ಅನ್ನ ಭಾಗ್ಯದ ಬೆನ್ನಲ್ಲೇ ತಾಯಿ ಭಾಗ್ಯ ಯೋಜನೆಗೂ ಕತ್ತರಿ!

ಕಲಬುರಗಿ: ಅನ್ನ ಭಾಗ್ಯಕ್ಕೆ ಕತ್ತರಿ ಹಾಕಿ ಬಡವರ ಕೆಂಗಣ್ಣಿಗೆ ಗುರಿಯಾಗಿದ್ದ ಸಿಎಂ ಕುಮಾರಸ್ವಾಮಿ, ಇದೀಗ ತಾಯಿ ಭಾಗ್ಯ ಯೋಜನೆಗೂ ಕತ್ತರಿ ಹಾಕುವ ಮೂಲಕ ಮತ್ತೆ ಬಡವರ ಪಾಲಿಗೆ ವಿಲನ್ ಆಗುತ್ತಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.

ನಮ್ಮ ರಾಜ್ಯದ ಕಡುಬಡವರಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಹೆರಿಗೆ ಸೌಲಭ್ಯಕ್ಕಾಗಿ, 2008-09ರಲ್ಲಿ ಅಂದಿನ ಸಿಎಂ ಬಿ.ಎಸ್ ಯಡಿಯೂರಪ್ಪ ಅವರ ಸರ್ಕಾರ ತಾಯಿ ಭಾಗ್ಯ ಯೋಜನೆ ಜಾರಿಗೆ ತಂದಿತ್ತು. ಈ ಮೂಲಕ ರಾಜ್ಯದ ನೂರಾರು ಖಾಸಗಿ ಆಸ್ಪತ್ರೆಗಳ ಜೊತೆ ಒಡಬಂಡಿಕೆ ಮಾಡಿಕೊಂಡಿತ್ತು. ಈ ಮೂಲಕ ಬಿಪಿಎಲ್ ಕಾರ್ಡ್ ಹೊಂದಿದ ಗರ್ಭಿಣಿಯರು ಆ ಖಾಸಗಿ ಆಸ್ಪತ್ರೆಗಳಲ್ಲಿ ಅತ್ಯಂತ ಕಡಿಮೆ ದರದಲ್ಲಿ ಹೆರಿಗೆ ಮಾಡಿಸಿಕೊಳ್ಳುತ್ತಿದ್ದರು. ಆದರೆ ಇದೀಗ ಸಿಎಂ ಕುಮಾರಸ್ವಾಮಿ ಸರ್ಕಾರ, ಆ ಯೋಜನೆಗೆ ಇತಿಶ್ರೀ ಹಾಡಿ ಬಡವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಕಲಬುರಗಿಯ ಬಸವೇಶ್ವರ, ಸಂಗಮೇಶ್ವರ ಮತ್ತು ಕೆಬಿಎನ್ ಆಸ್ಪತ್ರೆ ಸೇರಿದಂತೆ, ರಾಜ್ಯದ ಬಹುತೇಕ ಖಾಸಗಿ ಆಸ್ಪತ್ರೆಗಳಲ್ಲಿ ಸಾವಿರಾರು ಮಹಿಳೆಯರು ಕಡಿಮೆ ದರ ಅಂತಾ ಖಾಸಗಿ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಿಕೊಂಡಿದ್ದಾರೆ. ಆದರೆ ಸರ್ಕಾರದ ನೂತನ ಆದೇಶದಿಂದ ಇದೀಗ ಆ ಬಡ ಕುಟುಂಬಗಳು ಸಂಕಷ್ಟದಲ್ಲಿ ಸಿಲುಕಿವೆ. ದುರಂತ ಅಂದರೆ ಏಪ್ರಿಲ್ 2018ರಿಂದ ಇಲ್ಲಿಯವರೆಗೆ ಸಲ್ಲಿಸಿದ ಬಿಲ್ಲುಗಳಿಗೂ ನಮಗೂ ಸಂಬಂಧವಿಲ್ಲ ಅಂತಾ ಆದೇಶ ಮಾಡಿದ್ದಾರೆ.

ಈ ವಿಚಾರ ಇದೀಗ ರಾಜ್ಯದ ಬಡ ಜನರ ಕೆಂಗಣ್ಣಿಗೆ ಗುರಿಯಾಗಿದೆ ಎಂದು ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ದಿವ್ಯಾ ಹಾಗರಗಿ ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *