ಕಾಂಗ್ರೆಸ್ ಕಾರ್ಪೋರೇಟರ್ ಪತಿ, ಬೆಂಬಲಿಗರಿಂದ ವ್ಯಕ್ತಿ ಮೇಲೆ ಹಲ್ಲೆ?

ಬೆಂಗಳೂರು: ವ್ಯಕ್ತಿಯೊಬ್ಬರ ಮೇಲೆ ಕಾಂಗ್ರೆಸ್ ಕಾರ್ಪೋರೇಟರ್ ಅವರ ಪತಿ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂಬ ಆರೋಪವೊಂದು ಕೇಳಿಬಂದಿದೆ.

ಜೀವನ್ ಭೀಮಾನಗರದ ತಿಪ್ಪಸಂದ್ರ ವಾರ್ಡ್ ನಲ್ಲಿ ಭಾನುವಾರ ರಾತ್ರಿ ಈ ಘಟನೆ ನಡೆದಿದೆ. ಕಾರ್ಪೋರೇಟರ್ ಶಿಲ್ಪ ಅವರ ಪತಿ ಅಭಿಲಾಷ್ ರೆಡ್ಡಿ ಮತ್ತು ಬೆಂಬಲಿಗರು ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ವ್ಯಕ್ತವಾಗಿದೆ. ಇನ್ನು ಹಲ್ಲೆಗೊಳಗಾದ ವಿಜಯ್ ಕುಮಾರ್ ಮತ್ತು ಸುರೇಶ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ

ನಮ್ಮದು ತಿಪ್ಪಸಂದ್ರದಲ್ಲಿ ಸ್ಟೀಲ್ ಅಂಗಡಿ ಇದೆ. ಹಲವು ದಿನಗಳಿಂದ ಅಂಗಡಿ ಮುಂದೆ ಕಾಮಗಾರಿ ನಡೆಯುತ್ತಿತ್ತು. ತ್ವರಿತವಾಗಿ ಕಾಮಗಾರಿ ಮಾಡಿ ವ್ಯವಹಾರಕ್ಕೆ ತೊಂದರೆ ಆಗುತ್ತಿದೆ ಎಂದು ಕಾರ್ಪೋರೇಟರ್ ಗೆ ಮನವಿ ಮಾಡಿದ್ದೆ. ಈ ವೇಳೆ ಅಭಿಲಾಷ್ ರೆಡ್ಡಿ ಬೇಗ ಕಾಮಗಾರಿ ನಡೆಸಬೇಕಾದರೆ ಎರಡು ಲಕ್ಷ ಬೇಕು ಕೊಡುತ್ತೀಯಾ ಅಂತಾ ಅವಾಜ್ ಹಾಕಿದ್ದಾರೆ. ಇದೇ ವಿಚಾರವಾಗಿ ಕಾರ್ಪೊರೇಟರ್ ಬೆಂಬಲಿಗರು ಭಾನುವಾರ ಸಂಜೆ ನಮ್ಮ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಸುರೇಶ್ ಹೇಳಿದ್ದಾರೆ.

ಹಲ್ಲೆಗೊಳಾಗದ ಸುರೇಶ್ ಮತ್ತು ವಿಜಯ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಈ ಸಂಬಂಧ ಜೀವನ್ ಭೀಮಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆರೋಪ ತಳ್ಳಿ ಹಾಕಿದ ಅಭಿಲಾಷ್: ಈ ಪ್ರಕರಣಕ್ಕೂ ನನಗೂ ಇದಕ್ಕೂ ಸಂಬಂಧ ಇಲ್ಲ. ನಾನು ಭಾನುವಾರ ರಾಹುಲ್ ಗಾಂಧಿ ಕಾರ್ಯಕ್ರಮಕ್ಕೆ ಹೋಗಿದ್ದೆ. ಏನಾಗಿದೆ ಅನ್ನೋದೇ ಗೊತ್ತಿಲ್ಲ. ಕುಡಿದ ಮತ್ತಿನಲ್ಲಿ ಗಲಾಟೆ ಮಾಡಿಕೊಂಡಿದ್ದಾರೆ ಎಂಬ ಮಾಹಿತಿ ಇದೆ. ನಾನು ಹೋಗಿ ನೋಡುತ್ತೀನಿ ಎಂದು ಹೇಳುವ ಮೂಲಕ ಕಾರ್ಪೋರೇಟರ್ ಪತಿ ಅಭಿಲಾಷ್ ರೆಡ್ಡಿ ಆರೋಪ ತಳ್ಳಿ ಹಾಕಿದ್ದಾರೆ.

Comments

Leave a Reply

Your email address will not be published. Required fields are marked *