ಕಿರಣ್ ಬೇಡಿ ನಿವಾಸದ ಎದುರೇ ಮಲಗಿದ ಪುದುಚೇರಿ ಸಿಎಂ

– ಸಿಎಂ ವರ್ಸಸ್ ಕಿರಣ್‍ಬೇಡಿ

ಪುದುಚೇರಿ: ದೆಹಲಿ ಮತ್ತು ಪಶ್ಚಿಮ ಬಂಗಾಳದ ಮಾರ್ಗದಲ್ಲಿ ಪುದುಚೇರಿ ಸಿಎಂ ವಿ.ನಾರಾಯಾಣಸ್ವಾಮಿ ಉಪ ರಾಜ್ಯಪಾಲರ ನಿವಾಸ ಎದುರೇ ಅಹೋರಾತ್ರಿ ಪ್ರತಿಭಟನೆ ನಡೆಸಿದ್ದಾರೆ. ಉಪ ರಾಜ್ಯಪಾಲರಾದ ಕಿರಣ್ ಬೇಡಿ, ಸರ್ಕಾರದ 1993ರ ವ್ಯಾಪಾರಿ ನಿಯಮದ ವಿರುದ್ಧ ಕೆಲಸ ಮಾಡುತ್ತಿದ್ದಾರೆ ಎಂದು ಸಿಎಂ ನಾರಾಯಣಸ್ವಾಮಿ ಆರೋಪಿಸಿದ್ದಾರೆ.

ಸಿಎಂ ಜೊತೆಯಾಗಿ ಸಚಿವರು, ಶಾಸಕರು ಮತ್ತು ಕಾಂಗ್ರೆಸ್ ನಾಯಕರು ಉಪ ರಾಜ್ಯಪಾಲರ ವಿರುದ್ಧದ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಪ್ರತಿಭಟನಾನಿರತ ಜನಪ್ರತಿನಿಧಿಗಳು ಕಪ್ಪು ಶರ್ಟ್ ಧರಿಸುವ ಮೂಲಕ ಆಕ್ರೋಶ ಹೊರಹಾಕಿ, ಇಡೀ ರಾತ್ರಿ ಕಿರಣ್ ಬೇಡಿ ನಿವಾಸದ ರಸ್ತೆಯಲ್ಲಿ ಮಲಗಿದರು. ಸರ್ಕಾರದ ಆಡಳಿತದಲ್ಲಿ ಕಿರಣ್ ಬೇಡಿ ಹಸ್ತಕ್ಷೇಪ ಮಾಡ್ತಿದ್ದಾರೆ. ಸರ್ಕಾರದ ಅಭಿವೃದ್ಧಿ ಪರ ಯೋಜನೆಗಳಿಗೆ ಸಹಿ ಹಾಕದೇ ತಡೆ ನೀಡುತ್ತಿದ್ದಾರೆ ಎಂದು ಪುದುಚೇರಿ ಸರ್ಕಾರ ಆರೋಪ ಮಾಡಿದೆ.

ಜನತೆಗಾಗಿ ಸರ್ಕಾರ ಉಚಿತವಾಗಿ ನೀಡಲು ನಿರ್ಧರಿಸುವ ಅಕ್ಕಿಯ ಯೋಜನೆಯನ್ನು ಕಿರಣ್‍ಬೇಡಿ ತಡೆಹಿಡಿದಿದ್ದಾರೆ. ಈ ಯೋಜನೆಯ ಕಡತವನ್ನು ಸಹಿ ಮಾಡದೇ ಸರ್ಕಾರಕ್ಕೆ ಹಿಂದಿರುಗಿಸಿದ್ದಾರೆ. ಇದೇ ರೀತಿ 36 ಯೋಜನೆಗಳನ್ನು ತಡೆಹಿಡಿದ್ದಿದ್ದಾರೆ. ನಮ್ಮ ಸರ್ಕಾರದ ಅಭಿವೃದ್ಧಿ ಯೋಜನೆಗಳನ್ನು ತಡೆಹಿಡಿಯುವ ಅಧಿಕಾರವನ್ನು ಕಿರಣ್ ಬೇಡಿ ಅವರಿಗೆ ನೀಡಿದ್ಯಾರು ಎಂದು ಸಿಎಂ ಪ್ರಶ್ನಿಸಿದ್ದಾರೆ.

ಸಿಎಂಗೆ ತಾಳ್ಮೆ ಬೇಕಿತ್ತು: ಮುಖ್ಯಮಂತ್ರಿ ವಿ.ನಾರಾಯಾಣಸ್ವಾಮಿ ಅವರ ಆರೋಪಗಳಿಗೆ ಪ್ರತಿಕ್ರಿಯೆ ನೀಡಿರುವ ಕಿರಣ್‍ಬೇಡಿ, ಫೆಬ್ರವರಿ 21ರಂದು ಈ ಸಂಬಂಧ ಮಾತುಕತೆ ನಡೆಸಲು ಸಿಎಂ ಅವರನ್ನು ರಾಜಭವನಕ್ಕೆ ಆಹ್ವಾನಿಸಲಾಗಿತ್ತು. ರಾಜಭವನದಿಂದ ಉತ್ತರ ಬರುವ ಮೊದಲೇ ನಮ್ಮ ನಿವಾಸಕ್ಕೆ ಸಿಎಂ ಆತುರರಾಗಿ ಆಗಮಿಸಿದ್ದು ನಮಗೆ ನೋವಾಗಿದೆ. ಈ ರೀತಿ ಪ್ರತಿಭಟನೆ ಕುಳಿತುಕೊಳ್ಳುವುದು ಮುಖ್ಯಮಂತ್ರಿಗಳಿಗೆ ಶೋಭೆ ತರುವುದಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *