯಂತ್ರಣ ಅಗತ್ಯವಾಗಿದ್ದು, ಹೀಗಾಗಿ ಎಲ್ಲ ಸಂಸದರು ತಮ್ಮ ಪರಿಹಾರ ನಿಧಿಯಿಂದ ಕನಿಷ್ಟ ಒಂದು ಕೋಟಿ ರೂ.ಗಳನ್ನು ನೀಡುವಂತೆ ತಿಳಿಸಿದ್ದಾರೆ.

ಕೆಲ ಸಂಸದರು ಈಗಾಗಲೇ ತಮ್ಮ ಪ್ರದೇಶಾಭಿವೃದ್ಧಿ ನಿಧಿಯಿಂದ ಹಣ ನೀಡುತ್ತಿದ್ದಾರೆ. ಇನ್ನೂ ಕೆಲವರು ಬಿಡುಗಡೆ ಮಾಡಿಲ್ಲ. ಹೀಗಾಗಿ ಎಲ್ಲ ಸಂಸದರು ಕನಿಷ್ಟ ಒಂದು ಕೋಟಿ ರೂ. ಅನುದಾನವನ್ನು ಬಿಡುಗಡೆಗೊಳಿಸಬೇಕು ಎಂದು ಸೂಚಿಸಿದ್ದಾರೆ.

ಇಡೀ ದೇಶವನ್ನು ಲಾಕ್‍ಡೌನ್ ಮಾಡಿ ನಾಲ್ಕು ದಿನಗಳು ಮಾತ್ರ ಆಗಿದ್ದು, ಸೋಂಕಿತರ ಸಂಖ್ಯೆ ಆಗಲೇ ಸಾವಿರಕ್ಕೆ ತಲುಪುತ್ತಿದೆ. ಒಟ್ಟು 922 ಜನರಲ್ಲಿ ಸೋಂಕು ಪತ್ತೆಯಾಗಿದ್ದು, ಇದರಲ್ಲಿ 76 ಜನ ಗುಣಮುಖರಾಗಿ ಡಿಸ್‍ಚಾರ್ಜ್ ಆಗಿದ್ದಾರೆ. ಪ್ರಸ್ತುತ 830 ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ವಿಶ್ವಾದ್ಯಂತ 28,791 ಜನ ಸಾವನ್ನಪ್ಪಿದ್ದು, 6.21 ಲಕ್ಷ ಜನರಿಗೆ ಸೋಂಕು ತಗುಲಿದೆ. ಅಮೇರಿಕದಲ್ಲೇ ಹೆಚ್ಚು ಸೋಂಕಿತ ಪ್ರಕರಣಗಳಿದ್ದು, ಇಟಲಿ ಮೂರನೇ ಸ್ಥಾನದಲ್ಲಿದೆ. ಇದರ ಮಧ್ಯೆಯೇ ಇಂಗ್ಲೆಂಡ್‍ನಲ್ಲಿ ಒಟ್ಟು 1 ಸಾವಿರ ಜನ ಮೃತಪಟ್ಟಿದ್ದಾರೆ. ಯೂರೋಪ್‍ನಲ್ಲಿ 20 ಸಾವಿರ ಜನ ಸಾವನ್ನಪ್ಪಿದ್ದಾರೆ.

ಇದೆಲ್ಲದರ ಮಧ್ಯೆ ದೇಶದಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು, ದೆಹಲಿಯ ತಿಹಾರ್ ಜೈಲಿನಲ್ಲಿನ 356 ಜನ ಖೈದಿಗಳನ್ನು ತಾತ್ಕಾಲಿಕವಾಗಿ ಬಿಡುಗಡೆ ಮಾಡಲಾಗಿದೆ. ಸುಮಾರು 45 ದಿನಗಳ ಕಾಲ ಖೈದಿಗಳು ಹೊರಗಡೆಯೇ ಇರಲಿದ್ದಾರೆ. ಜೈಲಿನಲ್ಲಿ ಜನದಟ್ಟಣೆ ಉಂಟಾಗಬಾರದು ಎಂಬ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ.

Comments

Leave a Reply

Your email address will not be published. Required fields are marked *