ಪಿಎಫ್ ಕೇಳಿದ್ದಕ್ಕೆ ಕಂಪನಿಯಿಂದ 30 ಮಂದಿ ಕಾರ್ಮಿಕರನ್ನ ಹೊರಹಾಕಿದ್ರು

ಚಿಕ್ಕಬಳ್ಳಾಪುರ: ಕಂಪನಿ ಕಡೆಯಿಂದ ಪಿಎಫ್(ಭವಿಷ್ಯ ನಿಧಿ) ಕಟ್ಟುತ್ತಿಲ್ಲ ಯಾಕೆ ಎಂದು ಕೇಳಿದ 30 ಮಂದಿ ಕಾರ್ಮಿಕರನ್ನು ಕೆಲಸದಿಂದ ಹೊರಹಾಕಿದ್ದಾರೆ ಎಂದು ಪ್ರತಿಭಟನೆ ನಡೆಸಿದ ಘಟನೆ ಚಿಕ್ಕಬಳ್ಳಾಪುರ ನಗರ ಹೊರವಲಯದ ಕೈಗಾರಿಕಾ ಪ್ರದೇಶದಲ್ಲಿ ನಡೆದಿದೆ.

ಸ್ಯಾಮ್ಕೋ ಕಂಪನಿಯಲ್ಲಿ ಕಳೆದ 2 ವರ್ಷಗಳಿಂದ ಚಿಕ್ಕಬಳ್ಳಾಪುರ ಮೂಲದ 24 ಮಂದಿ ಕಾರ್ಮಿಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಕೆಲಸಕ್ಕೆ ಸೇರಿದಾಗ 11,000 ಸಂಬಳ, ಇಎಸ್‍ಐ ಹಾಗೂ ಪಿಎಫ್ ಸೌಲಭ್ಯ ನೀಡುವುದಾಗಿ ಕೆಲಸ ಕೊಟ್ಟಿದ್ದ ಕಂಪನಿಯವರು, ಈಗ ತಿಂಗಳಿಗೆ 7,000 ಸಂಬಳ ಮಾತ್ರ ಕೊಡುತ್ತಿದ್ದಾರೆ.

ಇಷ್ಟು ದಿನ ಪಿಎಫ್ ಕಟ್ಟುತ್ತಿದ್ದೇವೆ ಎಂದು ಹೇಳಿದ್ದ ಕಂಪನಿ ಈಗ ಕಟ್ಟಿಲ್ಲ ಎಂದು ಹೇಳುತ್ತಿದ್ದಾರೆ. ಹೀಗಾಗಿ ಪ್ರಶ್ನೆ ಮಾಡಿದ ಕಾರ್ಮಿಕರನ್ನು ಹೊರಹಾಕಿದ ಮ್ಯಾನೇಜರ್ ಕಂಪನಿ ಓಳಗೆ ಬಾರದಂತೆ ಬೀಗ ಜಡಿದಿದ್ದಾರೆ. ಇದರಿಂದ ಕಾರ್ಮಿಕರು ಪ್ರತಿಭಟನೆ ನಡೆಸಿದರು.

ಈ ವಿಷಯ ತಿಳಿದು ಸ್ಥಳಕ್ಕೆ ಬಂದ ನಂದಿಗಿರಿಧಾಮ ಪೊಲೀಸರು, ಕಾರ್ಮಿಕರು ಹಾಗೂ ಮ್ಯಾನೇಜರ್ ನಡುವೆ ಮಾತುಕತೆ ನಡೆಸಿದ್ದು, ಸಮಸ್ಯೆ ಬಗೆಹರಿಸಲು ಮುಂದಾಗಿದ್ದಾರೆ. ಆದರೆ ಕಂಪನಿಯಲ್ಲಿ ತಮಿಳುನಾಡಿನವರಿಗೊಂದು ನ್ಯಾಯ ಕನ್ನಡಿಗರಿಗೊಂಡು ನ್ಯಾಯ ಎಂಬಂತೆ, ಅವರಿಗೆ ಮಾತ್ರ ಅಪಾಯಿಂಟ್‍ಮೆಂಟ್ ಲೆಟರ್, ಐಡಿ ಕಾರ್ಡ್, ಪಿಎಫ್ ಎಲ್ಲಾ ಕೊಡುತ್ತಿದ್ದಾರೆ, ನಮಗೆ ಕೊಡುತ್ತಿಲ್ಲ ಎಂದು ದೂರಿದ್ದಾರೆ.

Comments

Leave a Reply

Your email address will not be published. Required fields are marked *