ಚಿತ್ರರಂಗದಿಂದ ಯಾಕೆ ದೂರ ಉಳಿದೆ ಎಂಬುದನ್ನು ನಾಗರಾಜ್ ಕೋಟೆ ಹೇಳ್ತಾರೆ ಓದಿ

ಬೆಂಗಳೂರು: ನಾಗರಾಜ್ ಕೋಟೆ ಸ್ಯಾಂಡಲ್‍ವುಡ್ ಕಂಡ ಅತ್ಯದ್ಭುತ ಹಾಸ್ಯ ಕಲಾವಿದ. ಹಿರಿತೆರೆಯ ಜೊತೆಗೂ ಕಿರುತೆರೆಯಲ್ಲಿ ಗುರುತಿಸಿಕೊಂಡಿದ್ದ ನಾಗರಾಜ್ ಕೋಟೆ ಕೆಲ ವರ್ಷಗಳಿಂದ ಸಿನಿಮಾ ಮತ್ತು ಧಾರಾವಾಹಿಗಳಿಂದ ದೂರು ಉಳಿದುಕೊಂಡಿದ್ದರು. ಈಗ ಮತ್ತೊಮ್ಮೆ ಕಮ್ ಬ್ಯಾಕ್ ಮಾಡಲು ತಯಾರಾಗಿರುವ ನಾಗರಾಜ್ ಅಭಿಮಾನಿಗಳಲ್ಲಿ ಹುಟ್ಟಿಕೊಂಡಿದ್ದ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.

ಪ್ರಶ್ನೆ: ಏನು ಮಾಡ್ತಿದ್ದಾರೆ ನಾಗರಾಜ್ ಕೋಟೆ?
ನಾಗರಾಜ್ ಕೋಟೆ: ಅಲ್ಲೊಂದು ಇಲ್ಲೊಂದು ಸಿನಿಮಾದಲ್ಲಿ ನಟನೆ ಮಾಡ್ತೀನಿ. ಸೀರಿಯಲ್ ಗಳಲ್ಲಿ ನಟಿಸುವುದನ್ನು ಸದ್ಯಕ್ಕೆ ನಿಲ್ಲಿಸಿದ್ದೇನೆ. ಬೆಂಗಳೂರಿನ ಗಿರಿನಗರದಲ್ಲಿ ‘ಬಣ್ಣ ಅಭಿನಯ ಶಾಲೆ’ಯನ್ನು ಆರಂಭಿಸಿದ್ದು, ಮಕ್ಕಳು ಸಹ ಬರುತ್ತಿದ್ದಾರೆ. ನನಗೆ ಗೊತ್ತಿರುವಷ್ಟನ್ನು ಮಕ್ಕಳಿಗೆ ಕಲಿಸುವುದರ ಜೊತೆಗೆ ನಾನು ಅವರಿಂದ ಹೊಸ ಹೊಸ ವಿಷಯಗಳನ್ನು ಕಲಿಯುತ್ತಿದ್ದೇನೆ. ಸದ್ಯ ಲೈಫ್ ಸೂಪರ್ ಆಗಿದೆ.

ಪ್ರಶ್ನೆ: ಯಾಕೆ ಟಿವಿಯಲ್ಲಿ ನಟಿಸುತ್ತಿಲ್ಲ?
ನಾಗರಾಜ್ ಕೋಟೆ: ಕಾಲ ಬದಲಾಗಿದ್ದು ಹೊಸಬರ ಅಲೆ ನುಗ್ಗುತ್ತಿದೆ. ಹಾಗಾಗಿ ನಮ್ಮಂತವರು ಸ್ವಲ್ಪ ರೆಸ್ಟ್ ತೆಗೆದುಕೊಳ್ಳುವಂತೆ ಆಗಿದೆ. ನಮ್ಮ ಕಾಲದಲ್ಲಿ ಯಾವ ಚಾನೆಲ್ ಹಾಕಿದ್ರೂ ನಾನು ಕಾಣಿಸಿಕೊಳ್ಳುತ್ತಿದ್ದೆ. ಆದ್ರೆ ಇವಾಗ ಸ್ವಲ್ಪ ಟ್ರೆಂಡ್ ಚೇಂಜ್ ಆಗಿದೆ. ಹಾಗಂತ ಸುಮ್ಮನೇ ಕೂರುವ ಜಾಯಮಾನ ನಮ್ಮದಲ್ಲ. ಹೇಗೆ ನಿಮ್ಮ ಮುಂದೆ ಕಾಣಿಸಿಕೊಳ್ಳಬೇಕು, ಹೇಗೆ ನಿಮ್ಮನ್ನ ತಲುಪಬೇಕು ಅಂತಾ ಪ್ಲಾನ್ ಮಾಡಿದ್ದೇನೆ.

ಪ್ರಶ್ನೆ: ನಾಗರಾಜ್ ಕೋಟೆಯವರ ಪ್ಲಾನ್ ಏನು?
ನಾಗರಾಜ್ ಕೋಟೆ: ಹಿಂದೆ ಸಿನಿಮಾ ನೋಡಬೇಕೆಂದ್ರೆ ಚಿತ್ರಮಂದಿರಗಳಿಗೆ ಹೋಗಬೇಕಿತ್ತು. ಮನರಂಜನೆಗಾಗಿ ವೇದಿಕೆಗಳಿಗೆ ಹತ್ರ ಜನರು ಹೋಗಬೇಕಿತ್ತು. ಆದ್ರೆ ಇಂದು ಕಾಲ ಬದಲಾಗಿದ್ದು, ಕೈಯಲ್ಲಿರುವ ಮೊಬೈಲ್ ನಲ್ಲಿ ಇಡೀ ಪ್ರಪಂಚವನ್ನ ನೋಡಬಹುದಾಗಿದೆ. ಈಗ ನಾನು ನಾಗರಾಜ್ ಕೋಟೆ ಎಂಬ ಯೂಟ್ಯೂಬ್ ಚಾನೆಲ್ ಕ್ರಿಯೇಟ್ ಮಾಡಿದ್ದು, ನಿಮ್ಮ ಕೈಯಲ್ಲಿರುವ ಮೊಬೈಲ್ ನಲ್ಲಿ ಬರುತ್ತೇನೆ.

ಪ್ರಶ್ನೆ: ಆರಂಭ ಯಾವಾಗ? ಕಾರ್ಯಕ್ರಮದ ಹೆಸರೇನು?
ನಾಗರಾಜ್ ಕೋಟೆ: ಏಪ್ರಿಲ್ 18ರಿಂದ ವಿವಿಧ ವಿಚಾರಗಳೊಂದಿಗೆ ‘ಕೋಟೆ ಪಂಚ್’ ಕಾರ್ಯಕ್ರಮದ ಮೂಲಕ ಎಲ್ಲರನ್ನು ನಗಿಸಲು ನಾಗರಾಜ ಕೋಟೆ ಬರಲಿದ್ದಾರೆ.

ನಾಗರಾಜ್ ಕೋಟೆಯವರ ಹಾಸ್ಯ ಕಾರ್ಯಕ್ರಮಕ್ಕೆ ಸಂಗೀತ ನಿರ್ದೇಶಕ ವಿ.ಮನೋಹರ್, ನಟ ಶರತ್ ಲೋಹಿತಾಶ್ವ ಮತ್ತು ನಟಿ ರೂಪಿಕಾ ಸೇರಿದಂತೆ ಹಲವು ಗಣ್ಯರು ಶುಭ ಹಾರೈಸಿದ್ದಾರೆ.

Comments

Leave a Reply

Your email address will not be published. Required fields are marked *