ಶಾರ್ಟ್‌ಕಟ್‌ನಲ್ಲಿ ಹೋಗೋಣ- ಮಂಡ್ಯ ಎಸ್‍ಪಿಗೆ ಗದರಿದ ಸಿಎಂ

ಮಂಡ್ಯ: ಮುಖ್ಯಮಂತ್ರಿಯಾದ ನಂತರ ಮೊದಲ ದಿನವೇ ಬಿ.ಎಸ್.ಯಡಿಯೂರಪ್ಪ ಅವರು ತಮ್ಮ ಗ್ರಾಮಕ್ಕೆ ಹೋಗಿದ್ದಾರೆ. ಈ ವೇಳೆ ಯಡಿಯೂರಪ್ಪ ಅವರು ಶಾರ್ಟ್‌ಕಟ್‌ನಲ್ಲಿ ಹೋಗೋಣ ರೀ ಎಂದು ಮಂಡ್ಯ ಎಸ್‍ಪಿ ಶಿವಪ್ರಕಾಶ್ ದೇವರಾಜ್‍ಗೆ ಗದರಿದ್ದಾರೆ.

ಪೊಲೀಸರು ತೂಬಿನಕೆರೆಯಿಂದ ಬೆಂಗಳೂರು ಮೈಸೂರು ರಸ್ತೆ ಮೂಲಕ ಕೆ.ಆರ್.ಪೇಟೆ ರಸ್ತೆಯಲ್ಲಿ ಸಿಎಂ ಯಡಿಯೂರಪ್ಪ ಅವರ ಪ್ರಯಾಣಕ್ಕೆ ಮಾರ್ಗವನ್ನು ನಿಗದಿ ಮಾಡಿದ್ದರು. ಆಗ ಯಡಿಯೂರಪ್ಪ ಅವರು, ಬೂಕನಕೆರೆಗೆ ಶಾರ್ಟ್‌ಕಟ್‌ನಲ್ಲಿ ಹೋಗೋಣ ರೀ ಎಂದು ಮಂಡ್ಯ ಎಸ್‍ಪಿ ಶಿವಪ್ರಕಾಶ್ ಅವರಿಗೆ ಗದರಿದ್ದಾರೆ.

ನಂತರ ಯಡಿಯೂರಪ್ಪ ಅವರನ್ನು ಹೆಲಿಪ್ಯಾಡ್‍ನಿಂದ ಪಾಂಡವಪುರ ಮಾರ್ಗವಾಗಿ ಕೆ.ಆರ್ ಪೇಟೆ ರಸ್ತೆ ಮೂಲಕ ಬೂಕನಕೆರೆಗೆ ಕರೆದುಕೊಂಡು ಹೋಗಿದ್ದಾರೆ. ಇದು ಹತ್ತಿರ ಮಾರ್ಗವಾಗಿರುವುದರಿಂದ ಈ ಮಾರ್ಗದಲ್ಲಿ ಹೋಗೋಣ ಎಂದು ಸಿಎಂ ಬಿಎಸ್‍ವೈ ಹೋಗಿದ್ದಾರೆ.

ಮುಖ್ಯಮಂತ್ರಿ ಯಡಿಯೂರಪ್ಪ ಸ್ವಗ್ರಾಮ ಬೂಕನಕೆರೆ ಗ್ರಾಮಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಹಬ್ಬದ ವಾತಾವರಣವಿದ್ದು, ಗ್ರಾಮವನ್ನು ತಳಿರು ತೋರಣದಿಂದ ಅಲಂಕಾರ ಮಾಡಲಾಗಿದೆ. ಬೂಕನಕೆರೆ ಗ್ರಾಮಕ್ಕೆ ಆಗಮಿಸಿದ ನಂತರ ಯಡಿಯೂರಪ್ಪ ಗ್ರಾಮದೇವತೆ ಗೋಗಾಲಮ್ಮ ದೇವರ ದರ್ಶನ ಪಡೆಯಲಿದ್ದಾರೆ. ಹೀಗಾಗಿ ದೇವಸ್ಥಾನದ ಮುಂದೆ ಹಸಿರು ಚಪ್ಪರ ಹಾಕಿ, ಹೂವಿನ ಅಲಂಕಾರ ಮಾಡಲಾಗಿದೆ.

ದೇವರಿಗೆ ವಿಶೇಷ ಪುಷ್ಪಾಲಂಕಾರ ಮಾಡಲಾಗಿದೆ. ದೇವಾಲಯದ ಬಳಿ ಮತ್ತು ಸುತ್ತಮುತ್ತ ಬ್ಯಾರಿಕೇಡ್ ಹಾಕಲಾಗಿದ್ದು, ಸುಮಾರು 300ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಭದ್ರತೆಗೆ ನಿಯೋಜನೆಗೊಂಡಿದ್ದಾರೆ.

Comments

Leave a Reply

Your email address will not be published. Required fields are marked *