ಪಕ್ಷದೊಳಗಿನ ಶತ್ರುಗಳ ಕೈಗೆ ಬ್ರಹ್ಮಾಸ್ತ್ರ ಕೊಟ್ಟರಾ ಸಿದ್ದರಾಮಯ್ಯ?

ಬೆಂಗಳೂರು: ತಮ್ಮ ಪಾಲಿನ ಕಳಂಕದಿಂದ ಮುಕ್ತರಾಗಲು ಸಿಎಂ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಾಜಿ ಸಿಎಂ ಸಿದ್ದರಾಮಯ್ಯ ಹೊಸ ಕಳಂಕಕ್ಕೆ ಗುರಿಯಾಗಿದ್ದಾರೆ. ಬಹಿರಂಗ ವಿರೋಧವನ್ನ ಎದುರಿಸಿ ಸೈ ಅನ್ನಿಸಿಕೊಳ್ಳುವ ಮಹತ್ವಕಾಂಕ್ಷೆಯಲ್ಲಿ ಆಂತರಿಕ ವಿರೋಧ ಎದುರಿಸಿಬೇಕಾದ ಅನಿವಾರ್ಯತೆಗೆ ಸಿಲುಕಿದ್ದಾರೆ. ಬಹಿರಂಗ ಶತ್ರುಗಳ ಮನಗೆಲ್ಲುವ ಆತುರದಲ್ಲಿ ಆಂತರಿಕವಾಗಿ ಹೊಸ ವಿರೋಧ ಎದುರಿಸುವಂತಾಗಿದೆ.

ಮುಖ್ಯಮಂತ್ರಿ ಯಡಿಯೂರಪ್ಪನವರ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೊಸ ಸಂಕಷ್ಟಕ್ಕೆ ಸಿಲುಕಿದ್ದಾರೆ. ಯಡಿಯೂರಪ್ಪನವರ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಭಾಗವಹಿಸಿದ್ದು ರಾಜಕೀಯ ಮೀರಿದ ಮಾನವೀಯ ಸಂಬಂಧ ಆಗಿದ್ದರು. ಕಾಂಗ್ರೆಸ್ ನಾಯಕರುಗಳೇ ಹೊಸ ತಕರಾರು ತಗೆಯಲು ಸಿದ್ಧತೆ ನಡೆಸುತ್ತಿದ್ದಾರೆ ಎನ್ನಲಾಗುತ್ತಿದೆ. ಮಾನವೀಯ ಸಂಬಂಧ ಏನೇ ಇರಬಹುದು ಕಾಂಗ್ರೆಸ್ ಪಾಲುದಾರಿಕೆಯ ಸಮ್ಮಿಶ್ರ ಸರ್ಕಾರ ಕೆಡವಿದ ಯಡಿಯೂರಪ್ಪನವರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಸರಿಯಲ್ಲ ಅನ್ನೋದು ಕಾಂಗ್ರೆಸ್ ನಾಯಕರ ವಾದ. ಇದನ್ನೂ ಓದಿ: ಅಲ್ಲಿ ಕಳೆದುಕೊಂಡವರನ್ನ, ಇಲ್ಲಿ ಹುಡುಕಿದ್ರಾ ಸಿದ್ದರಾಮಯ್ಯ!

ಮಾಜಿ ಸಿಎಂ ಕುಮಾರಸ್ವಾಮಿ ಸಹ ಕಾರ್ಯಕ್ರಮದಿಂದ ಅಂತರ ಕಾಯ್ದುಕೊಂಡು ಸೈದ್ಧಾಂತಿಕ ಭಿನ್ನಾಭಿಪ್ರಾಯವನ್ನ ಉಳಿಸಿಕೊಂಡರು. ಆದರೆ ಯಡಿಯೂರಪ್ಪ ಜೊತೆ ಆಂತರಿಕವಾಗಿ ಕೈಜೋಡಿಸಿ ಸಮ್ಮಿಶ್ರ ಸರ್ಕಾರ ಕೆಡವಿದ ಆರೋಪಕ್ಕೆ ಗುರಿಯಾದ ಸಿದ್ದರಾಮಯ್ಯ ಸಿಎಂ ಯಡಿಯೂರಪ್ಪನವರ ಹುಟ್ಟು ಹಬ್ಬ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಸರಿಯಲ್ಲ ಅನ್ನೋದು ಕೈ ನಾಯಕರ ವಾದ. ಆದ್ದರಿಂದ ಯಡಿಯೂರಪ್ಪ ಜೊತೆ ಬಹಿರಂಗ ಸ್ನೇಹ ವ್ಯಕ್ತಪಡಿಸಿದ ಸಿದ್ದರಾಮಯ್ಯ ಈಗ ಪಕ್ಷದ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಮುಂದಿನ ದಿನಗಳಲ್ಲಿ ಇದು ಪಕ್ಷದ ವೇದಿಕೆಯಲ್ಲೇ ಸಿದ್ದರಾಮಯ್ಯನವರಿಗೆ ಯಾವ ರೀತಿಯ ಸವಾಲಾಗಬಹುದು ಅನ್ನೋದೆ ಸದ್ಯದ ಕುತೂಹಲ.

Comments

Leave a Reply

Your email address will not be published. Required fields are marked *