ಜಕ್ಕೂರಿನಲ್ಲಿ ನಿರ್ಮಾಣ ಹಂತದ ಕಟ್ಟಡದ ಗೋಡೆ ಕುಸಿತ: 1 ಸಾವು

ಬೆಂಗಳೂರು: ನಿರ್ಮಾಣ ಹಂತದ ಕಟ್ಟಡದ ಮಣ್ಣಿನ ಗೋಡೆ ಕುಸಿದು ಓರ್ವ ಸಾವನ್ನಪ್ಪಿ, ಮತ್ತೋರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ಜಕ್ಕೂರು ಬಳಿಯ ನವ್ಯ ಲೇಔಟ್‍ನಲ್ಲಿ ನಡೆದಿದೆ.

ಮಧು (24) ಸೈಟ್ ಇಂಜಿನಿಯರ್ ಮೃತಪಟ್ಟ ದುರ್ದೈವಿ. ನಬೀಬ್ ಸಾಬ್ (56) ಗಂಭೀರವಾಗಿ ಗಾಯಗೊಂಡಿದ್ದಾರೆ. ಜಕ್ಕೂರಿನ ನವ್ಯನಗದಲ್ಲಿ ಚಂದ್ರಶೇಖರ್ ಎಂಬವರಿಗೆ ಸೇರಿದ ಕಟ್ಟಡ ನಿರ್ಮಾಣ ಕಾಮಗಾರಿ ಕಳೆದ ಮೂರು ತಿಂಗಳಿನಿಂದ ನಡೆಯುತ್ತಿತ್ತು. ಕಟ್ಟಡ ನಿರ್ಮಾಣ ಸಂಬಂಧ ನಾಲ್ಕು ಕಡೆ ಮಣ್ಣನ್ನು ತೋಡಿದ್ದರು. ಅಲ್ಲದೇ ಮಣ್ಣು ತೋಡಿರುವ ನಾಲ್ಕು ಕಡೆ ಕಾಂಕ್ರೀಟ್ ವಾಲ್ ನಿರ್ಮಿಸಬೇಕಿತ್ತು.

ಆದರೆ ಎಂಜಿನಿಯರ್ ಹಾಗೂ ಗುತ್ತಿಗೆದಾರ ಕೇವಲ ಮೂರು ಕಡೆ ಕಾಂಕ್ರೀಟ್ ಗೋಡೆ ಕಟ್ಟಿ, ಮತ್ತೊಂದು ಕಡೆ ಕೇವಲ ಇಟ್ಟಿಗೆಯಿಂದ ಜೋಡಿಸಿದ್ದರು. ಇಟ್ಟಿಗೆಯಿಂದ ಜೋಡಿಸಿದ್ದ ಗೋಡೆಯು ಏಕಾಏಕಿ ಕುಸಿದು ಬಿದ್ದಿದೆ. ಪರಿಣಾಮ ಕಟ್ಟಡದ ಕೆಳಗಡೆ ಇದ್ದ ಎಂಜಿನಿಯರ್ ಮಧು ಹಾಗೂ ನಬೀಬ್ ಸಾಬ್ ಮೇಲೆ ಮಣ್ಣಿನಡಿ ಸಿಲುಕಿಕೊಂಡಿದ್ದರು.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಇಬ್ಬರನ್ನು ಮಣ್ಣಿನಡಿಯಿಂದ ಹೊರತೆಗೆದಿದ್ದಾರೆ. ಆದರೆ ಎಂಜಿನಿಯರ್ ಮಧು ಮಣ್ಣು ಬಿದ್ದ ರಭಸಕ್ಕೆ ಸ್ಥಳದಲ್ಲೇ ಮೃತಪಟ್ಟರೆ, ನಬೀಬ್ ಸಾಬ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಕೂಡಲೇ ಹತ್ತಿರದ ಆಸ್ಪತ್ರೆಗೆ ರವಾನಿಸಲಾಗಿದ್ದು, ನಬೀಬ್ ಸ್ಥಿತಿ ಚಿಂತಜನಕವಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಘಟನೆ ಸಂಬಂಧ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣದ ದಾಖಲಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *