ನನ್ನ ಗಂಡನ ಸಾವಿಗೆ ಈಶ್ವರಪ್ಪನೇ ಕಾರಣ: ಸಂತೋಷ್ ಪತ್ನಿ ಕಣ್ಣೀರು

ಬೆಳಗಾವಿ: ನನ್ನ ಗಂಡ ಯಾವಾಗಲೂ ಬಿಜೆಪಿ ಕಾರ್ಯಕರ್ತ ಎಂದು ಎಲ್ಲರ ಬಳಿ ಹೇಳಿಕೊಳ್ಳುತ್ತಿದ್ದರು. ಆದರೆ ಇಂದು ಅದೇ ಬಿಜೆಪಿ ನನ್ನ ಗಂಡನನ್ನು ಸಮಾಧಿ ಮಾಡಿಬಿಟ್ಟಿತು ಎಂದು ಮೃತ ಗುತ್ತಿಗೆದಾರ ಸಂತೋಷ್ ಪತ್ನಿ ಜಯಶ್ರೀ ಕಣ್ಣೀರು ಹಾಕಿದ್ದಾರೆ.

ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಸಂತೋಷ್ ಪತ್ನಿ, ನನ್ನ ಪತಿ ಈಶ್ವರಪ್ಪ ಭರವಸೆ ಮೇಲೆಯೇ ಕೆಲಸ ಮಾಡುತ್ತಿದ್ದರು. ಕಳೆದ ವಾರದಿಂದ ಅವರು ಕಾಮಗಾರಿಯ ಬಿಲ್ ಪಾಸ್ ಮಾಡುತ್ತಿಲ್ಲ. ಶೇ.40 ರಷ್ಟು ಲಂಚ ಕೊಟ್ಟರೆ ಮಾತ್ರವೇ ಬಿಲ್ ಪಾಸ್ ಮಾಡುತ್ತೇನೆ ಎಂದಿದ್ದರು. ಈ ವಿಚಾರವಾಗಿ ಈಶ್ವರಪ್ಪನ ಬಳಿ ಮಾತನಾಡಲು ಹೋದಾಗ ಬೆಳಗ್ಗೆ ಬನ್ನಿ, ಸಂಜೆ ಬನ್ನಿ ಎಂದು ಹೇಳಿ ಆಟ ಆಡಿಸುತ್ತಿದ್ದರು ಎಂದು ಗಂಭೀರ ಆರೋಪ ಮಾಡಿದರು. ಇದನ್ನೂ ಓದಿ: ಎಫ್‌ಎಸ್‌ಎಲ್‌ ವರದಿಯ ಬಳಿಕ ಸಾವಿಗೆ ನಿಖರ ಕಾರಣ ತಿಳಿಯಲಿದೆ: ಉಡುಪಿ ಎಸ್‌ಪಿ

ಬಿಜೆಪಿ ಸರ್ಕಾರಕ್ಕಾಗಿ ಕಷ್ಟ ಪಟ್ಟು ನನ್ನ ಪತಿ ಕೆಲಸ ಮಾಡುತ್ತಿದ್ದರು. ಕೆಲಸದ ಬರದಲ್ಲಿ ದಿನಕ್ಕೆ ಕೇವಲ ಒಂದೇ ಬಾರಿ ಊಟ ಮಾಡುತ್ತಿದ್ದರು. ಬಿಜೆಪಿಗಾಗಿ ನಿಯತ್ತಿನಲ್ಲಿ ಕೆಲಸ ಮಾಡುತ್ತಿದ್ದ ನನ್ನ ಪತಿಯನ್ನು ಅವರು ಈತ ಬಿಜೆಪಿ ಕಾರ್ಯಕರ್ತನೇ ಅಲ್ಲ. ಸಂತೋಷ್ ಯಾರು ಎಂಬುದೇ ಗೊತ್ತಿಲ್ಲ ಎಂದಿದ್ದಾರೆ. ಯಾರು ಎಂಬುದೇ ಗೊತ್ತಿಲ್ಲ ಎಂದಾದರೆ ಫೋಟೋದಲ್ಲಿ ಹೇಗೆ ತಾನೆ ಕಾಣಿಸಿಕೊಳ್ಳಲು ಸಾಧ್ಯ ಎಂದು ಪ್ರಶ್ನಿಸಿ ಆಕ್ರೋಶ ಹೊರ ಹಾಕಿದರು.

ನನ್ನ ಪತಿ ಸಾವಿನ ಬಗ್ಗೆ ನನಗೆ ಗೊತ್ತಾಗಿದ್ದು, ಸ್ನೇಹಿತರ ಹಾಗೂ ಕುಟುಂಬದವರ ಫೋನ್ ಬಂದಾಗ. ತಕ್ಷಣ ಟಿವಿ ನೋಡಿದಾಗ ಅವರು ಆತ್ಮಹತ್ಯೆ ಮಾಡಿಕೊಂಡ ವಿಚಾರ ತಿಳಿಯಿತು. ನಿನ್ನೆ ರಾತ್ರಿ ಕೊನೆ ಬಾರಿ ಅವರು ಕಾಲ್ ಮಾಡಿದ್ದರು. ಎಂದಿನಂತೆ ಅವರು ಖಿನ್ನತೆಯಲ್ಲಿಯೇ ಇದ್ದರು. ಕಳೆದ 1 ತಿಂಗಳಿನಿಂದಲೂ ಅವರು ಖಿನ್ನತೆಯಲ್ಲಿದ್ದರು ಎಂದು ಕಂಬನಿ ಮಿಡಿದರು. ಇದನ್ನೂ ಓದಿ: ವರ್ಕ್‌ ಆರ್ಡರ್‌ ಇಲ್ಲದೇ 4 ಕೋಟಿ ಕಾಮಗಾರಿ ಮಾಡಿದ್ದ ಸಂತೋಷ್‌ – ಆತ್ಮಹತ್ಯೆಗೆ ಕಾರಣ ಏನು?

ನನ್ನ ಪತಿ ಸಾವಿಗೆ ಈಶ್ವರಪ್ಪ ಅವರೇ ಕಾರಣ. ಇನ್ನೂ ಎಷ್ಟು ಗುತ್ತಿಗೆದಾರರ ಜೀವನ ಇದೇ ರೀತಿಯಲ್ಲಿ ಅಂತ್ಯವಾಗಲಿದೆಯೋ ದೇವರೇ ಬಲ್ಲ. ನನ್ನ ಗಂಡನ ಸಾವಿಗೆ ನ್ಯಾಯ ಬೇಕು. ತನಿಖೆ ನಡೆಸುತ್ತೀರಾದರೆ ನಿಯತ್ತಾಗಿ ನಡೆಸಿ. ಅದು ಬಿಟ್ಟು ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನ ಮಾಡಬೇಡಿ ಎಂದು ವಿನಂತಿಸಿದರು.

Comments

Leave a Reply

Your email address will not be published. Required fields are marked *