ರೌಡಿಶೀಟರ್ ಸೈಕಲ್ ರವಿಯೊಂದಿಗೆ ಪ್ರಭಾವಿ ಕಾಂಗ್ರೆಸ್ ರಾಜಕಾರಣಿಗೆ ನಂಟು!

ಬೆಂಗಳೂರು: ಸುಮಾರು 10 ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ನಟೋರಿಯಸ್ ರೌಡಿಶೀಟರ್ ಸೈಕಲ್ ರವಿಗೆ ರಾಜಕಾರಣಿಯೊಂದಿಗೆ ನಂಟಿತ್ತು ಎಂಬ ಮಾಹಿತಿಯೊಂದು ಇದೀಗ ಪಬ್ಲಿಕ್ ಟಿವಿಗೆ ಲಭಿಸಿದೆ.

ಹೌದು. ಮಂಡ್ಯದ ಕಾಂಗ್ರೆಸ್ ಮುಖಂಡ ಸಚ್ಚಿದಾನಂದ ಜೊತೆ ಸೈಕಲ್ ರವಿ ನಿಕಟ ಸಂಪರ್ಕ ಹೊಂದಿದ್ದನು. ನಿಕಟ ಸಂಪರ್ಕ ಹೊಂದಿದ್ದ ರವಿ ಸಚ್ಚಿದಾನಂದ ಅವರ ಜೊತೆ ಮಾತನಾಡಲಿಕ್ಕಾಗಿಯೇ ಬೇರೆ ಸಿಮ್ ಖರೀದಿ ಮಾಡಿದ್ದಾನಾ ಎಂಬ ಪ್ರಶ್ನೆಯೊಂದು ಮೂಡಿದೆ.

ಶ್ರೀರಂಗಪಟ್ಟಣದ ವಿಧಾನಸಭಾ ಕ್ಷೇತ್ರದಿಂದ ಟಿಕೆಟ್ ಆಕಾಂಕ್ಷಿಯಾಗಿದ್ದ ಸಚ್ಚಿದಾನಂದ ಜೊತೆಗಿನ ನಂಟು ಇದೀಗ ಪೊಲೀಸರ ತಾಂತ್ರಿಕ ತನಿಖೆಯಿಂದ ಬಯಲಾಗಿದೆ. ಯಾವುದೇ ವ್ಯವಹಾರ ಮಾಡ್ಬೇಕು ಅಂದ್ರೂ ಅವರಿಬ್ಬರೂ ಇದೇ ನಂಬರ್ ಅಲ್ಲಿ ಮಾತನಾಡುತ್ತಿದ್ದರು ಎನ್ನುವ ವಿಚಾರವನ್ನು ಪೊಲೀಸ್ ಮೂಲಗಳು ತಿಳಿಸಿವೆ.

ಚುನಾವಣಾ ಪ್ರಚಾರದ ವೇಳೆ ಮಂಡ್ಯದಲ್ಲಿ ಡಿ ಕೆ ಶಿವಕುಮಾರ್ ಅಚವರಿಗೆ ಇದೇ ಸಚ್ಚಿದಾನಂದ ಸೇಬಿನ ಹಾರ ಹಾಕಿ ಸನ್ಮಾನಿಸಿದ್ದರು. ಸೈಕಲ್ ರವಿ ಮತ್ತು ಸ್ಯಾಂಡಲ್ ವುಡ್ ನಟನ ನಡುವೆ ರಾಜಿ ಪಂಚಾಯಿತಿ ಮಾಡಿದ್ದು ಇವರೇ ಆಗಿದ್ದು, ದ್ವೇಷ ಬೇಡ ನಟನೊಂದಿಗೆ ರಾಜಿ ಪಂಚಾಯಿತಿ ಮಾಡಿಕೊ ಅಂತ ಸೈಕಲ್ ರವಿಗೆ ಬುದ್ಧಿವಾದ ಹೇಳಿದ್ದರು ಎನ್ನಲಾಗಿದೆ.

ಸೈಕಲ್ ರವಿ ಹಿನ್ನೆಲೆ:
ಆರೋಪಿ ರವಿ ಮೇಲೆ 1998 ರಲ್ಲಿ ಮೊದಲ ಬಾರಿಗೆ ಬನಶಂಕರಿಯಲ್ಲಿ ರೌಡಿಶೀಟರ್ ಪಟ್ಟ ದಾಖಲಾಗಿತ್ತು. ಕೆಪಿ ಅಗ್ರಹಾರದಲ್ಲಿ ಸಣ್ಣ ಪುಟ್ಟ ಗಲಾಟೆಯಲ್ಲಿ ಭಾಗಿಯಾಗಿದ್ದ ರವಿ, ಸುಬ್ರಹ್ಮಣ್ಯಪುರ ಮುಖ್ಯ ಕೇಂದ್ರವಾಗಿಸಿಕೊಂಡು ಕಾನೂನು ಬಾಹಿರ ಕೃತ್ಯಗಳಲ್ಲಿ ತೊಡಗಿಕೊಂಡಿದ್ದ. ಪ್ರಮುಖವಾಗಿ ಕೊಲೆ, ಕೊಲೆಯತ್ನ, ಅಪಹರಣ, ಧಮ್ಕಿ, ಹಫ್ತಾವಸೂಲಿ ಸೇರಿ 30 ಕ್ಕೂ ಹೆಚ್ಚು ಪ್ರಕರಣಗಳು ಆತನ ಮೇಲೆ ದಾಖಲಾಗಿದೆ. ಕುಖ್ಯಾತ ರೌಡಿ ಲಿಂಗ ಮರ್ಡರ್, ಕೆಂಗೇರಿಯಲ್ಲಿ ಜಾನಿ, ಟಾಮಿ ಜೊಡಿ ಮರ್ಡರ್ ಸೇರಿದಂತೆ, ನಗರದಲ್ಲಿ ಜೆಪಿನಗರ ತಲಘಟ್ಟಪುರ, ಬನಶಂಕರಿ, ಸುಬ್ರಹ್ಮಣ್ಯಪುರ ಕೆಂಗೇರಿ ರಾಜರಾಜೇಶ್ವರಿ ನಗರ ಕೆಜಿ ನಗರ ಕೆಪಿ ಅಗ್ರಹಾರ ಸೇರಿ 14 ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಉಳಿದಂತೆ ಸೈಕಲ್ ರವಿ ಬೆಂಗಳೂರಿನ ಮತ್ತೊಬ್ಬ ಕುಖ್ಯಾತ ರೌಡಿಶೀಟರ್ ಹೆಬ್ಬೆಟ್ ಮಂಜನ ಸ್ನೇಹಿತನಾಗಿದ್ದಾನೆ.

ಬಂಧನವಾಗಿದ್ದು ಹೇಗೆ?:
ಜೂನ್ 27ರಂದು ರಾಜರಾಜೇಶ್ವರಿನಗರದ ನೈಸ್‍ರೋಡ್ ಬಳಿ ರೌಡಿ ಸೈಕಲ್ ರವಿ ಬಂಧನಕ್ಕೆ ಪೊಲೀಸರು ಮುಂದಾಗಿದ್ದರು. ಈ ವೇಳೆ ಸೈಕಲ್ ರವಿ ಪೊಲೀಸ್ ಕಾನ್ಸ್ ಟೇಬಲ್ ಸತೀಶ್ ಮೇಲೆ ಹಲ್ಲೆಗೆ ಯತ್ನಿಸಿದ್ದನು. ಆತ್ಮ ರಕ್ಷಣೆಗೆ ಮುಂದಾದ ಸಿಸಿಬಿ ಇನ್ಸ್ ಪೆಕ್ಟರ್ ಪ್ರಕಾಶ್ ಹಾಗೂ ಪಿಐ ಮಲ್ಲಿಕಾರ್ಜುನ್ ತಕ್ಷಣವೇ 2 ಸುತ್ತಿನ ಗುಂಡು ಹಾರಿಸಿ, ಸೈಕಲ್ ರವಿಯನ್ನು ವಶಕ್ಕೆ ಪಡೆದು, ನ್ಯಾಯಾಂಗ ಬಂಧನದಲ್ಲಿ ಇರಿಸಿಕೊಂಡು ತನಿಖೆ ನಡೆಸಿದ್ದರು.

Comments

Leave a Reply

Your email address will not be published. Required fields are marked *