ಮನೆಗೋ? ಜೈಲಿಗೋ? ಇಡಿ ಕಸ್ಟಡಿಗೋ? – ಇಂದು ಡಿಕೆಶಿ ಭವಿಷ್ಯ ನಿರ್ಧಾರ

ನವದೆಹಲಿ: ಮಾಜಿ ಸಚಿವ ಡಿಕೆ ಶಿವಕುಮಾರ್ ಅವರು ಮನೆಗೋ, ಜೈಲಿಗೋ, ಇಡಿ ಕಸ್ಟಡಿಗೋ ಎನ್ನುವುದು ಇಂದು ನಿರ್ಧಾರವಾಗಲಿದೆ.

ಇಡಿ ಕಸ್ಟಡಿ ಅವಧಿ ಇಂದು ಅತ್ಯವಾಗುತ್ತಿರುವ ಹಿನ್ನೆಲೆಯಲ್ಲಿ ಇಂದು ಮಧ್ಯಾಹ್ನ ಶಿವಕುಮಾರ್ ಅವರನ್ನು ಅಧಿಕಾರಿಗಳು ನ್ಯಾಯಾಲಯಕ್ಕೆ ಹಾಜರು ಪಡಿಸಲಿದ್ದಾರೆ. ಇಂದೇ ಶಿವಕುಮಾರ್ ಸಲ್ಲಿಸಿದ ಜಾಮೀನು ಅರ್ಜಿಯ ವಿಚಾರಣೆಯೂ ನಡೆಯಲಿದೆ.

ಇಡಿ ವಾದ ಏನಿರಬಹುದು?
ಪುತ್ರಿ ಐಶ್ವರ್ಯ ವಿಚಾರಣೆ ನಿನ್ನೆಯಿಂದ ಆರಂಭಗೊಂಡಿದೆ. ಐಶ್ವರ್ಯ ನೀಡಿದ ಉತ್ತರಕ್ಕೆ ಸಂಬಂಧಿಸಿದಂತೆ ಶಿವಕುಮಾರ್ ಅವರನ್ನು ಪ್ರಶ್ನಿಸಬೇಕು. ಹೀಗಾಗಿ ಮತ್ತೆ 4 ದಿನಗಳ ಕಾಲ ಕಸ್ಟಡಿಗೆ ನೀಡುವಂತೆ ಕೇಳಬಹುದು.

ಡಿಕೆ ವಕೀಲರ ವಾದ ಏನಿರಬಹುದು?
ಕಕ್ಷಿದಾರರು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಳೆದ ಬಾರಿಯೇ ಆರೋಗ್ಯ ಸಮಸ್ಯೆಯ ಬಗ್ಗೆ ತಿಳಿಸಲಾಗಿತ್ತು. ಈಗ ಮತ್ತಷ್ಟು ಹೆಚ್ಚಾಗಿದೆ. ಹೀಗಾಗಿ ಜಾಮೀನು ಮಂಜೂರು ಮಾಡಬೇಕು ಎಂದು ಮನವಿ ಮಾಡಬಹುದು.

ಕೋರ್ಟ್ ಏನು ಮಾಡಬಹುದು?
ಇಡಿ ವಾದವನ್ನು ಪುರಸ್ಕರಿಸಿ ಮತ್ತೆ 4 ದಿನ ಕಸ್ಟಡಿಗೆ ನೀಡಬಹುದು. ಆರೋಗ್ಯ ಸಮಸ್ಯೆ ಇರುವ ಕಾರಣ ಮಧ್ಯಂತರ ಜಾಮೀನು ಮಂಜೂರು ಮಾಡಬಹುದು. ಮಧ್ಯಂತರ ಜಾಮೀನು ಮಂಜೂರು ಮಾಡುವುದು ಕಷ್ಟ ಎನ್ನಲಾಗುತ್ತಿದೆ. ಒಂದು ವೇಳೆ ಜಾಮೀನು ನೀಡದೇ ಮತ್ತು ಇಡಿ ಕಸ್ಟಡಿ ನೀಡದೇ ಇದ್ದರೆ ನ್ಯಾಯಾಂಗ ಬಂಧನ ವಿಧಿಸುತ್ತದೆ. ನ್ಯಾಯಾಂಗ ಬಂಧನ ವಿಧಿಸಿದರೆ ಡಿಕೆ ಶಿವಕುಮಾರ್ ತಿಹಾರ್ ಜೈಲಿಗೆ ಹೋಗಬೇಕಾಗುತ್ತದೆ. ಜಾಮೀನು ಅರ್ಜಿಯ ವಿಚಾರಣೆ ನಡೆದರೆ ವಾದ, ಪ್ರತಿವಾದ ಮಾಡಬೇಕಾಗುತ್ತದೆ. ಬಳಿಕ ಕೆಲ ದಿನಗಳ ನಂತರ ಜಾಮೀನು ಆದೇಶ ಪ್ರಕಟವಾಗಬಹುದು. ಅಲ್ಲಿಯವರೆಗೆ ಡಿಕೆಶಿ ತಿಹಾರ್ ಜೈಲಿನಲ್ಲಿರಬೇಕಾಗುತ್ತದೆ.

ನಿನ್ನೆ ಒಂದು ಕಡೆ ಐಶ್ವರ್ಯ ವಿಚಾರಣೆ ನಡೆದಿದ್ದರೆ ಮಗದೊಂದು ಕಡೆ ಡಿಕೆಶಿ ವಿಚಾರಣೆ ನಡೆಯಿತು. ಆದರೆ, ವಿಚಾರಣೆ ವೇಳೆ ಡಿಕೆಶಿಗೆ ಹೈಬಿಪಿ ಹಾಗೂ ಹೊಟ್ಟೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅಲ್ಲೇ ಇದ್ದ ಸಂಬಂಧಿ ಶಾಸಕ, ಡಾ. ರಂಗನಾಥ್ ಅವರು ತಪಾಸಣೆ ಮಾಡಿದರು. ನಂತರ ಡಿಕೆಶಿ ಅವರನ್ನು ಹತ್ತಿರದ ಆರ್‌ಎಂಎಲ್‌ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಈ ವೇಳೆ, ಡಿಕೆ ಸುರೇಶ್ ಆಪ್ತ ವೈದ್ಯ ಜುಬಿನ್ ಸಲಹೆ ಮೇರೆಗೆ ಡಿಕೆಶಿಗೆ ಔಷಧಿ ತಂದುಕೊಟ್ಟರು. ಬಳಿಕ ಇಸಿಜಿ ಮಾಡಿದ್ದು, ಡಿಕೆಶಿ ವಿಶ್ರಾಂತಿ ಪಡೆಯುತ್ತಿದ್ದಾರೆ.

Comments

Leave a Reply

Your email address will not be published. Required fields are marked *