ಹಿಂಬಾಗಿಲ ಸಿಎಂ ಅವ್ರೇ ಎಲ್ಲಿ ನಿಮ್ಮ ಸಚಿವ ಸಂಪುಟ – ಬಿಎಸ್‍ವೈಗೆ ಕಾಂಗ್ರೆಸ್ ಟಾಂಗ್

– ಸರಣಿ ಟ್ವೀಟ್ ಮೂಲಕ ಮೋದಿ ವಿರುದ್ಧವೂ ಕಿಡಿ

ಬೆಂಗಳೂರು: ಸಚಿವ ಸಂಪುಟ ರಚನೆಯ ವಿಳಂಬ ಮಾಡುತ್ತಿರುವ ಸಿಎಂ ಬಿ.ಎಸ್.ಯಡಿಯೂರಪ್ಪ ಅವರಿಗೆ ಕಾಂಗ್ರೆಸ್ ಟಾಂಗ್ ಕೊಟ್ಟಿದೆ.

ಸಂಪುಟ ವಿಳಂಬ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್, ಹಿಂಬಾಗಿಲ ಸಿಎಂ ಬಿಎಸ್‍ವೈ ಅವರೇ ಎಲ್ಲಿ ನಿಮ್ಮ ಸಚಿವ ಸಂಪುಟ? ಆರ್‌ಎಸ್‌ಎಸ್, ಬಿಜೆಪಿಯ ಅಧಿಕಾರ ಹಂಚಿಕೆಯ ಕಿತ್ತಾಟಕ್ಕೆ ರಾಜ್ಯದ ಜನತೆಗೆ ಏಕೆ ತೊಂದರೆ ಕೊಡುತ್ತಿರುವಿರಿ? ಆಡಳಿತ ಯಂತ್ರವನ್ನು ಸ್ಥಗಿತಗೊಳಿಸಿದ್ದು ಯಾಕೆ? ಮಂತ್ರಿಗಳಿಗಾಗಿ, ಅಭಿವೃದ್ಧಿಯ ಕೆಲಸಗಳಿಗಾಗಿ ಜನತೆ ಇನ್ನೆಷ್ಟು ದಿನ ಕಾಯಬೇಕು ಎಂದು ಪ್ರಶ್ನಿಸಿದೆ.

ಪ್ರಧಾನಿ ನರೇಂದ್ರ ಮೋದಿ ವಿರುದ್ಧವೂ ಕಿಡಿಕಾರಿರುವ ಕಾಂಗ್ರೆಸ್, ಮೋದಿ ಅವರ ನೋಟು ರದ್ದತಿ, ಲೋಪದ ಜಿಎಸ್‍ಟಿಯಂತಹ ತುಘಲಕ್ ನಿರ್ಧಾರದಿಂದಾಗಿ ದೇಶದ ಮಾರುಕಟ್ಟೆ ವ್ಯವಸ್ಥೆ ಕುಸಿದಿದೆ. ವಾಹನಗಳ ಬಿಡಿಭಾಗ ಮಾರಾಟ ಕುಸಿತದ ಬೆನ್ನಲ್ಲೇ ಕಾರುಗಳ ಮಾರಾಟವೂ ನೆಲಕಚ್ಚಿದೆ. ಮಾರುತಿ ಸುಜುಕಿ ಸೇರಿದಂತೆ ದೇಶಿಯ, ಅಂತರಾಷ್ಟ್ರೀಯ ಮಟ್ಟದ ಹಲವು ಕಾರು ತಯಾರಕ ಸಂಸ್ಥೆಗಳು ನಷ್ಟದ ಹಾದಿಯಲ್ಲಿ ಇರುವುದು ದುರಂತ ಎಂದು ಟ್ವೀಟ್ ಮಾಡಿದೆ.

ವಿಶ್ವದ 5ನೇ ಅತಿದೊಡ್ಡ ಆರ್ಥಿಕತೆಯ ಹೆಗ್ಗಳಿಕೆ ಭಾರತಕ್ಕಿತ್ತು. ಆದರೆ ನರೇಂದ್ರ ಮೋದಿ ಅವರ ಸರ್ಕಾರದ ಅವೈಜ್ಞಾನಿಕ ಆರ್ಥಿಕ ನೀತಿಗಳಿಂದಾಗಿ ವಿಶ್ವಬ್ಯಾಂಕಿನ ಜಿಡಿಪಿ ರ್ಯಾಕಿಂಗ್‍ನಲ್ಲಿ 7ನೇ ಸ್ಥಾನಕ್ಕೆ ಕುಸಿದಿದೆ. ಡಾಲರ್ ಎದುರು ರೂಪಾಯಿ ಮೌಲ್ಯ ಇಳಿಕೆಯಾಗುತ್ತದೆ. ವಿಕಾಸ ಮತ್ತು ಅಚ್ಚೇ ದಿನ್ ಅಂದರೆ ಇದೇನಾ ಎಂದು ಟ್ವೀಟ್ ಮೂಲಕ ಪ್ರಶ್ನಿಸಿದೆ.

ಶ್ರೇಷ್ಠ ಆರ್ಥಿಕ ತಜ್ಞ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಕಾಲದಲ್ಲಿ ಭಾರತ ಜಗತ್ತಿನ 3ನೇ ಅತಿ ದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿತ್ತು. ಗಟಾರ್ ಗ್ಯಾಸ್ ತಜ್ಞ ಮೋದಿ ಕಾಲದಲ್ಲಿ 7ನೇ ಸ್ಥಾನಕ್ಕೆ ಆರ್ಥಿಕತೆ ಕುಸಿದಿದೆ. ಮುಂದೆ ಏನು ಗಂಡಾಂತರ ಕಾದಿದೆಯೋ ಈ ದೇಶಕ್ಕೆ ಎಂದು ಕಾಂಗ್ರೆಸ್ ಟ್ವೀಟ್ ಮಾಡಿ ಕಿಡಿಕಾರಿದೆ.

Comments

Leave a Reply

Your email address will not be published. Required fields are marked *