ಚಳ್ಳಕೆರೆಯ ಡಿಆರ್‌ಡಿಓಗೆ ಪ್ರಧಾನಿ ಯಾಕೆ – ಕಾಂಗ್ರೆಸ್‍ನಿಂದ ತೀವ್ರ ಆಕ್ಷೇಪ!

ಬೆಂಗಳೂರು: ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಇಂದು ಕೋಟೆನಾಡಿಗೆ ಆಗಮಿಸಲಿದ್ದು, ಈ ಮಧ್ಯೆ ಇದೀಗ ಕಾಂಗ್ರೆಸ್ ಮೋದಿ ವಿರುದ್ಧ ತೀವ್ರ ಆಕ್ಷೇಪ ವ್ಯಕ್ತಪಡಿಸುತ್ತಿದೆ.

ಹೌದು. ಮೋದಿ ಇಂದು ಮೊದಲು ಚಿತ್ರದುರ್ಗದ ಚಳ್ಳಕೆರೆಯ ಡಿಆರ್ ಡಿಓ (ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ)ಗೆ ಆಗಮಿಸಿ ನಂತರ ಅಲ್ಲಿಂದ ದುರ್ಗದ ಒನಕೆ ಓಬವ್ವ ಕ್ರೀಡಾಂಗಣಕ್ಕೆ ಹೆಲಿಕ್ಯಾಪ್ಟರ್ ಮೂಲಕ ಆಗಮಿಸಿ ನಂತರ ರಸ್ತೆ ಮಾರ್ಗವಾಗಿ ಮುರುಗರಾಜೇಂದ್ರ ಕೀಡಾಂಗಣದಲ್ಲಿ ಬೃಹತ್ ಸಮಾವೇಶ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಆದ್ರೆ ಲೋಕಸಮರದ ಹೊತ್ತಲ್ಲಿ ಡಿಆರ್‍ಡಿಓಗೆ ಮೋದಿ ಯಾಕೆ ಎಂದು ಕಾಂಗ್ರೆಸ್ ಪ್ರಶ್ನಿಸುತ್ತಿದ್ದು, ಮೋದಿ ನಡೆಗೆ ಕಾಂಗ್ರೆಸ್ ನಾಯಕರು ತೀವ್ರ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ.

ಅಲ್ಲದೆ ಇದು ನೀತಿ ಸಂಹಿತೆ ಉಲ್ಲಂಘನೆ ಆಗುತ್ತದೆ ಎಂದು ಕಾಂಗ್ರೆಸ್ ಆರೋಪ ಮಾಡುತ್ತಿದೆ. ಆದ್ರೆ ಡಿಆರ್‌ಡಿಓಗೆ ಭೇಟಿ ನೀತಿ ಸಂಹಿತೆ ಉಲ್ಲಂಘನೆಯಾಗಲ್ಲ ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ.

ಪ್ರಧಾನಿಯವರು ಇಂದು ಚಿತ್ರದುರ್ಗ, ದಾವಣಗೆರೆ, ತುಮಕೂರು ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಪರವಾಗಿ ಮೋದಿ ಬೃಹತ್ ಸಮಾವೇಶ ಉದ್ದೇಶಿಸಿ ಮಾತನಾಡಲಿದ್ದಾರೆ. ಮೋದಿ ಸಮಾವೇಶಕ್ಕಾಗಿ ಈಗಾಗಲೇ ಸಕಲ ಸಿದ್ಧತೆ ಸಂಪೂರ್ಣಗೊಂಡಿದ್ದು ಮಧ್ಯಾಹ್ನ 2:10 ನಿಮಿಷಕ್ಕೆ ಮೋದಿ ವಿಜಯ ಸಂಕಲ್ಪ ರ್ಯಾಲಿಯಲ್ಲಿ ಪಾಲ್ಗೊಳ್ಳಲಿದ್ದಾರೆ.

8 ತಿಂಗಳ ಹಿಂದೆ ನಡೆದ ವಿಧಾನಸಭೆ ಚುನಾವಣೆಯ ಪ್ರಚಾರಕ್ಕಾಗಿ ಚಿತ್ರದುರ್ಗಕ್ಕೆ ಆಗಮಿಸಿದ್ದ ಮೋದಿ ಕಾಂಗ್ರೆಸ್ ಕೋಟೆಯನ್ನ ಕೇಸರಿಯನ್ನಾಗಿ ಮಾಡಿದ್ದರು. ವಿಧಾನಸಭೆ ಚುನಾವಣೆಯಲ್ಲಿ ಮೋದಿ ಪ್ರಚಾರ ಮಾಡಿದ ಪರಿಣಾಮವೇ ಚಿತ್ರದುರ್ಗದಲ್ಲಿ 5 ಕ್ಷೇತ್ರಗಳಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿತ್ತು. ಈ ಹಿನ್ನೆಲೆಯಲ್ಲೆ 8 ತಿಂಗಳ ಅವಧಿಯಲ್ಲೆ ಮೋದಿ ಮತ್ತೊಮ್ಮೆ ಕೋಟೆ ನಾಡಿನಲ್ಲಿಂದು ಭಾಷಣ ಮಾಡಲಿದ್ದಾರೆ.

ಮೋದಿ ಸಮಾವೇಶಕ್ಕೆ ಚಿತ್ರದುರ್ಗ, ದಾವಣಗೆರೆ, ತುಮಕೂರು ಜಿಲ್ಲೆಯಿಂದ ಸಾವಿರಾರು ಕಾರ್ಯಕರ್ತರು ಅಭಿಮಾನಿಗಳು ಆಗಮಿಸುವ ಹಿನ್ನೆಲೆಯಲ್ಲಿ ಸಾಕಷ್ಟು ಬಂದೋಬಸ್ತ್ ಸಹ ಏರ್ಪಡಿಸಲಾಗಿದೆ.

Comments

Leave a Reply

Your email address will not be published. Required fields are marked *