ಹರ್ಷ ಮೊಯ್ಲಿ ವಿರುದ್ಧ ಕೈ ನಾಯಕ ಕಿಡಿ

ಉಡುಪಿ: ಮಾಜಿ ಸಚಿವ ಪ್ರಮೋದ್ ಜೆಡಿಎಸ್ ನಲ್ಲೇ ಇದ್ದಾರೋ ಕಾಂಗ್ರೆಸ್‍ಗೆ ಬಂದಿದ್ದಾರೋ ಎಂದು ಕರಾವಳಿಯಲ್ಲಿ ಚರ್ಚೆಯಾಗುತ್ತಿದೆ. ಈ ನಡುವೆ ಇದೇ ವಿಚಾರದಲ್ಲಿ ಮಾಜಿ ಸಿಎಂ ವೀರಪ್ಪ ಮೊಯ್ಲಿ ಪುತ್ರನ ಜೊತೆ ಕಾಂಗ್ರೆಸ್ ನಾಯಕನ ಫೋನ್ ಸಂಭಾಷಣೆ ವೈರಲಾಗಿದೆ.

ಶನಿವಾರ ವೀರಪ್ಪ ಮೊಯ್ಲಿ ಅವರು ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ್ದರು. ಈ ವೇಳೆ ಪತ್ರಕರ್ತರು, ಕಳೆದ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ನಿಂದ ಸ್ಪರ್ಧಿಸಿದ್ದ ಪ್ರಮೋದ್ ಮಧ್ವರಾಜ್ ಯಾವಾಗ ಕಾಂಗ್ರೆಸ್ ಗೆ ಮರಳ್ತಾರೆ ಎಂದು ಪ್ರಶ್ನಿಸಿದ್ದರು. ಇದಕ್ಕೆ ಉತ್ತರಿಸಿದ ಮೊಯ್ಲಿ, ಪ್ರಮೋದ್ ಜೆಡಿಎಸ್ ನಲ್ಲಿದ್ದಾರೆ. ಅರ್ಜಿ ಹಾಕಿದರೆ ಮತ್ತೆ ಕಾಂಗ್ರೆಸ್ಸಿಗೆ ಬರಬಹುದು ಅಂದಿದ್ದರು.

ಈ ವಿಚಾರ ಸ್ಥಳೀಯ ಕಾರ್ಯಕರ್ತರನ್ನು ಕೆರಳಿಸಿದೆ. ಸುದ್ದಿಗೋಷ್ಠಿಯ ನಂತರ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಸದಾಶಿವ್ ಅಮೀನ್ ಅವರು ಹರ್ಷ ಮೊಯ್ಲಿಗೆ ಕರೆ ಮಾಡಿ ಪ್ರಮೋದ್ ಮಧ್ವರಾಜ್ ಬಗ್ಗೆ ವಿಚಾರಿಸಿದ್ದಾರೆ. ಈ ವೇಳೆ ಹರ್ಷ ಮೊಯ್ಲಿ, ಪ್ರಮೋದ್ ಜೆಡಿಎಸ್ ನಲ್ಲೇ ಇದ್ದಾನೆ ಎಂದು ಹೇಳುವ ಮೂಲಕ ಏಕವಚನ ಬಳಕೆ ಮಾಡಿದ್ದಾರೆ. ಇದರಿಂದ ಕುಪಿತರಾದ ಸದಾಶಿವ್, ಪದಾಧಿಕಾರಿ ಅಲ್ಲದೆ ಇದ್ದರೂ ನೀವ್ಯಾಕೆ ಕಾಂಗ್ರೆಸ್ ಸಭೆಯಲ್ಲಿ, ಸುದ್ದಿಗೋಷ್ಠಿಯಲ್ಲಿ ಕೂತಿದ್ದು ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ ಪ್ರಮೋದ್ ಗೆ ಗೌರವ ಕೊಟ್ಟು ಮಾತಾಡಿ ಎಂದು ಕಿಡಿಕಾರಿದ್ದಾರೆ. ತುಳು ಭಾಷೆಯ ಈ ಸಂಭಾಷಣೆ ವೈರಲ್ ಆಗಿದೆ.

ತಾನು ಕಾಂಗ್ರೆಸ್ ತೊರೆದೇ ಇಲ್ಲ. ನಾನು ಮೈತ್ರಿ ಅಭ್ಯರ್ಥಿಯಾಗಿದ್ದೆ ಎಂದು ಪ್ರಮೋದ್ ಮಧ್ವರಾಜ್ ತಟಸ್ಥವಾಗಿ ಕೂತಿದ್ದಾರೆ. ಆದರೆ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಪ್ರಮೋದ್ ಅರ್ಜಿ ಹಾಕಿ ಕಾಂಗ್ರೆಸ್ ಗೆ ಮರಳಲಿ ಎಂದು ಕಾಂಗ್ರೆಸ್ ಜಿಲ್ಲಾ ಘಟಕ ಮೌನವಹಿಸಿದೆ. ಇದು ಕೆಲ ಕಾರ್ಯಕರ್ತರ ಕೋಪಕ್ಕೆ ಕಾರಣವಾಗಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಹರ್ಷ ಮೊಯಿಲಿ ಕಾರ್ಕಳ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆಗ ಹರ್ಷ ಬಗ್ಗೆ ಕಾರ್ಯಕರ್ತರ ವಿರೋಧಿಸಿದ್ದರು.

Comments

Leave a Reply

Your email address will not be published. Required fields are marked *