ನಾನು ಸಹ ನಗರ ನಕ್ಸಲ್ ಬೋರ್ಡ್ ಪ್ರದರ್ಶಿಸಿದ್ದ ಕಾರ್ನಾಡ್ ವಿರುದ್ಧ ದೂರು

ಬೆಂಗಳೂರು: ಗೌರಿ ಸಂಸ್ಮರಣಾ ದಿನದ ಆಚರಣೆ ವೇಳೆ ಸಾಹಿತಿ ಗಿರೀಶ್ ಕಾರ್ನಾಡ್ ಅವರು ನಾನು ಸಹ ನಗರ ನಕ್ಸಲ್ ಎಂಬ ಅಡಿಬರಹವಿದ್ದ ಬೋರ್ಡನ್ನು ಹಾಕಿಕೊಂಡು ಪರೋಕ್ಷವಾಗಿ ನಕ್ಸಲ್ ಚಟುವಟಿಕೆಗಳಿಗೆ ಪ್ರಚೋದನೆ ನೀಡುತ್ತಿದ್ದಾರೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.

ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಗಿರೀಶ್ ಕಾರ್ನಾಡ್ ಸಾಹಿತಿಯಾಗಿದ್ದುಕೊಂಡು ಹಿಂಸೆಗೆ ಪರೋಕ್ಷವಾಗಿ ಪ್ರಚೋದನೆ ನೀಡುತ್ತಿದ್ದಾರೆ. ಈ ರೀತಿ ಮಾಡುವ ಮೂಲಕ ಅವರು ಉಗ್ರವಾದಿ ವ್ಯಕ್ತಿಗೆ ಸಮನಾಗಿದ್ದಾರೆ. ನಾನು ಒಬ್ಬ ನಕ್ಸಲ್ ಎನ್ನುವ ಹೇಳುವ ಮೂಲಕ ನಕ್ಸಲರಿಗೆ ಪ್ರಚೋದನೆ ನೀಡುತ್ತಿದ್ದಾರೆ. ಒಂದು ವೇಳೆ ಹಿಂದೂ ಸಂಘಟನೆಗಳು ಇಂತಹ ಹೇಳಿಕೆಗಳನ್ನು ನೀಡಿದ್ದರೆ, ಕೂಡಲೇ ಸ್ವಯಂಪ್ರೇರಿತ ಕೇಸ್ ದಾಖಲಿಸುತ್ತಿದ್ದರು ಎಂದು ಕಿಡಿಕಾರಿದರು.

ಪ್ರಚೋದನೆಗೆ ಹೇಳಿಕೆ ನೀಡುವ ಹೇಳಿಕೆಗಳನ್ನು ನೀಡುತ್ತಿದ್ದರೂ, ಗಿರೀಶ್ ಕಾರ್ನಾಡ್ ವಿರುದ್ಧ ಸುಮೋಟೋ ಕೇಸ್ ಹಾಕಿಲ್ಲ. ನಮಗೊಂದು ಕಾನೂನು, ಅವರಿಗೊಂದು ಕಾನೂನು ಇದೆಯೇ ಎಂದು ಪ್ರಶ್ನಿಸಿದರು. ಅಲ್ಲದೇ ಶೀಘ್ರವೇ ಅವರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ, ಕಾರ್ನಾಡ್ ಅವರ ಮನೆ ಮುಂದೆ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದರು.

ಕಳೆದ ಬುಧವಾರ ಸೆಂಟ್ರಲ್ ಕಾಲೇಜಿನ ಜ್ಞಾನ ಜ್ಯೋತಿ ಸಂಭಾಗಣದಲ್ಲಿ ಗೌರಿ ಡೇ ಆಚರಣೆಯ ಕಾರ್ಯಕ್ರಮದಲ್ಲಿ ಗಿರೀಶ್ ಕಾರ್ನಾಡ್‍ರವರು `ನಾನು ಒಬ್ಬ ನಗರ ನಕ್ಸಲ್’ ಎನ್ನುವ ಬೋರ್ಡ್ ಹಾಕಿಕೊಳ್ಳುವ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *