ಕಾಂಕ್ರಿಟ್ ಕಟ್ಟಡಗಳ ಮಧ್ಯೆ ಬೆಳೆ ಬೆಳೆದು ಇಬ್ಬರು ಹೆಣ್ಮಕ್ಳ ಮದ್ವೆ ಮಾಡಿಸಿದ್ರು!

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಎತ್ತ ನೋಡಿದ್ರೂ ಬರೀ ಕಾಂಕ್ರಿಟ್ ಕಟ್ಟಡಗಳೇ ಕಾಣತ್ತದೆ. ಆದರೆ ಇಂತಹ ಕಾಂಕ್ರಿಟ್ ಕಟ್ಟಡದಲ್ಲಿ ರೈತರೊಬ್ಬರು ಬೆಳೆ ಬೆಳೆದಿದ್ದಾರೆ.

ನಗರದ ನೀಲಸಂದ್ರದ ಆನೆಪಾಳ್ಯದಲ್ಲಿರುವ ಮುನಿವೆಂಕಟಪ್ಪ ಕಾಂಕ್ರಿಟ್ ಮಧ್ಯೆ ಬೆಳೆ ಬೆಳೆದ ರೈತ. ಇವರು ಕಾಂಕ್ರಿಟ್ ಕಟ್ಟಡಗಳ ಮಧ್ಯೆ ಇರುವ 2 ಕುಂಟೆ ಜಾಗದಲ್ಲಿ 20 ವರ್ಷಗಳಿಂದ ಬೆಳೆ ಬೆಳೆಯುತ್ತಾ ಜೀವನ ಮಾಡುತ್ತಿದ್ದಾರೆ.

ನಾನು ಕಳೆದ ಇಪ್ಪತ್ತು ವರ್ಷಗಳಿಂದ ತರಕಾರಿ, ಸೊಪ್ಪು, ಬೀನ್ಸ್, ಟೊಮೆಟೋ, ಹೂಕೋಸ್ ಬೆಳೆಯನ್ನ ಬೆಳೆದು ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದೇನೆ. ಈ ಚಿಕ್ಕ ಜಾಗದಲ್ಲಿ ನಲವತ್ತು ದಿನಕ್ಕೊಮ್ಮೆ ಬರುವ ಬೆಳೆಯನ್ನ ಬೆಳೆದು ಜೀವನ ಮಾಡಿ ತನ್ನ ಇಬ್ಬರು ಹೆಣ್ಣು ಮಕ್ಕಳ ಮದುವೆ ಕೂಡ ಮಾಡಿದ್ದೇನೆ ಎಂದು ಮುನಿ ವೆಂಕಟಪ್ಪ ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ತಿಳಿಸಿದ್ದಾರೆ.

ಇಲ್ಲಿ ಬೆಳೆ ಬೆಳೆಯುವುದಕ್ಕೆ ನೀರಿಗಾಗಿ ಚಿಕ್ಕದಾಗಿ ಬಾವಿ ಮಾಡಿದ್ದು, ಬಾವಿಯಿಂದ ನೀರು ಸೇದುವ ರೀತಿ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಬಳಿಕ ನೀರನ್ನ ನಮ್ಮ ತಂದೆ ಕೈಯಲ್ಲೇ ಹಾಕುತ್ತಾ ಹೋಗುತ್ತಾರೆ. ನಲವತ್ತು ದಿನಕ್ಕೊಮ್ಮೆ ಬರುವ ಬೆಳೆಯನ್ನ ಬೆಳೆದು ಮಾರಾಟ ಮಾಡಲಾಗುತ್ತದೆ. ನಮ್ಮ ಈ ಕಾರ್ಯ ವೈಖರಿಯ ಬಗ್ಗೆ ಸುತ್ತ ಮುತ್ತಿಲಿನ ಜನ ಹರ್ಷ ವ್ಯಕ್ತಪಡಿಸುತ್ತಿದ್ದಾರೆ. ನಮಗೆ ಈ ರೀತಿ ಕೃಷಿ ಕಾರ್ಯಕ್ಕೆ ಯಾರು ತೊಂದರೆ ಮಾಡದೇ ಸಹಕಾರ ಮಾಡುತ್ತಾರೆ ಎಂದು ಮಗಳು ಕಲಾವತಿ ಹೇಳಿದ್ದಾರೆ.

ಸಿಲಿಕಾನ್ ಸಿಟಿಯಲ್ಲಿ ಚಿಕ್ಕ ಜಾಗ ಇದ್ದರೂ ಕೂಡ ಬಿಲ್ಡಿಂಗ್ ಕಟ್ಟಿ ಬಾಡಿಗೆಗೆ ಕೊಡುತ್ತಾರೆ. ಆದರೆ ಇವರು ಈ ಜಾಗದಲ್ಲಿಯೇ ಬೆಳೆ ಬೆಳೆದು ಭೂಮಿ ಇದ್ದರು ಬೇಸಾಯ ಮಾಡದ ರೈತರಿಗೆ ಮಾದರಿಯಾಗಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *