ಸಮ್ಮಿಶ್ರ ಸರ್ಕಾರಕ್ಕೆ ಏನು ಆಗಲ್ಲ, ಸೇಫಾಗಿದೆ: ಡಿಕೆಶಿ

ಬೆಂಗಳೂರು: ಸಮ್ಮಿಶ್ರ ಸರ್ಕಾರ ಸೇಫಾಗಿದೆ. ಶಾಸಕರ ರಾಜೀನಾಮೆಯಿಂದ ನಾನಾಗಲಿ, ಕಾಂಗ್ರೆಸ್ ಆಗಲಿ ಭಯಪಡುವುದಿಲ್ಲ ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಮ್ಮಿಶ್ರ ಸರ್ಕಾರ ಸೇಫಾಗಿದೆ. ಅತೃಪ್ತ ಶಾಸಕರ ಜತೆ ಕಳೆದ ದಿನವೂ ಮಾತನಾಡಿದ್ದೆ. ಇಂದು ಬೆಳಗ್ಗೆಯೂ ಮಾತನಾಡಿದ್ದೇನೆ. ಅವರ ಬೇಡಿಕೆಗಳನ್ನು ನನ್ನ ಬಳಿ ತಿಳಿಸಿದ್ದಾರೆ ಎಂದು ಹೇಳಿದ್ದಾರೆ.

ನಾನು ಮುಂಬೈಗೆ ಹೋಗಬೇಕಿತ್ತು. ಆದರೆ ಹೋಗಲು ಸಾಧ್ಯವಾಗಿಲ್ಲ. ಅಷ್ಟರಲ್ಲೇ ಅವರನ್ನ ಮುಂಬೈನಿಂದ ಶಿಫ್ಟ್ ಮಾಡುತ್ತಿದ್ದಾರೆ ಎಂದು ತಿಳಿಯಿತು. ಯಡಿಯೂರಪ್ಪ ನಮಗೂ ರಾಜೀನಾಮೆಗೂ ಸಂಬಂಧವಿಲ್ಲ ಎಂದು ಹೇಳುತ್ತಾರೆ. ಆದರೆ ರಾಜನಾಥ್ ಸಿಂಗ್ ಹೇಳಿಕೆ ನೋಡಿದರೆ ಬಿಜೆಪಿಯೇ ಬೆಂಬಲ ನೀಡುತ್ತಿದೆ ಎನ್ನುವುದು ಗೊತ್ತಾಗುತ್ತದೆ. ಬಿಎಸ್‍ವೈ ಸಹಾಯಕನೇ ಖುದ್ದು ಶಾಸಕರನ್ನ ಕರೆದುಕೊಂಡು ಹೋಗುವ ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ಏನು ಹೇಳಬೇಕು ಎಂದು ಶಿವಕುಮಾರ್ ಪ್ರಶ್ನೆ ಮಾಡಿದರು.

ಸರ್ಕಾರಕ್ಕೆ ಏನೂ ಆಗೋದಿಲ್ಲ. ಎಲ್ಲ ಸಮಸ್ಯೆಗಳನ್ನು ಸಿಎಲ್‍ಪಿ ಸಭೆಯಲ್ಲಿ ಚರ್ಚೆ ಮಾಡುತ್ತೇವೆ. ಸ್ಪೀಕರ್ ಸೂಕ್ತ ಕ್ರಮ ಕೈಗೊಳ್ಳುತ್ತಾರೆ. ಶಾಸಕರ ರಾಜೀನಾಮೆಯಿಂದ ಕಾಂಗ್ರೆಸ್ ಭಯಪಡುವುದಿಲ್ಲ, ನಾನು ಭಯಪಡಲ್ಲ. ಸಮ್ಮಿಶ್ರ ಸರ್ಕಾರದ ಸುಭದ್ರವಾಗಿರುತ್ತದೆ ನನಗೆ ವಿಶ್ವಾಸವಿದೆ ಎಂದು ಡಿಕೆಶಿ ಹೇಳಿದರು.

Comments

Leave a Reply

Your email address will not be published. Required fields are marked *