ಬೈಕ್‍ನಲ್ಲಿ ಲಿಫ್ಟ್ ಕೊಡಲು ನಿರಾಕರಿಸಿದ್ದಕ್ಕೆ ಎಂಜಿನಿಯರ್‍ಗೆ ಥಳಿಸಿದ ಪೊಲೀಸ್

ಲಕ್ನೋ: ವ್ಯಕ್ತಿಯೊಬ್ಬರು ತನ್ನ ಬೈಕ್‍ನಲ್ಲಿ ಲಿಫ್ಟ್ ಕೊಡಲು ನಿರಾಕರಿಸಿದ್ದಕ್ಕೆ ಅವರನ್ನ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಥಳಿಸಿದ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.

ಉತ್ತರಪ್ರದೇಶ ಪವರ್ ಕಾರ್ಪೋರೇಷನ್ ಲಿಮಿಟೆಡ್(ಯುಪಿಪಿಸಿಎಲ್)ನಲ್ಲಿ ಕಿರಿಯ ಎಂಜಿನಿಯರ್ ಆಗಿರೋ ಕೈಲಾಶ್ ಚಂದ್ ಅವರನ್ನ ಸಬ್ ಇನ್ಸ್ ಪೆಕ್ಟರ್ ಸುರೇಂದ್ರ ತ್ಯಾಗಿ ಥಳಿಸಿದ್ದಾರೆ.

ಗುರುವಾರದಂದು ಸುರೇಂದ್ರ ತ್ಯಾಗಿ, ತನ್ನನ್ನು ಪೊಲೀಸ್ ಠಾಣೆವರೆಗೂ ಡ್ರಾಪ್ ಮಾಡುವಂತೆ ಕೈಲಾಶ್ ಅವರನ್ನ ಕೇಳಿದ್ರು. ಈ ವೇಳೆ ಕೈಲಾಶ್ ಲಿಫ್ಟ್ ಕೊಡಲು ನಿರಾಕರಿಸಿದ್ದು, ಕೋಪಗೊಂಡ ತ್ಯಾಗಿ ಅವರನ್ನ ಹೊಡೆದಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ತ್ಯಾಗಿ ಅವರು ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ಸಿಹಾನಿ ಗೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತ್ಯಾಗಿ ಅವರು ಲಿಫ್ಟ್ ಕೇಳಿದ ವೇಳೆ ಕೈಲಾಶ್, ಪವರ್ ಲೈನ್‍ವೊಂದರ ರಿಪೇರಿಗಾಗಿ ದೌಡಾಯಿಸುತ್ತಿದ್ದರು. ಹೀಗಾಗಿ ಲಿಫ್ಟ್ ಕೊಡಲು ನಿರಾಕರಿಸಿದ್ರು ಎಂದು ವರದಿಯಾಗಿದೆ. ಲಿಫ್ಟ್ ಕೊಡಲು ನಿರಾಕರಿಸಿದ್ದಕ್ಕೆ ಕೈಲಾಶ್‍ರನ್ನು ಥಳಿಸಿದ ತ್ಯಾಗಿ, ಇತರೆ ನಾಲ್ವರನ್ನು ಸಹಾಯಕ್ಕೆ ಕರೆದಿದ್ದು, ನಿನ್ನ ಮೇಲೆ ಸುಳ್ಳು ಕೇಸ್ ದಾಖಲಿಸ್ತೀನಿ ಅಂತ ಕೈಲಾಶ್‍ಗೆ ಬೆದರಿಕೆ ಹಾಕಿದ್ದರು ಎಂದು ವರದಿಯಲ್ಲಿ ಹೇಳಲಾಗಿದೆ.

ಕಿರಿಯ ಎಂಜಿನಿಯರ್‍ಗಳ ಒಕ್ಕೂಟದ ಅಧ್ಯಕ್ಷರಾದ ಸತ್ಯವೀರ್ ಸಿಂಗ್ ಪೊಲೀಸ್ ಠಾಣೆಗೆ ತೆರಳಿ ಈ ಬಗ್ಗೆ ದೂರು ದಾಖಲಿಸಿದ್ದಾರೆ. ಕೈಲಾಶ್ ಮೇಲೆ ಹಲ್ಲೆ ಮಾಡಿದ ಇನ್ಸ್ ಪೆಕ್ಟರ್ ವಿರುದ್ಧ ಕ್ರಮ ಕೈಗೊಳ್ಳಲು ವಿಫಲರಾದ್ರೆ ಯುಪಿಪಿಸಿಎಲ್‍ನ ಕಿರಿಯ ಎಂಜಿನಿಯರ್‍ಗಳೆಲ್ಲರೂ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ.

Comments

Leave a Reply

Your email address will not be published. Required fields are marked *