ಖಾಸಗಿ ಹೋಟೆಲ್‍ನಲ್ಲಿ ಸಚಿವ ಸಂತೋಷ್ ಲಾಡ್-ಜನಾರ್ದನ ರೆಡ್ಡಿ ಭೇಟಿಗೆ ಅನಿಲ್ ಲಾಡ್ ಸ್ಪಷ್ಟನೆ

ನವದೆಹಲಿ: ಕಾರ್ಮಿಕ ಸಚಿವ ಸಂತೋಷ್ ಲಾಡ್ ಹಾಗೂ ಮಾಜಿ ಸಚಿವ ಜನಾರ್ದನ ರೆಡ್ಡಿ ಭೇಟಿ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡ ಅನಿಲ್ ಲಾಡ್ ಸ್ಪಷ್ಟನೆ ನಿಡಿದ್ದಾರೆ.

ನಗರದಲ್ಲಿ ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅನಿಲ್ ಲಾಡ್, ಸಂತೋಷ್ ಲಾಡ್ ಹಾಗೂ ಜನಾರ್ದನ ರೆಡ್ಡಿ ಭೇಟಿಯಾಗಿದ್ದು ನಿಜ ಅಂತ ಹೇಳಿದ್ದಾರೆ. ಅವರಿಬ್ಬರೂ ಹೋಟೆಲ್ ತಾಜ್ ನಲ್ಲಿ ಅಕಸ್ಮಾತ್ ಆಗಿ ಭೇಟಿಯಾಗಿದ್ದಾರೆ. ಹೀಗಾಗಿ ವಿಶೇಷ ಅರ್ಥ ಕಲ್ಪಿಸುವ ಅಗತ್ಯ ಇಲ್ಲ. ಅದು ಬಿಟ್ಟು ಜನಾರ್ದನ ರೆಡ್ಡಿ ಕಾಂಗ್ರೆಸ್ ಸೇರೋದು ಊಹಾಪೋಹದ ಸುದ್ದಿಯಾಗಿದೆ ಅಂತ ಹೇಳಿದ್ರು.

ಜನಾರ್ದನ ರೆಡ್ಡಿಗೂ ನಮಗೂ ಯಾವುದೇ ಸಂಬಂಧವಿಲ್ಲ ಎಂಬ ಅಮಿತ್ ಶಾ ಹೇಳಿಕೆಯಿಂದ ಬೇಸರವಾಗಿರಬಹುದು. ರಾಮುಲು ಅವರಿಗೂ ಕ್ಷೇತ್ರ ಬದಲಾಯಿಸಿದ್ದು ಬೇಸರವಿದೆ. 2ನೇ ಲಿಸ್ಟ್ ನಲ್ಲಿ ಗೊಂದಲವಾಗಿರಬೇಕು. ಹೀಗಾಗಿ ರೆಡ್ಡಿಯವರು ಕಾಂಗ್ರೆಸ್ ಗೆ ಹೋಗ್ತೀನಿ ಅಂತ ಬಿಜೆಪಿಯವರನ್ನು ಹೆದರಿಸುತ್ತಿದ್ದಾರೋ ಗೊತ್ತಿಲ್ಲ. ರೆಡ್ಡಿ ಕಾಂಗ್ರೆಸ್ ಸೇರ್ಪಡೆ ಹೈಕಮಾಂಡ್ ಗೆ ಬಿಟ್ಟಿದ್ದು. ಹಾಗೆಯೇ ಕಾಂಗ್ರೆಸ್ ಹಿರಿಯರು ನಿರ್ಧರಿಸುತ್ತಾರೆ ಅಂತ ಅವರು ಹೇಳಿದ್ದಾರೆ.

ನಮಗೂ ರೆಡ್ಡಿಗೂ ಸಂಬಂಧವಿಲ್ಲ. ನಾವು ರೆಡ್ಡಿ ಹಾಗೂ ಶ್ರೀರಾಮುಲು ವಿರುದ್ಧ ಪಾದಯಾತ್ರೆಯಿಂದ ಹಿಡಿದು ಇದೂವರೆಗೂ ಅವರ ವಿರುದ್ಧವೇ ಇದ್ದೀವಿ. ಆದ್ರೆ ಬಿಜೆಪಿ ಒಬ್ರು ನಾಯಕರು ಕೂಡ ರೆಡ್ಡಿ ಬಗ್ಗೆ ಚಕಾರವೇ ಎತ್ತಿಲ್ಲ. ಅಮಿತ್ ಶಾ ಹೇಳಿದ್ರು ರೆಡ್ಡಿಗೂ ನಮಗೂ ಸಂಬಂಧವಿಲ್ಲ ಅಂತ. ಆದ್ರೆ ಅದೇ ವೇದಿಕೆಯಲ್ಲಿ ಕುಳಿತ ಅನಂತ್ ಕುಮಾರ್ ಅವರು ನಮಗೂ ಅವರಿಗೂ ಸಂಬಂಧವಿಲ್ಲ ಅಂತ ಹೇಳಿಲ್ಲ. ಹೀಗಾಗಿ ರೆಡ್ಡಿಯವರು ಪಕ್ಷದಲ್ಲಿದ್ದಾರಾ ಇಲ್ವಾ ಎಂಬುದಕ್ಕೆ ಅವರು ಉತ್ತರ ನೀಡಬೇಕು. ರೆಡ್ಡಿಯವರು 6 ಜಿಲ್ಲೆಯ ಉಸ್ತುವಾರಿಯನ್ನು ನಮಗೆ ನೀಡ್ತಾರೆ ಅಂತ ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಇದೀಗ ಅವರಿಗೇ ಟಿಕೆಟ್ ಸಿಗುತ್ತಾ ಇಲ್ವಾ ಎಂಬುದನ್ನು ಕಾದುನೋಡಬೇಕು ಅಂತ ಅವರು ಹೇಳಿದ್ರು.

ಸಚಿವ ಸಂತೋಷ್ ಲಾಡ್ ಅವರನ್ನು ಶ್ರೀರಾಮುಲು ಮತ್ತು ಜನಾರ್ದನ್ ರೆಡ್ಡಿ ಅವರು ಸೋಮವಾರ ಮಧ್ಯಾಹ್ನ ಹೋಟೆಲ್ ತಾಜ್‍ನಲ್ಲೇ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ ಎಂಬ ವದಂತಿಗಳು ಹರಡಿದ್ದು, ಈ ಬಗ್ಗೆ ಯಾವುದೇ ಖಚಿತ ಮಾಹಿತಿ ಇಲ್ಲ.

ಕಾಂಗ್ರೆಸ್ ಮುಖಂಡ ಅನಿಲ್ ಲಾಡ್ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಒಂದು ಕಾಲದ ಆಪ್ತ ಗೆಳೆಯಾಗಿದ್ದು, ಹೀಗಾಗಿ ಈ ಹಿಂದೆ ಅನಿಲ್ ಲಾಡ್ ಜೆಡಿಎಸ್ ಗೆ ಸೇರುತ್ತಾರೆ ಎಂಬ ವದಂತಿಯೂ ಹಬ್ಬಿತ್ತು.

Comments

Leave a Reply

Your email address will not be published. Required fields are marked *