ನಂದಿನಿ ಹಾಲಿನ ಲಾರಿ, ಅಂಬುಲೆನ್ಸ್ ನಡುವೆ ಭೀಕರ ಅಪಘಾತ- ಉರುಳಿ ಬಿದ್ದ ಈಚರ್

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಅಪಘಾತಗಳು ಹೆಚ್ಚುತ್ತಿದ್ದು, ಇಂದು ಬೆಳಗಿನ ಜಾವ 4 ಗಂಟೆಗೆ ನಂದಿನಿ ಹಾಲು ಸರಬರಾಜು ಮಾಡುವ ಕಂಟೈನರ್ ಮತ್ತು ಅಂಬುಲೆನ್ಸ್ ನಡುವೆ ಭೀಕರ ಅಪಘಾತ ಸಂಭವಿಸಿದೆ. ಅಂಬುಲೆನ್ಸ್ ಗೆ ಡಿಕ್ಕಿ ಹೊಡೆಯುತ್ತದೆ ಎಂದು ಕಂಟೈನರ್ ಚಾಲಕ ಬಲಕ್ಕೆ ತಿರುಗಿಸಿದ್ದು, ನಿಯಂತ್ರಣ ತಪ್ಪಿ ಡಿವೈಡರ್ ಮೇಲೆ ಏರಿ ವಾಹನ ಪಲ್ಟಿಯಾಗಿದೆ.

ಸಿಎಂ ಬಸವರಾಜ್ ಬೊಮ್ಮಯಿ ನೂತನ ನಿವಾಸದ ಕೂಗಳತೆ ದೂರದಲ್ಲಿ ಘಟನೆ ನಡೆದಿದ್ದು, ಆರ್.ಸಿ.ರೋಡ್ ನ ಹೋಟಲ್ ತಾಜ್ ಎಂಡ್ ಮುಂದೆ ಅಪಘಾತ ನಡೆದಿದೆ. ಕಂಟೈನರ್ ಲಾರಿಯನ್ನು ಕ್ರೇನ್ ಮೂಲಕ ಎತ್ತಲಾಗಿದೆ. ಇದನ್ನೂ ಓದಿ: ಬೆಂಗಳೂರು ಹೊರವಲಯದಲ್ಲಿ ರೇವ್ ಪಾರ್ಟಿ- ಅರೆನಗ್ನ ಸ್ಥಿತಿಯಲ್ಲಿ ಯುವತಿಯರ ಡ್ಯಾನ್ಸ್

ಅಂಬುಲೆನ್ಸ್ ಮತ್ತು ಕಂಟೈನರ್ ಚಾಲಕರಿಬ್ಬರಿಗೂ ಗಾಯಗಳಾಗಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಂಬುಲೆನ್ಸ್ ಮತ್ತು ನಂದಿನಿ ಹಾಲು ಸರಬರಾಜು ಮಾಡುವ ಕಂಟೈನರ್ ನಲ್ಲಿ ಚಾಲಕರು ಮಾತ್ರ ಇದ್ದ ಕಾರಣ ಯಾವುದೇ ಸಾವು ಸಂಭವಿಸಿಲ್ಲ. ವಾಹನಗಳಲ್ಲಿ ಯಾರಾದರೂ ಇದ್ದಿದ್ದರೆ ಭಾರೀ ಅನಾಹುತವಾಗುವ ಸಾಧ್ಯತೆ ಹೆಚ್ಚಾಗಿತ್ತು.

ಆರ್.ಸಿ.ರೋಡ್ ನ ಒಂದು ಭಾಗದ ರಸ್ತೆಗೆ ಟಾರ್ ಹಾಕುವ ಕಾರ್ಯ ನಡೆಯುತ್ತಿದೆ. ಹೀಗಾಗಿ ಮತ್ತೊಂದು ಭಾಗದ ರಸ್ತೆಯನ್ನು ದ್ವಿಮುಖ ಮಾರ್ಗವಾಗಿ ಮಾಡಿದ್ದಾರೆ. ಒನ್ ವೇ ಎಂದು ಎಂದಿನಂತೆ ಹೋಗುತ್ತಿದ್ದ ಕಂಟೈನರ್ ಚಾಲಕ ಮುಂದೆ ಅಂಬುಲೆನ್ಸ್ ಟಿಟಿ ಬಂದಿರುವುದನ್ನು ನೋಡಿ ಅಂಬುಲೆನ್ಸ್ ಗೆ ಡಿಕ್ಕಿಯಾಗುವುದನ್ನು ತಪ್ಪಿಸಲು ಹೋಗಿ ಡಿವೈಡರ್ ಮೇಲೆ ಹತ್ತಿದೆ. ಬಳಿಕ ಕಂಟೈನರ್ ಪಲ್ಟಿಯಾಗಿದೆ. ಅಂಬುಲೆನ್ಸ್ ಗೂ ಕಂಟೈನರ್ ಟಚ್ ಆಗಿದ್ದು, ಜಖಂ ಆಗಿದೆ.

ನಂದಿನಿ ಹಾಲು ಸರಬರಾಜು ಮಾಡುವ ವಾಹನ ಆಗಿದ್ದರಿಂದ ಅವಘಾತವಾದ ಬಳಿಕ ಮತ್ತೊಂದು ಕಂಟೈನರ್ ಕರೆಸಿ ಹಾಲಿನ ಲೋಡ್ ಬದಲಿಸಲಾಗಿದೆ. ಹೈ ಗ್ರೌಂಡ್ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments

Leave a Reply

Your email address will not be published. Required fields are marked *