ಟಿಕೆಟ್ ‘ಕೈ’ ತಪ್ಪಿದ ಹಿನ್ನೆಲೆ – ವಿ.ಆರ್.ಸುದರ್ಶನ್ ರಾಜೀನಾಮೆ

ಬೆಂಗಳೂರು: ಬಿಜೆಪಿಯಲ್ಲಿ ಟಿಕೆಟ್ ಘೋಷಣೆ ಬಳಿಕ ಅಸಮಾಧಾನ ಸ್ಫೋಟಗೊಂಡಿದ್ದರೆ ಕಾಂಗ್ರೆಸ್ ನಲ್ಲಿ ಟಿಕೆಟ್ ಹಂಚಿಕೆಗೂ ಮುನ್ನವೇ ಅಸಮಾಧಾನ ಸ್ಫೋಟಗೊಂಡಿದೆ.

ಕಾಂಗ್ರೆಸ್ ಉಪಾಧ್ಯಕ್ಷ ಸ್ಥಾನಕ್ಕೆ ಕೋಲಾರದ ಟಿಕೆಟ್ ಆಕಾಂಕ್ಷಿ ಹಾಗೂ ಪಕ್ಷದ ಹಿರಿಯ ಮುಖಂಡ ವಿ.ಆರ್. ಸುದರ್ಶನ್ ರಾಜೀನಾಮೆ ನೀಡಿದ್ದಾರೆ. ಕೋಲಾರದ ಟಿಕೆಟ್ ಮಾಗಡಿಯಿಂದ ಬಂದ ಜಮೀರ್ ಪಾಷಾ ಅವರಿಗೆ ಸಿಗುತ್ತೆ ಎಂದು ಖಚಿತವಾಗುತ್ತಿದ್ದಂತೆಯೇ ಸುದರ್ಶನ್ ಅವರು ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಅವರಿಗೆ ರಾಜೀನಾಮೆ ಪತ್ರ ರವಾನಿಸಿದ್ದಾರೆ.

ರಾಜೀನಾಮೆ ಬಗ್ಗೆ ಪಬ್ಲಿಕ್ ಟಿವಿಯ ಬಿಗ್ ಬುಲೆಟಿನ್ ನಲ್ಲಿ ಪ್ರತಿಕ್ರಿಯಿಸಿದ ಸುದರ್ಶನ್, ಎಲ್ಲದಕ್ಕೂ ಒಂದು ಮಿತಿ ಇದೆ. ಮುಂದಿನ ನಿರ್ಧಾರದ ಬಗ್ಗೆ ಯೋಚನೆ ಮಾಡುತ್ತೇನೆ ಎಂದು ಹೇಳಿದ್ದಾರೆ. ನಾನು ಇದುವರೆಗೆ ಸ್ವಾಭಿಮಾನ ಬಿಟ್ಟು ರಾಜಕಾರಣ ಮಾಡಿಲ್ಲ, ಮುಂದೆಯೂ ಸ್ವಾಭಿಮಾನ ಬಿಟ್ಟು ರಾಜಕಾರಣ ಮಾಡಲ್ಲ. ಆದರೆ ಕಾಂಗ್ರೆಸ್‍ನ ತೀರ್ಮಾನಗಳು ಜವಾಬ್ದಾರಿಯುತವಾಗಿರಬೇಕು ಎಂದು ಕಿವಿ ಮಾತು ಹೇಳಿದರು.

2013ರಲ್ಲೂ ನಾನು ಸ್ಪರ್ಧಿಸಬೇಕೆಂದಿದ್ದೆ. ಆದರೆ ಆಗಲೂ ಟಿಕೆಟ್ ಸಿಗಲಿಲ್ಲ. ಕೋಲಾರದಲ್ಲಿ ಜನ ಬದಲಾವಣೆ ಬಯಸುತ್ತಿದ್ದಾರೆ. ಆದರೆ ಕಾಂಗ್ರೆಸ್ ಪಕ್ಷ 15 ವರ್ಷದಿಂದ ತಪ್ಪು ನಿರ್ಧಾರ ತೆಗೆದುಕೊಳ್ಳುತ್ತಿದೆ. ಈಗ ಜನ ನಮ್ಮನ್ನು ಕೇಳುತ್ತಿದ್ದಾರೆ. ನಿಮ್ಮ ಲೀಡರ್ ಗಳಿಗೆ ನೀವೇನೂ ಕೇಳಲ್ವಾ ಎಂದು ಕೇಳುತ್ತಿದ್ದಾರೆ. ಹೀಗಾಗಿ ನಾನು ಯೋಚನೆ ಮಾಡಿ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದು ಹೇಳಿದರು.

Comments

Leave a Reply

Your email address will not be published. Required fields are marked *