ದೆಹಲಿ ಹೈಕೋರ್ಟಿಗೆ ಡಿಕೆಶಿ ಅರ್ಜಿ?

ನವದೆಹಲಿ: ಜಾರಿ ನಿರ್ದೇಶನಾಲಯ(ಇಡಿ) ವಿಶೇಷ ಕೋರ್ಟಿನಲ್ಲಿ ಜಾಮೀನು ಸಿಗದೇ ನಿರಾಸೆಯಾಗಿರುವ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಇಂದು ದೆಹಲಿ ಹೈ ಕೋರ್ಟ್ ಮೆಟ್ಟಿಲೇರಲಿದ್ದಾರೆ.

ಇಡಿ ವಿಶೇಷ ಕೋರ್ಟ್ ಆದೇಶ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲಿದ್ದಾರೆ. ಇಡಿ ಕೋರ್ಟಿನಲ್ಲಿ ತೀರ್ಪು ಬರುತ್ತಿದ್ದಂತೆಯೇ ವಕೀಲರೊಂದಿಗೆ ಚರ್ಚೆ ನಡೆಸಿದ ಡಿ.ಕೆ ಸುರೇಶ್, ದೆಹಲಿ ಹೈಕೋರ್ಟಿಗೆ ಅರ್ಜಿ ಸಲ್ಲಿಸುವ ಬಗ್ಗೆ ಚಿಂತಿಸಿದ್ದಾರೆ. ಈ ಬಗ್ಗೆ ಇಂದು ವಕೀಲರನ್ನು ಭೇಟಿ ಮಾಡಿ ಚರ್ಚೆ ಮಾಡಲಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

ಜಾಮೀನು ನಿರಾಕರಣೆಗೆ ನೀಡಿರುವ ಕಾರಣಗಳನ್ನೇ ಮುಂದಿಟ್ಟುಕೊಂಡು ವಾದ ಮಾಡಿ ಜಾಮೀನು ದಕ್ಕಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಇಡಿ ಕೋರ್ಟ್ ಜಾಮೀನು ನಿರಾಕರಿಸಲು ಪ್ರಮುಖವಾಗಿ ಮೂರು ಕಾರಣ ಕೊಟ್ಟಿತ್ತು. 317 ಖಾತೆಗಳ ಮೂಲಕ ಹಣ ವರ್ಗಾವಣೆ, ಡಿಕೆಶಿ ಪ್ರಭಾವಿಯಾಗಿರೋದು ಮತ್ತು ಪ್ರಕರಣ ತನಿಖಾ ಹಂತದಲ್ಲಿದೆ. ಹಾಗಾಗಿ ಜಾಮೀನು ನೀಡೋಕೆ ಸಾಧ್ಯವಿಲ್ಲ ಅನ್ನೋದನ್ನು ಸ್ಪಷ್ಟಪಡಿಸಿದೆ. ಇದನ್ನೂ ಓದಿ: ಡಿಕೆಶಿ ಜಾಮೀನು ಅರ್ಜಿ ವಜಾ – ತಿಹಾರ್ ಜೈಲೇ ಗತಿ

ಇದೇ ಮೂರು ವಿಚಾರಗಳನ್ನು ಇಟ್ಟುಕೊಂಡು ಹೈಕೋರ್ಟಿನಲ್ಲಿ ಡಿಕೆಶಿ ಜಾಮೀನು ಅರ್ಜಿ ಸಲ್ಲಿಸಬೇಕಾಗುತ್ತದೆ. ಜಾಮೀನು ನಿರಾಕರಿಸಿ ಕೊಟ್ಟಿರುವ ಆದೇಶದ ಪ್ರತಿ ಪಡೆದಿರುವ ಡಿಕೆಶಿ ಪರ ವಕೀಲರು, ಇಂದು ಹೈಕೋರ್ಟಿಗೆ ಮೆಲ್ಮನವಿ ಸಲ್ಲಿಸುವುದಕ್ಕೆ ಡ್ರಾಫ್ಟ್ ರೆಡಿಮಾಡಿಕೊಳ್ಳಲಿದ್ದಾರೆ. ಇಂದು ಸಂಜೆ ಅಥವಾ ನಾಳೆ ಹೈಕೋರ್ಟಿಗೆ ಜಾಮೀನು ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ.

ಇನ್ನೆಷ್ಟು ದಿನ ಜೈಲಲ್ಲಿ ಡಿಕೆಶಿ?:
ಇಂದು ಅಥವಾ ನಾಳೆ ಹೈಕೋರ್ಟಿಗೆ ಬೇಲ್ ಅರ್ಜಿ ಸಲ್ಲಿಸಿದರೆ ವಿಚಾರಣೆಗೆ ಕನಿಷ್ಠ ಒಂದು ವಾರ ಆಗಬಹುದು. ಇ.ಡಿಗೆ ಆಕ್ಷೇಪಣೆ ಸಲ್ಲಿಸಲು ಕೋರ್ಟ್ ಅವಕಾಶ ನೀಡಬಹುದು. ಎರಡೂ ಕಡೆಯ ವಾದ-ಪ್ರತಿವಾದ ಕೋರ್ಟ್ ಆಲಿಸಲಿದೆ. ಕೋರ್ಟ್ ಬೇಲ್ ಕೊಡಬಹುದು ಅಥವಾ ಕೊಡದೆಯೂ ಇರಬಹುದು. ಈ ಎಲ್ಲಾ ಪ್ರಕ್ರಿಯೆ ಮುಗಿಯಲು ಕನಿಷ್ಟ ಒಂದು ತಿಂಗಳು ಬೇಕು. ಹೀಗಾಗಿ ಇನ್ನೂ ಕನಿಷ್ಠ ಒಂದು ತಿಂಗಳು ಡಿಕೆಶಿ ಜೈಲಿನಲ್ಲೇ ಉಇಯುವ ಸಾಧ್ಯತೆ ಇದೆ. ಒಂದು ವೇಳೆ ಇಲ್ಲಿ ಬೇಲ್ ಸಿಗದಿದ್ದರೆ ಸುಪ್ರೀಂಕೋರ್ಟಿಗೆ ಮೇಲ್ಮನವಿ ಸಲ್ಲಿಸುವ ಸಾಧ್ಯತೆಯೂ ಇದೆ.

Comments

Leave a Reply

Your email address will not be published. Required fields are marked *