ಯುದ್ಧವಿಮಾನ ಖರೀದಿಸುವ ಉದ್ದೇಶವೇ ಕಾಂಗ್ರೆಸ್ ಪಕ್ಷಕ್ಕೆ ಇರಲಿಲ್ಲ : ನಿರ್ಮಲಾ ಸೀತಾರಾಮನ್

ನವದೆಹಲಿ: ಲೋಕಸಭೆಯಲ್ಲಿ ಇಂದು ರಫೇಲ್ ವಿವಾದ ಕುರಿತು ಕಾವೇರಿದ ಚರ್ಚೆ ನಡೆದಿದ್ದು, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಆರೋಪಗಳಿಗೆ ರಕ್ಷಣಾ ಸಚಿವರಾದ ನಿರ್ಮಲಾ ಸೀತಾರಾಮನ್ ಆವೇಷಭರಿತವಾಗಿ ಪ್ರತ್ಯುತ್ತರ ನೀಡಿದ್ದಾರೆ.

ಯುದ್ಧವಿಮಾನ ಖರೀದಿಸುವ ಉದ್ದೇಶವೇ ಕಾಂಗ್ರೆಸ್ ಪಕ್ಷಕ್ಕೆ ಇರಲಿಲ್ಲ. ಅಲ್ಲದೇ ಅವರಿಗೆ ದೇಶದ ಭದ್ರತೆಯ ವಿಷಯ ಆದ್ಯತೆಯಾಗಿರಲಿಲ್ಲ. `ಕಾಣಿಕೆ’ ಸಿಗದ ಕಾರಣ ಕಾಂಗ್ರೆಸ್ ರಫೇಲ್ ಒಪ್ಪಂದ ಸ್ಥಗಿತಗೊಳಿಸಿತ್ತು. ಎನ್‍ಡಿಎ ಅವಧಿಯಲ್ಲಿ ದಲ್ಲಾಳಿಗಳಿಲ್ಲದೇ ಎಲ್ಲ ವ್ಯವಹಾರ ಪೂರ್ಣಗೊಂಡಿದೆ. 5 ವರ್ಷದ ಅವಧಿಯಲ್ಲಿ ಒಂದೇ ಒಂದು ಭ್ರಷ್ಟಾಚಾರ ಪ್ರಕರಣಗಳು ವರದಿಯಾಗಿಲ್ಲ ಎಂದು ತಿರುಗೇಟು ಕೊಟ್ಟರು.

ಎಚ್‍ಎಎಲ್ ಅಭಿವೃದ್ಧಿಪಡಿಸಲು ಕಾಂಗ್ರೆಸ್ ಸರ್ಕಾರ ಯಾವುದೇ ಕ್ರಮವನ್ನು ಕೈಗೊಳ್ಳಲಿಲ್ಲ. ಆದರೆ ಈಗ ಮೊಸಳೆ ಕಣ್ಣೀರು ಹಾಕುತ್ತಿದೆ. ಎಚ್‍ಎಎಲ್ ನಮ್ಮ ದೇಶದ ಹೆಮ್ಮೆ. ಎಚ್‍ಎಎಲ್‍ಗೆ 1 ಲಕ್ಷ ಕೋಟಿ ರೂ. ಮೌಲ್ಯದ ಒಪ್ಪಂದವನ್ನು ಎನ್‍ಡಿಎ ಸರ್ಕಾರ ಕೊಟ್ಟಿದೆ ಎಂದು ಸ್ಪಷ್ಟಪಡಿಸಿದರು.

ರಫೇಲ್ ಜೆಟ್ ದರ 1,600 ಕೋಟಿ ರೂ. ಅಥವಾ 1,500 ಕೋಟಿ ರೂ. ಅಲ್ಲ. ರಫೇಲ್ ಜೆಟ್ ದರವನ್ನು ನಾವು ಖರೀದಿಸುತ್ತಿರುವುದು 670 ಕೋಟಿ ರೂ. ವೆಚ್ಚದಲ್ಲಿ. ಯುಪಿಎ ಅವಧಿಯಲ್ಲಿ ಇದರ ಮೌಲ್ಯ 737 ಕೋಟಿ ರೂ. ಆಗಿತ್ತು. ನಾವು ಶೇಕಡ 9 ರಷ್ಟು ಕಡಿಮೆ ಮೊತ್ತದಲ್ಲಿ ಒಪ್ಪಂದ ಮಾಡಿಕೊಂಡಿದ್ದೇವೆ ಎಂದು ಭಾವೋದ್ವೇಗದಲ್ಲಿ ಮಾತನಾಡಿದರು. ಈ ವೇಳೆ ರಕ್ಷಣಾ ಸಚಿವೆಯ ಮಾತಿಗೆ ಅಮಿತ್ ಶಾ ಸೇರಿದಂತೆ ಪಕ್ಷದ ನಾಯಕರು ಭೇಷ್ ಅಂದಿದ್ದಾರೆ.

ಇತ್ತ ಮತ್ತೆ ರಫೇಲ್ ವಿವಾದವನ್ನೇ ಮತ್ತೆ ಪ್ರಸ್ತಾಪಿಸಿರುವ ರಾಹುಲ್ ಗಾಂಧಿ ಅವರು, ನನ್ನ ಪ್ರಶ್ನೆಗಳಿಗೆ ಉತ್ತರವೇ ಸಿಕ್ಕಿಲ್ಲ. ರಕ್ಷಣಾ ಸಚಿವೆ ನಿರ್ಮಲಾ ಅವರು ಓಡಿಹೋಗುವ ಯತ್ನ ಮಾಡಿದ್ದಾರೆ. ಅನಿಲ್ ಅಂಬಾನಿಯನ್ನ ಪಾಲುದಾರನನ್ನಾಗಿ ಮಾಡುವಂತೆ ಡಸೌಲ್ಟ್ ಗೆ ಮೋದಿ ಅವರು ಒತ್ತಡ ಹೇರಿದ್ದಾರೆ ಎಂದು ರಾಹುಲ್ ಗಾಂಧಿ ಮತ್ತೊಂದು ಆರೋಪ ಮಾಡಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *