ರಾಜ್ಯದ ಸಿಎಂ, ದೇಶದ ಗೃಹಮಂತ್ರಿ ಸಂವಿಧಾನವನ್ನೇ ಬುಡಮೇಲು ಮಾಡಲು ಹೊರಟ್ಟಿದ್ದಾರೆ: ಸಿದ್ದು ಆರೋಪ

ಬೆಂಗಳೂರು: ಸಿಎಂ ಬಿಎಸ್ ಯಡಿಯೂರಪ್ಪ ಅವರು ಹುಬ್ಬಳ್ಳಿಯ ಪಕ್ಷದ ಸಭೆಯಲ್ಲಿ ಮಾತನಾಡಿದ್ದಾರೆ ಎನ್ನಲಾದ ವಿಡಿಯೋ ಕುರಿತು ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ನಿಯೋಗ ರಾಜ್ಯಪಾಲರನ್ನು ಭೇಟಿ ಮಾಡಿ ದೂರು ಸಲ್ಲಿಕೆ ಮಾಡಿದ್ದಾರೆ.

ರಾಜ್ಯಪಾಲರ ಭೇಟಿ ಬಳಿಕ ಮಾತನಾಡಿದ ಅವರು, ಎಲ್ಲಾ ಮಾಧ್ಯಮಗಳಲ್ಲಿ ಆಡಿಯೋ ಬಗ್ಗೆ ವರದಿಯಾಗಿದೆ. ಯಡಿಯೂರಪ್ಪ ಮಾತನಾಡಿದ ಬಗ್ಗೆ ಇಡೀ ದೇಶಕ್ಕೆ ಗೊತ್ತಾಗಿದೆ. ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಬಿಎಸ್‌ವೈ ಹೇಳಿಕೆ ನೀಡಿದ್ದು, ನಾನೊಬ್ಬನೇ ಸರ್ಕಾರ ಬೀಳಿಸಿಲ್ಲ, ಅಮಿತ್ ಶಾ ಮಾರ್ಗದರ್ಶನದಂತೆ ಮಾಡಿದ್ದೇನೆ ಎಂದಿದ್ದಾರೆ. ಶಾಸಕರನ್ನು ಅಮಿತ್ ಶಾ ಮಾನಿಟರ್ ಮಾಡಿದ್ದಾರೆ ಎಂದು ಬಿಎಸ್‌ವೈ ಒಪ್ಪಿಕೊಂಡಿದ್ದಾರೆ ಎಂದರು.

ಸಿಎಂ ಬಿಎಸ್‌ವೈ ಹಾಗೂ ಅಮಿತ್ ಶಾ ಅವರು 10ನೇ ಶೆಡ್ಯೂಲ್ ಅನ್ನು ಉಲ್ಲಂಘಿಸಿದ್ದಾರೆ. ಮುಖ್ಯಮಂತ್ರಿಗಳಾಗಿ ಬಿಎಸ್‌ವೈ ಹಾಗೂ ಮತ್ತೊಬ್ಬರು ಈ ದೇಶದ ಗೃಹ ಮಂತ್ರಿಯಾದ ಅಮಿತ್ ಶಾ ಇಬ್ಬರೂ ಸೇರಿ ಸಂವಿಧಾನವನ್ನೇ ಬುಡಮೇಲು ಮಾಡಲು ಹೊರಟ್ಟಿದ್ದಾರೆ. ಆದ್ದರಿಂದ ರಾಜ್ಯಪಾಲರಿಗೆ ಮನವಿ ಮಾಡಿದ್ದು, ಅಮಿತ್ ಶಾರ ರಾಜೀನಾಮೆಗೆ ಆಗ್ರಹಿಸಿದ್ದೇವೆ. ರಾಜ್ಯಪಾಲರಿಗೆ ನಮ್ಮ ದೂರನ್ನು ರಾಷ್ಟ್ರಪತಿಗಳಿಗೆ ಕಳುಹಿಸಲು ಕ್ರಮಕೈಗೊಳ್ಳಲು ಮನವರಿಕೆ ಮಾಡಿದ್ದೇವೆ ಎಂದರು.

ರಾಜಭವನಕ್ಕೆ ಕಾಂಗ್ರೆಸ್ ನಿಯೋಗದಲ್ಲಿ ರಮೇಶ್ ಕುಮಾರ್, ಎಸ್.ಆರ್.ಪಾಟೀಲ್, ದಿನೇಶ್ ಗುಂಡೂರಾವ್, ಈಶ್ವರ್ ಖಂಡ್ರೆ, ಉಗ್ರಪ್ಪ ಸೇರಿದಂತೆ ಹಲವು ನಾಯಕರಿದ್ದರು. ವಿಡಿಯೋ ಸಮೇತ ಆಪರೇಷನ್ ಕಮಲದ ಆಡಿಯೋ-ವಿಡಿಯೋದೊಂದಿಗೆ ರಾಜ್ಯಪಾಲರಿಗೆ ದೂರು ನೀಡಿದ್ದಾರೆ. ಈ ವೇಳೆ ಮಾತನಾಡಿದ ದಿನೇಶ್ ಗುಂಡೂರಾವ್ ಅವರು, ಬಿಜೆಪಿಯವರ ಕುತಂತ್ರ ಹೊರಬಿದ್ದಿದ್ದು, ಅಮಿತ್ ಶಾ ಹಾಗೂ ಸಿಎಂ ಬಿಎಸ್‌ವೈ ಅವರ ಮೇಲೆ ಕ್ರಮಕೈಗೊಳ್ಳಬೇಕು ಎಂದರು.

Comments

Leave a Reply

Your email address will not be published. Required fields are marked *