ಗ್ರಾಮವಾಸ್ತವ್ಯಕ್ಕೂ ಮುನ್ನವೇ ಬೀಳುತ್ತೆ ಮೈತ್ರಿ ಸರ್ಕಾರ : ರೇಣುಕಾಚಾರ್ಯ

– ಎಚ್‍ಡಿಕೆ, ಡಿಕೆಶಿ ತಲೆ ಕೆಳಗೆ ಮಾಡಿ ನಿಂತ್ರೂ ಸರ್ಕಾರ ಉಳಿಯಲ್ಲ

ದಾವಣಗೆರೆ: ಸಿಎಂ ಕುಮಾರಸ್ವಾಮಿ ಅವರ ಗ್ರಾಮವಾಸ್ತವ್ಯಕ್ಕೂ ಮುನ್ನವೇ ಮೈತ್ರಿ ಸರ್ಕಾರ ಬೀಳುತ್ತದೆ ಎಂದು ಶಾಸಕ ಎಂ.ಪಿ.ರೇಣುಕಾಚಾರ್ಯ ಹೊಸ ಬಾಂಬ್ ಸಿಡಿಸಿದ್ದಾರೆ.

ನಗರದಲ್ಲಿ ಮಾತನಾಡಿದ ಶಾಸಕರು, ಸಿಎಂ ಕುಮಾರಸ್ವಾಮಿ, ಡಿಸಿಎಂ ಜಿ.ಪರಮೇಶ್ವರ್, ಸಚಿವರಾದ ಡಿಕೆ ಶಿವಕುಮಾರ್ ಹಾಗೂ ಎಚ್.ಡಿ.ರೇವಣ್ಣ ತಲೆ ಕೆಳಗೆ ಮಾಡಿ ನಿಂತರೂ ಮೈತ್ರಿ ಸರ್ಕಾರ ಉಳಿಯಲ್ಲ. ಸಮ್ಮಿಶ್ರ ಸರ್ಕಾರದ ಆಯಸ್ಸು ಮುಗಿಯುತ್ತಿದೆ. ಈ ಸಂಬಂಧ ಕಾಂಗ್ರೆಸ್ ಶಾಸಕರೇ ನನ್ನ ಜೊತೆಗೆ ಮುಕ್ತವಾಗಿ ಮಾತಾಡಿದ್ದಾರೆ. ನಾನು ಅವತ್ತು ಹೇಳಿದ್ದೆ. ಈಗಲೂ ಹೇಳುತ್ತೇನೆ. ಸಮ್ಮಿಶ್ರ ಸರ್ಕಾರ ಪತನ ಗ್ಯಾರಂಟಿ ಎಂದು ಹೇಳಿದರು.

ಸಚಿವ ಎಚ್.ಡಿ.ರೇವಣ್ಣ ಅವರು ಸೂಪರ್ ಸಿಎಂ. ಬೆಂಗಳೂರು ಉಸ್ತುವಾರಿ ಸಚಿವರಿಗೆ ಗೊತ್ತಿಲ್ಲದೆ ಎಚ್.ಡಿ.ರೇವಣ್ಣ 25 ಸಾವಿರ ಕೋಟಿ ರೂ. ವೆಚ್ಚದ ರಸ್ತೆ ನಿರ್ಮಾಣದ ಟೆಂಡರ್ ಕರೆಯುತ್ತಾರೆ. ಮೆಟ್ರೋ ಖಾತೆಯನ್ನು ಸಿಎಂ ಕುಮಾರಸ್ವಾಮಿ ನೋಡಿಕೊಂಡರೆ ಉಳಿದ ರಸ್ತೆ ಹೆದ್ದಾರಿ ಕಾಮಗಾರಿಗಳನ್ನು ರೇವಣ್ಣ ನೋಡಿಕೊಳ್ಳುತ್ತಾರೆ. ಡಿಸಿಎಂ ಪರಮೇಶ್ವರ್ ಅವರು ನಾಮಕಾವಸ್ತೆ ಎಂದು ಆರೋಪಿಸಿದರು.

ಸಿಎಂ ಕುಮಾರಸ್ವಾಮಿ ಇಷ್ಟು ದಿನ ತಾಜ್ ವೆಸ್ಟೆಂಡ್ ಹೋಟೆಲ್‍ನ ಐಷಾರಾಮಿ ಜೀವನದಲ್ಲಿದ್ದರು. ಈಗ ಗ್ರಾಮವಾಸ್ತವ್ಯ ನಾಟಕವಾಡುತ್ತಿದ್ದಾರೆ. ಸಿಎಂ ಕುಮಾರಸ್ವಾಮಿ ಅವರು ಜೆಡಿಎಸ್ ಶಾಸಕರಿರುವ ಕ್ಷೇತ್ರದಲ್ಲಿ 1 ಸಾವಿರ ಕೋಟಿ ರೂ. ಅನುದಾನ ನೀಡುತ್ತಾರೆ. ಕಾಂಗ್ರೆಸ್ ಶಾಸಕರಿರುವ ಕ್ಷೇತ್ರದಲ್ಲಿ 50 ಕೋಟಿ ರೂ. ಅನುದಾನ ಸಿಗುತ್ತಿಲ್ಲ ಎಂದು ಹೇಳಿದರು.

Comments

Leave a Reply

Your email address will not be published. Required fields are marked *