ಕಗ್ಗಂಟಾಗಿದೆ ಜೆಡಿಎಸ್ ನೂತನ ಸಾರಥಿಯ ನೇಮಕ

ಬೆಂಗಳೂರು: ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಎಚ್ ವಿಶ್ವನಾಥ್ ಅವರು ಈಗಾಗಲೇ ರಾಜೀನಾಮೆ ಸಲ್ಲಿಸಿದ್ದು, ಇದೀಗ ಜೆಡಿಎಸ್‍ನ ಹೊಸ ಸಾರಥಿ ಆಯ್ಕೆ ಮಾಡುವಲ್ಲಿ ಪಕ್ಷ ನಿರತವಾಗಿದೆ.

ರಾಜ್ಯಾಧ್ಯಕ್ಷ ಸ್ಥಾನಕ್ಕಾಗಿ ಅಪ್ಪ-ಮಗನ ನಡುವೆ ಕೋಲ್ಡ್ ವಾರ್ ನಡೆಯುತ್ತಿದೆ. ತಂದೆ ದೊಡ್ಡಗೌಡ್ರು ಒಬ್ಬರ ಪರ ಬ್ಯಾಟಿಂಗ್ ಮಾಡಿದರೆ ಸಿಎಂಗೆ ಮತ್ತೊಬ್ಬರ ಮೇಲೆ ಪ್ರೀತಿ. ಈ ಹಿನ್ನೆಲೆಯಲ್ಲಿ ಪಕ್ಷದ ಹೊಸ ಸಾರಥಿ ನೇಮಕ ಮಾಡಲು ವರಿಷ್ಠರಿಗೆ ಕಗ್ಗಂಟಾಗಿದೆ ಎಂಬುದಾಗಿ ಪಕ್ಷದ ಮೂಲಗಳು ತಿಳಿಸಿವೆ.

ಪಕ್ಷದ ವರಿಷ್ಠ ದೇವೇಗೌಡ, ವಿಶ್ವನಾಥ್ ಸೇರಿದಂತೆ ದಳದ ಬಹುತೇಕ ನಾಯಕರಿಗೆ ಹಿಂದುಳಿದ ವರ್ಗದ ನಾಯಕ ಮಧು ಬಂಗಾರಪ್ಪ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಬೇಕೆಂಬ ಹಂಬಲವಿದೆ. ಆದರೆ ಸಚಿವ ಸ್ಥಾನ ವಂಚಿತ ಅಲ್ಪಸಂಖ್ಯಾತ ನಾಯಕ ಫಾರೂಖ್ ಅವರನ್ನು ಮಾಡಬೇಕು ಎಂಬುವುದು ಸಿಎಂ ವಾದವಾಗಿದೆ. ಹೀಗಾಗಿ ದೇವೇಗೌಡರು ಯಾರನ್ನು ರಾಜ್ಯಾಧ್ಯಕ್ಷ ಮಾಡೋದು ಅನ್ನೋ ಚಿಂತೆಯಲ್ಲಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

ಇತ್ತೀಚೆಗೆ ನಡೆದ ಸಭೆಯಲ್ಲಿ ರಾಜ್ಯಾಧ್ಯಕ್ಷ ಸ್ಥಾನದ ಬಗ್ಗೆ ದೇವೇಗೌಡರು ಮಧು ಬಂಗಾರಪ್ಪ ಅವರ ಅಭಿಪ್ರಾಯ ಕೇಳಿದ್ದರು. ಈ ವೇಳೆ ಮಧು ನಿಮ್ಮ ಮಾತಿನಂತೆ ನಡೆಯುತ್ತೇನೆ ಎಂದಿದ್ದರು. ವಿಶ್ವನಾಥ್ ಕೂಡ ಬಹಿರಂಗವಾಗಿಯೇ ಮಧು ಬಂಗಾರಪ್ಪ ಪರ ಬ್ಯಾಟಿಂಗ್ ಮಾಡಿದ್ದರು. ಆದರೆ ಸಿಎಂಗೆ ಫಾರೂಖ್ ಮೇಲಿನ ಪ್ರೀತಿಗೆ ರಾಜ್ಯಾಧ್ಯಕ್ಷರ ಆಯ್ಕೆಯಲ್ಲಿ ಗೊಂದಲವುಂಟಾಗಿದೆ. ಒಟ್ಟಿನಲ್ಲಿ ದೇವೇಗೌಡರು ಪಕ್ಷ ಸಂಘಟನೆ, ಮುಂಬರುವ ಚುನಾವಣೆ ದೃಷ್ಟಿ ಇಟ್ಟುಕೊಂಡು ರಾಜ್ಯಾಧ್ಯಕ್ಷರನ್ನ ನೇಮಕ ಮಾಡಲಿದ್ದಾರೆ ಎನ್ನಲಾಗಿದೆ.

ಇತ್ತ ಇಬ್ಬರ ಜಗದಲ್ಲಿ ಮೂರನೆಯವರಿಗೆ ಲಾಭ ಎಂಬಂತೆ ದಲಿತ ಶಾಸಕ ಎಚ್.ಕೆ ಕುಮಾರಸ್ವಾಮಿ ಹೆಸರು ರೇಸ್‍ನಲ್ಲಿದೆ. ಒಟ್ಟಿನಲ್ಲಿ ಜೆಡಿಎಸ್‍ಗೆ ನೂತನ ಸಾರಥಿ ಯಾರಾಗ್ತಾರೆ ಅನ್ನೋದು ಸದ್ಯದ ಕುತೂಹಲವಾಗಿದ್ದು, ಇನ್ನೆರಡು ದಿನಗಳಲ್ಲಿ ರಾಜ್ಯಾಧ್ಯಕ್ಷ ನೇಮಕ ಬಹುತೇಕ ಖಚಿತವಾಗಲಿದೆ.

Comments

Leave a Reply

Your email address will not be published. Required fields are marked *