ಒಂದು ಆ್ಯಪಲ್‍ನ ಕತೆ – ಸೇಬಿಗಾಗಿ ಬಿಗ್ ಮನೆಯಲ್ಲಿ ಸ್ಪರ್ಧಿಗಳಿಂದ ರಂಪಾಟ

ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳು ಒಂದು ಸೇಬಿಗಾಗಿ ಇಡೀ ದಿನ ಜಗಳವಾಡಿದ್ದು, ಮನೆಯಲ್ಲಿ ದೊಡ್ಡ ರಂಪಾಟವೇ ನಡೆದು ಹೋಗಿದೆ.

ಬುಧವಾರ ಸ್ಪರ್ಧಿ ಚೈತ್ರ ಕೊಟ್ಟೂರು ಅಡುಗೆ ಮನೆಯಲ್ಲಿ ಸೇಬು ತೆಗೆದುಕೊಂಡು ತಿಂದಿದ್ದಾರೆ. ಅವರು ಸೇಬು ತೆಗೆದುಕೊಳ್ಳುವ ಮೊದಲು ಅಡುಗೆ ತಂಡದಲ್ಲಿದ್ದ ಚಂದನ್ ಆಚಾರ್ಯ ಅವರ ಬಳಿ ಕೇಳಿದ್ದಾರೆ. ಆಗ ಚಂದನ್, ಚೈತ್ರ ಅವರಿಗೆ ಸೇಬು ತಿನ್ನಲು ಅನುಮತಿ ನೀಡಿ ಸುಜಾತ ಅವರಿಗೆ ಈ ವಿಷಯವನ್ನು ತಿಳಿಸಲು ಹೇಳುತ್ತಾರೆ.

ಮರುದಿನ ಬೆಳಗ್ಗೆ ಅಡುಗೆ ವಿಭಾಗದ ಚೀಫ್ ಆಗಿರುವ ಸುಜಾತ ಅವರು ಸೇಬು ಯಾರು ತಿಂದರು ಎಂದು ಪ್ರಶ್ನಿಸಿದ್ದಾರೆ. ಆಗ ಚೈತ್ರ ನಾನೇ ಸೇಬು ತಿಂದಿರುವುದು ಎಂದು ಹೇಳಿದ್ದಾರೆ. ಬಳಿಕ ನಾನೊಬ್ಬಳೇ ಸೇಬು ತಿನ್ನಲಿಲ್ಲ ಚಂದನ್ ಅವರಿಗೆ ಕೊಟ್ಟು, ಎಲ್ಲರಿಗೂ ಕೊಟ್ಟು ತಿಂದೆ ಎಂದು ಉತ್ತರಿಸಿದ್ದಾರೆ.

ತನ್ನ ಹೆಸರು ಹೇಳಿದ್ದರಿಂದ ರೊಚ್ಚಿಗೆದ್ದ ಚಂದನ್, ಚೈತ್ರ ಅವರ ಜೊತೆ ಜಗಳವಾಡಲು ಶುರು ಮಾಡುತ್ತಾರೆ. ಬಳಿಕ ಸುಜಾತ ಕೂಡ ಚೈತ್ರರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಜಗಳವಾಡಿ ಸುಮ್ಮನಾಗಿದ್ದ ಚಂದನ್, ಪದೇ ಪದೇ ಚೈತ್ರ ಅವರ ಬಳಿ ಹೋಗಿ ಮತ್ತೆ ಜಗಳವಾಡಲು ಶುರು ಮಾಡುತ್ತಾರೆ.

ಈ ವೇಳೆ ಚೈತ್ರ, ಚಂದನ್ ಮೇಲೆ ರೇಗಾಡುತ್ತಾರೆ. ಮತ್ತೆ ಇಬ್ಬರ ನಡುವೆ ಜಗಳ ಶುರುವಾಗಿದ್ದು, ಮುಗಿಯುವ ಲಕ್ಷಣ ಕಾಣುತ್ತಿರಲಿಲ್ಲ. ಇದರಿಂದ ರೊಚ್ಚಿಗೆದ್ದ ಜೈ ಜಗದೀಶ್ ಜೋರಾಗಿ ಗದರುತ್ತಾರೆ. ಬಳಿಕ ಚೈತ್ರ ಮನೆಯಲ್ಲಿ ಎಲ್ಲರೂ ನನ್ನನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಕಣ್ಣೀರು ಹಾಕಿದ್ದಾರೆ.

ಸುಜಾತ ಹಾಗೂ ಚಂದನ್ ವರ್ತನೆಯಿಂದ ಬೇಸತ್ತ ಚೈತ್ರ ತಿಂಡಿ ತಿನ್ನುವುದಿಲ್ಲ ಎಂದು ಹಠ ಮಾಡುತ್ತಾರೆ. ಮನೆಯಲ್ಲಿದ್ದ ಸ್ಪರ್ಧಿಗಳು ಎಷ್ಟೇ ಸಮಾಧಾನ ಮಾಡಿದರೂ ಚೈತ್ರ ತಿಂಡಿ ತಿನ್ನಲು ಒಪ್ಪುವುದಿಲ್ಲ. ಬಳಿಕ ವಾಸುಕಿ ವೈಭವ್, ಶೈನ್ ಶೆಟ್ಟಿ, ಕುರಿ ಪ್ರತಾಪ್, ಕಿಶನ್ ಸೇರಿ ಯುವತಿಯರು ಚೈತ್ರರನ್ನು ಸಮಾಧಾನ ಮಾಡುತ್ತಾರೆ.

Comments

Leave a Reply

Your email address will not be published. Required fields are marked *