ಮೂಲ, ವಲಸಿಗ ಫೈಟ್ ಇಲ್ಲಿಗೆ ನಿಲ್ಲಿಸಿ – ಸಿದ್ದು, ಖರ್ಗೆಗೆ ಹೈಕಮಾಂಡ್ ವಾರ್ನಿಂಗ್

ಬೆಂಗಳೂರು: ಕಾಂಗ್ರೆಸ್ ಪಾಳಯದಲ್ಲಿ ಮೂಲ ಹಾಗೂ ವಲಸಿಗರ ಮಧ್ಯೆ ವಾರ್ ನಡೆಯುತ್ತಿದ್ದು, ಈ ಮುಸುಕಿನ ಗುದ್ದಾಟಕ್ಕೆ ಬ್ರೇಕ್ ಹಾಕಲು ಹೈಕಮಾಂಡ್ ಮುಂದಾಗಿದೆ.

ಹೌದು. ರಾಜ್ಯ ಕಾಂಗ್ರೆಸ್ ನಾಯಕರಿಗೆ ಹೈಕಮಾಂಡ್ ಖಡಕ್ ವಾರ್ನಿಂಗ್ ರವಾನಿಸಿದೆ. ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ತಮ್ಮ ನೆಚ್ಚಿನ ಬಂಟ ಮಧುಸೂದನ್ ಮಿಸ್ತ್ರಿ ಅವರನ್ನ ರಾಜ್ಯಕ್ಕೆ ಕಳುಹಿಸಿಕೊಟ್ಟಿದ್ದಾರೆ. ವಿಪಕ್ಷ ನಾಯಕನ ಆಯ್ಕೆ ಸಂಬಂಧ ರಾಜ್ಯ ನಾಯಕರ ಅಭಿಪ್ರಾಯ ಸಂಗ್ರಹಿಸುವುದು ಮಿಸ್ತ್ರಿ ಭೇಟಿಯ ಉದ್ದೇಶವಾಗಿದೆ. ಆದರೆ ಇಲ್ಲಿ ಹೈಕಮಾಂಡ್ ರವಾನಿಸಿರುವ ಸಂದೇಶವೇ ಬೇರೆಯಾಗಿದೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

ರಾಜ್ಯ ಕಾಂಗ್ರೆಸ್ಸಿನ ಎರಡು ಬಣಗಳಾದ ಮೂಲ ಹಾಗೂ ವಲಸಿಗರಿಗೆ ಫುಲ್ ಸ್ಟಾಪ್ ಅನ್ನೋ ಖಡಕ್ ವಾರ್ನಿಂಗ್ ಒಂದನ್ನ ಕಾಂಗ್ರೆಸ್ ಹೈಕಮಾಂಡ್ ರವಾನಿಸಿದೆ. ಮಲ್ಲಿಕಾರ್ಜುನ ಖರ್ಗೆ ಹಾಗೂ ಸಿದ್ದರಾಮಯ್ಯ ಇಬ್ಬರಿಗೂ ಈ ಮೆಸೇಜ್ ತಲುಪಿಸುವ ಜವಬ್ದಾರಿ ಮಿಸ್ತ್ರಿ ಮೇಲಿದೆ.

ಮೂಲ, ವಲಸಿಗ ಫೈಟ್ ಇಂದಿಗೆ ನಿಲ್ಲಿಸಿ. ನೀವಾಗಲಿ ಅಥವಾ ನಿಮ್ಮ ಬೆಂಬಲಿಗರಾಗಲಿ ಎಲ್ಲೂ ಮಾತನಾಡಕೂಡದು. ಯಾರ ಬೆಂಬಲಿಗರು ಮಾತನಾಡಿದರೂ ಅದಕ್ಕೆ ನೀವುಗಳೇ ಜವಬ್ದಾರಾಗಿರುತ್ತೀರಿ ಎಂಬ ಸಂದೇಶವನ್ನು ಸೋನಿಯಗಾಂಧಿ ರವಾನಿಸಿದ್ದಾರೆ.

ಪಕ್ಷ ಸಂಕಷ್ಟದಲ್ಲಿದೆ ಈ ಸಂದರ್ಭದಲ್ಲಿ ಮೂಲ ವಲಸಿಗ ಅನ್ನೋ ಮುಸುಕಿನ ಗುದ್ದಾಟ ನಡೆಸಿ ಮತ್ತಷ್ಟು ಸಂಕಷ್ಟ ತಂದಿಡಬೇಡಿ. ತಮ್ಮ ತಮ್ಮ ಬೆಂಬಲಿಗರನ್ನ ತಾವು ಹದ್ದು ಬಸ್ತಿನಲ್ಲಿ ಇಟ್ಟುಕೊಳ್ಳಿ. ಇದು ಲಾಸ್ಟ್ ವಾರ್ನಿಂಗ್ ಎಲ್ಲಕ್ಕೂ ಫುಲ್ ಸ್ಟಾಪ್ ಬೀಳಲಿ ಎಂಬ ಸಂದೇಶ ಹೊತ್ತು ಮಧುಸೂದನ್ ಮಿಸ್ತ್ರಿ ಬಂದಿದ್ದಾರೆ. ಈ ಮೂಲಕ ರಾಜ್ಯ ಕಾಂಗ್ರೆಸ್ಸಿನ ಮೂಲ ವಲಸಿಗ ಫೈಟ್‍ಗೆ ಬ್ರೇಕ್ ಹಾಕಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಒಟ್ಟಿನಲ್ಲಿ ಸೋನಿಯ ಗಾಂಧಿಯವರ ಮಿಸ್ತ್ರಿ ಅಸ್ತ್ರ ಮುಸುಕಿನ ಗುದ್ದಾಟಕ್ಕೆ ಫುಲ್ ಸ್ಟಾಪ್ ಹಾಕುತ್ತಾ ಅಥವಾ ತಾತ್ಕಾಲಿಕ ಸ್ಪೀಡ್ ಬ್ರೇಕರ್ ಅಗುತ್ತಾ ಎಂಬುದೇ ಸದ್ಯದ ಕುತೂಹಲವಾಗಿದೆ.

Comments

Leave a Reply

Your email address will not be published. Required fields are marked *