ಬಿಜೆಪಿ ಹೈಕಮಾಂಡ್‍ಗೆ ರಿವರ್ಸ್ ಆಪರೇಷನ್ ಭೀತಿ

ಬೆಂಗಳೂರು: ಕರ್ನಾಟಕದಲ್ಲಿ ಕಮಲ ಅರಳಿದರೂ ಹೈಕಮಾಂಡ್‍ಗೆ ಟೆನ್ಷನ್ ಮಾತ್ರ ತಪ್ಪಿಲ್ಲ. ಯಾಕೆಂದರೆ ಬಿಜೆಪಿ ಹೈಕಮಾಂಡ್‍ಗೆ ರಿವರ್ಸ್ ಆಪರೇಷನ್ ಭೀತಿ ಕಾಡುತ್ತಿದೆ ಎನ್ನಲಾಗುತ್ತಿದೆ.

ಬಿಜೆಪಿಯಿಂದ ಸ್ವಲ್ಪ ಎಡವಟ್ಟಾದರೂ 8-12 ಬಿಜೆಪಿ ಶಾಸಕರು ಕಾಂಗ್ರೆಸ್‍ಗೆ ಸೇರುತ್ತಾರೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಬಗ್ಗೆ ಬಿಜೆಪಿ ಹೈಕಮಾಂಡ್ ಕೈ ಗುಪ್ತಚರ ಇಲಾಖೆಯ ಸಿಕ್ರೇಟ್ ರಿಪೋರ್ಟ್ ತಲುಪಿದೆ ಎಂದು ತಿಳಿದು ಬಂದಿದೆ.

ಕೇಂದ್ರ ಗೃಹ ಸಚಿವ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಕೈಗೆ ಕೇಂದ್ರ ಗುಪ್ತಚರ ಇಲಾಖೆ ರಿಪೊರ್ಟ್ ಸೇರಿದೆ. ಒಂದೆಡೆ ಬಿಜೆಪಿಗೆ ಸಚಿವ ಸಂಪುಟ ಹಂಚಿಕೆ ವಿಚಾರ ಕಗ್ಗಂಟಾಗಿದೆ. ಜಾತಿ, ಪ್ರದೇಶ, ಹಿರಿತನ ಲೆಕ್ಕಚಾರದಲ್ಲಿ ಸಚಿವ ಸ್ಥಾನ ಹಂಚಿಕೆ ಸ್ವಲ್ಪ ವ್ಯತಾಸವಾದರೂ ಕಾಂಗ್ರೆಸ್ ಸೇರಲು ಹಲವು ಶಾಸಕರು ಸಿದ್ಧರಾಗಿದ್ದಾರೆ ಎಂದು ಬಿಜೆಪಿ ಆಪ್ತ ಮೂಲಗಳಿಂದ ಪಬ್ಲಿಕ್ ಟಿವಿಗೆ ಮಾಹಿತಿ ಲಭ್ಯವಾಗಿದೆ.

ಸಚಿವ ಸ್ಥಾನ ಹಂಚಿಕೆ ಮೇಲೆ ಬಿಜೆಪಿ ಶಾಸಕರ ಕಣ್ಣು ಹಾಕಿದ್ದಾರೆ. ಹೀಗಾಗಿ ಸಚಿವ ಸ್ಥಾನ ಹಂಚಿಕೆ ಬಳಿಕ ಬಿಜೆಪಿಯಲ್ಲಿ ಭಿನ್ನಮತ ಭುಗಿಲೇಳುವ ಸಾಧ್ಯತೆ ಇದೆ. ಇದರಿಂದ ಎಚ್ಚರಿಕೆ ಹೆಜ್ಜೆ ಇಡಲು ಬಿಜೆಪಿ ಹೈಕಮಾಂಡ್ ತಿರ್ಮಾನಿಸಿದೆ. ಈಗಾಗಲೇ ಸಿಎಂ ಯಡಿಯೂರಪ್ಪ ಎರಡು ಸಲ ದೆಹಲಿ ಪ್ರವಾಸ ರದ್ದು ಮಾಡಿದ್ದು, ಅಳೆದು ತೂಗಿ ಸಚಿವರ ಪಟ್ಟಿಯನ್ನು ತಯಾರು ಮಾಡುತ್ತಿದ್ದಾರೆ.

ರಿವರ್ಸ್ ಆಪರೇಷನ್‍ಗೆ ಆಸ್ಪದ ನೀಡದಂತೆ ಆಯ್ಕೆ ಮಾಡಲು ಸಿಎಂ ಬಿಎಸ್‍ವೈಗೆ ಅಮಿತ್ ಶಾ ಸೂಚನೆ ನೀಡಿದ್ದಾರೆ. ಈ ಮಧ್ಯೆ ಸೀಮಿತವಾಗಿರುವ ಸ್ಥಾನಗಳಲ್ಲಿ ಅತೃಪ್ತ ಶಾಸಕರಿಗೂ ಕೆಲವು ಸ್ಥಾನವನ್ನು ಕೊಡಬೇಕಾಗಿದೆ. ಹೀಗಾಗಿ ಬಿಜೆಪಿಗೆ ಕನಿಷ್ಠ ಸ್ಥಾನ ಸಿಗುವುದರಿಂದ ಭಿನ್ನಮತ ಏಳುವ ಸಾಧ್ಯತೆ ಇದೆ. ಈ ಹಿಂದೆಯೂ ಕೂಡ ಮೈತ್ರಿ ಸರ್ಕಾರದಲ್ಲಿ ಸಚಿವ ಸಂಪುಟ ರಚನೆ ವೇಳೆ ಭಿನ್ನಮತ ಎದ್ದಿತ್ತು. ಹೀಗಾಗಿ ದೋಸ್ತಿ ಸರ್ಕಾರದಲ್ಲಿ ಉಂಟಾಗಿದ್ದ ಭಿನ್ನಮತ ಬಿಜೆಪಿಯಲ್ಲಿ ಉಂಟಾಗದಂತೆ ಬಿಜೆಪಿ ಹೈಕಮಾಂಡ್ ತೀರ್ಮಾನಿಸಿದೆ.

Comments

Leave a Reply

Your email address will not be published. Required fields are marked *