ಮುಂಬೈನ ರಸ್ತೆ ಗುಂಡಿಗಳನ್ನು ಮುಚ್ಚಲು ಕಾಂಗ್ರೆಸ್ ಕಾರ್ಯಕರ್ತರಿಂದ ಕಾರ್ಯಕ್ರಮ

ಮುಂಬೈ: ಮುಂಬೈ ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮುಂಬೈನ ರಸ್ತೆ ಗುಂಡಿಗಳನ್ನು ಮುಚ್ಚಲು ‘ಆವೊ ಪಾಥ್ ಹೋಲ್ಸ್ ಗಿಣೇ’ ಎಂಬ ಕಾರ್ಯಕ್ರಮವನ್ನು ಆಯೋಜಿಸಿದರು. ಕಾಂಗ್ರೆಸ್ ಕಾರ್ಯಕರ್ತರೇ ಸ್ವತಃ ಗುಂಡಿಯನ್ನು ಮುಚ್ಚುವ ಮೂಲಕ ಬಿಜೆಪಿ ಮತ್ತು ಶಿವಸೇನಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್‍ನ ಸಿಟಿ ಯೂನಿಟ್ ಮುಖ್ಯಸ್ಥ ಸಂಜಯ್ ನಿರುಪಮ್ ಮಾತನಾಡುತ್ತಾ, ಶಿವಸೇನಾ ಮತ್ತು ಬಿಜೆಪಿ ಬೃಹತ್ ಮುಂಬೈ ಮುನಿಸಿಪಲ್ ಕಾರ್ಪೋರೇಶನ್ ನಿಂದ ಹೊರಬರಬೇಕಿದೆ. ಇಲ್ಲವಾದರೆ ನಾಗರಿಕರನ್ನು ನಗರದ ಗುಂಡಿ ಬಿದ್ದಿರುವ ರಸ್ತೆಗಳಿಂದ ಮುಕ್ತವಾಗಿಡಲು ಸಾಧ್ಯವಾಗುವುದಿಲ್ಲ ಎಂದು ಹೇಳಿದರು.

ಬಿಎಂಸಿಯೂ ಗುಂಡಿಗಳನ್ನು ಮುಕ್ತಗೊಳಿಸಲು 48 ಗಂಟೆಗಳ ಗಡುವು ನೀಡಿದ್ದು, ಅದು ಕೊನೆಗೊಂಡಿದೆ. ಆದರೂ ಬಹುತೇಕ ರಸ್ತೆಗಳನ್ನು ದುರಸ್ತಿ ಮಾಡಲು ಬಿಎಂಸಿ ವಿಫಲವಾಗಿದೆ. ಬಿಎಂಸಿ ನಿರಾಸಕ್ತಿ ಮತ್ತು ಅಸಮರ್ಥತೆಯಿಂದ ಮುಂಬೈ ನಿವಾಸಿಗಳು ತೊಂದರೆಪಡುವಂತಾಗಿದೆ. ಅಷ್ಟೇ ಅಲ್ಲದೇ ಮುಂಬೈನಲ್ಲಿ ಈ ರಸ್ತೆ ಗುಂಡಿಗಳಿಗೆ ಸಂಬಂಧಿಸಿದಂತೆ ಪ್ರತಿ ವರ್ಷ ಹಲವರು ಸಾವನ್ನಪ್ಪುತ್ತಿದ್ದಾರೆ ಎಂದು ನಿರೂಪಮ್ ವಾಗ್ದಾಳಿ ನಡೆಸಿದರು.

ಬಿಎಂಸಿಯ ಸಾಮಾನ್ಯ ಸಭೆಯಲ್ಲಿ ಹೆಚ್ಚುವರಿ ಮುನಿಸಿಪಲ್ ಕಮೀಷನರ್ ವಿಜಯ್ ಸಿಂಘಾಲ್ ಅವರು ರಸ್ತೆಗಳನ್ನು ಸರಿಪಡಿಸಲು 48 ಗಂಟೆಗಳ ಭರವಸೆಯನ್ನು ನೀಡಿದ್ದು, ಕಾರ್ಪೋರೇಟರ್‍ಗಳು ರಸ್ತೆಗಳ ಗುಂಡಿಗಳಿಗೆ ಸಂಬಂಧಿಸಿದಂತೆ ನಾಗರಿಕ ಆಡಳಿತ ಸಭೆಯನ್ನು ಸಹ ನಡೆಸಿದ್ದರು.

ಈ ಗುಂಡಿಗಳನ್ನು ಮುಕ್ತಗೊಳಿಸಲು ಒಟ್ಟು 2,500 ಟನ್ಸ್ ಸಿಮೆಂಟ್ ಮಿಶ್ರಣದ ಅವಶ್ಯಕತೆ ಇದೆ. ಆದರೆ ಬರೀ 40 ಟನ್ಸ್ ಮಾತ್ರ ಸ್ಟಾಕ್ ಇದೆ. ಹಾಗಾಗಿ ಇದರಿಂದ ರಸ್ತೆ ಗುಂಡಿಗಳನ್ನು ಮುಚ್ಚಲು ಸಾಧ್ಯವಾಗುದಿಲ್ಲ. ಇದಕ್ಕೆ ಬಿಜೆಪಿ ಮತ್ತು ಶಿವಸೇನಾ ಕಾರಣವಾದ್ದರಿಂದ ಬಿಎಂಸಿಯಿಂದ ಹೊರಬರಬೇಕು ಎಂದು ಗುಂಡಿ ರಿಪೇರಿಂಗ್ ಡ್ರೈವ್‍ನಲ್ಲಿ ಭಾಗವಹಿಸಿದ ಸಂದರ್ಭದಲ್ಲಿ ನಿರೂಪಮ್ ಹೇಳಿದರು.

Comments

Leave a Reply

Your email address will not be published. Required fields are marked *